ಪೊಲೀಸರ ವಿರೋಧದ ನಡುವೆಯೂ ದ್ವಜಕಟ್ಟೆ ಮರು ನಿರ್ಮಾಣ
ಭಟ್ಕಳ: ಅನುಮತಿ ಇಲ್ಲದೆ ಹೆಬಳೆ ಪಂಚಾಯತ್ ವ್ಯಾಪ್ತಿಯ ತೆಂಗಿನಗುಂಡಿ ಕಡಲ ಕಿನಾರೆ ಬಳಿ ಸಂಘಪರಿವಾರ ಸಂಘಟನೆಯ ಕಾರ್ಯಕರ್ತರು ನಿರ್ಮಿಸಿದ್ದ ದ್ವಜಸ್ಥಂಭವನ್ನು ಪಂಚಾಯತ್ ಅಧಿಕಾರಿಗಳು ತೆರವುಗೊಳಿಸಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.
ಲೋಕಸಭಾ ಚುನಾವಣಾ ಪೂರ್ವ ಸಂಘಪರಿವಾರದ ಕಾರ್ಯಕರ್ತರು ಧರ್ಮದ ಹೆಸರಲ್ಲಿ ರಾಜ್ಯದಲ್ಲಿ ವಿವಾದಗಳನ್ನು ಹುಟ್ಟುಹಾಕುವುದರ ಮೂಲಕ ರಾಜಕೀಯ ಲಾಭ ಪಡೆಯಲು ಹುನ್ನಾರ ನಡೆಸುತ್ತಿದ್ದಾರೆ ಎಂಬ ಆರೋಪಗಳ ನಡುವೆಯೇ ಇತ್ತೀಚೆಗೆ ಮಂಡ್ಯ ಜಿಲ್ಲೆಯಲ್ಲಿ ಹನುಮಧ್ವಜ ವಿವಾದ ಸೃಷ್ಟಿಸಿ ಪ್ರತಿಭಟನೆ ನಡೆಸಿದ್ದರು.
ಈಗ ಉತ್ತರಕನ್ನಡ ಜಿಲ್ಲೆಯ ಶಾಂತಿಯ ಪಟ್ಟಣವಾಗಿರುವ ಭಟ್ಕಳದಲ್ಲಿಯೂ ಕಳೆದ ಕೆಲವು ದಿನಗಳಿಂದ ಒಂದಿಲ್ಲೊಂದು ವಿವಾದಗಳು ಹುಟ್ಟುಪಡೆಯುತ್ತಲೇ ಇವೆ. ಇತ್ತಿಚೆಗೆ ದೇವಿನಗರದ ನಾಮಫಲಕ ಹಾಗೂ ದ್ವಜಸ್ಥಂಭ ವಿವಾದ ಇದಕ್ಕೆ ಉತ್ತಮ ಉದಹಾರಣೆಯಾಗಿದೆ.
ಇಂತಹದ್ದೇ ವಿವಾದವೊಂದು ಕಳೆದ ಎರಡು ದಿನಗಳಿಂದ ಸೃಷ್ಟಿಯಾಗಿದ್ದು ಹೆಬಳೆ ಪಂಚಾಯತ್ ಅಧಿಕಾರಿಗಳು ಅನಧಿಕೃತ ದ್ವಜಸ್ಥಂಭವನ್ನು ತೆರವುಗೊಳಿಸಿದ್ದನ್ನು ಪ್ರಶ್ನಿಸಿ ಪಂಚಾಯತ್ ಅಧಿಕಾರಿಗಳು ಮತ್ತು ಪೊಲೀಸರೊಂದಿಗೆ ಸಂಘಪರಿವಾರದ ಕಾರ್ಯಕರ್ತರು ಮತ್ತು ಪಂಚಾಯತ್ ನ ಬಿಜೆಪಿ ಸದಸ್ಯರು ತಗಾದೆ ತೆಗೆದಿದ್ದು ಅನಧಿಕೃತ ನಾಮಫಲಕ ಮತ್ತು ದ್ವಜಸ್ಥಂಭಗಳನ್ನು ತೆರವುಗೊಳಿಸುವ ತಾಕತ್ತಿದ್ದರೆ ಎಲ್ಲ ಕಡೆ ಹಾಕಲಾಗಿರುವ ಅನಧಿಕೃತ ನಾಮಫಲಕಗಳನ್ನು ತೆರವುಗೊಳಿಸಿ ಎಂದು ಸವಾಲು ಹಾಕಿದ್ದಾರೆ. ಈ ನಡುವೆ ಪೊಲೀಸರು ಮತ್ತು ಸಂಘಪರಿವಾರದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿಯೂ ನಡೆಯಿತು.
ಸಾವರ್ಕರ್ಗೆ ಸಂಬಂಧಿಸಿದ ನಾಮಫಲಕ ಹಾಗೂ ಧ್ವಜಕ್ಕೆ ಸಂಬಂಧಿಸಿದ ನಾಮಫಲಕವನ್ನು ಯಾವುದೇ ಮುನ್ಸೂಚನೆ ನೀಡದೆ ಜೆಸಿಬಿ ಬಳಸಿ ತೆರವುಗೊಳಿಸಲು ಗ್ರಾಮ ಪಂಚಾಯಿತಿ ಕ್ಷಿಪ್ರ ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಪ್ರಮುಖ ಮುಖಂಡರಾದ ಗೋವಿಂದ ನಾಯ್ಕ, ಸುಬ್ರಾಯ ದೇವಾಡಿಗ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಪಂಚಾಯತ್ ನ ಈ ಹಠಾತ್ ನಿರ್ಧಾರವನ್ನು ಟೀಕಿಸಿದರು, ಸಾವರ್ಕರ್ ಅವರ ನಾಮಫಲಕವನ್ನು ಅಧಿಕೃತವಾಗಿ ಅನುಮೋದಿಸಲಾಗಿದೆ ಎಂದು ಹೇಳಿದರು. ನಂತರ ಪ್ರತಿಭಟನಾಕಾರರು ಪಂಚಾಯತ್ ತೆರವುಗೊಳಿಸಿದ ದ್ವಜಕಟ್ಟೆಯನ್ನು ನಿರ್ಮಾಣ ಮಾಡಿದರು. ಈ ಘಟನೆ ಮುಂದೆ ಯಾವ ರೀತಿಯ ತಿರುವು ಪಡೆದುಕೊಳ್ಳುತ್ತದೆ ಎಂಬುದು ಚರ್ಚೆಯ ಕೇಂದ್ರ ಬಿಂದುವಾಗಿಯೇ ಉಳಿದಿದೆ. ಈ ಪ್ರಕರಣವು ಹೆಬಳೆ ಪಂಚಾಯತ್ ವ್ಯಾಪ್ತಿಯಲ್ಲಿ ಉದ್ವಿಘ್ನತೆಯನ್ನು ಸೃಷ್ಟಿಸಿದ್ದಂತೋ ನಿಜ.