ಭಟ್ಕಳ: ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ; ವಿದ್ಯಾರ್ಥಿ ಸಮುದಾಯದ ’ಕವಲುದಾರಿ’ ಇದ್ದಂತೆ- ಖ್ಯಾತ ಶಿಕ್ಷಣ ತಜ್ಞ ತನ್ವೀರ್ ಆಹ್ಮದ್
ಭಟ್ಕಳ: ಕರಾವಳಿ ಕರ್ನಾಟಕದ ಅತಿ ಹೆಚ್ಚು ಓದುಗರನ್ನು ಹೊಂದಿರುವ ಸಾಹಿಲ್ ಆನ್ ಲೈನ್ ಸುದ್ದಿತಾಣ ಶುಕ್ರವಾರದಂದು ಇಲ್ಲಿನ ನವಾಯತ್ ಕಾಲೋನಿಯ ಬಿಲಾಲ್ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗಾಗಿ ವೃತ್ತಿಮಾರ್ಗದರ್ಶನ ಶಿಬಿರವನ್ನು ಆಯೋಜಿಸಿತ್ತು.
ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಖ್ಯಾತ ಶಿಕ್ಷಣ ತಜ್ಞ ಸೈಯ್ಯದ್ ತನ್ವೀರ್ ಆಹ್ಮದ್, ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯು ವಿದ್ಯಾರ್ಥಿಗಳ ಬದುಕಿನ ನಾಲ್ಕು ರಸ್ತೆ (ಕವಲುದಾರಿ)ಗಳಿದ್ದಂತೆ , ನಿಮಗೆ ಹಲವಾರು ಆಯ್ಕೆಗಳಿರುತ್ತವೆ. ನೀವು ವಿಜ್ಞಾನ, ವಾಣಿಜ್ಯ ಕಲಾ ವಿಭಾಗ ಹೊರತು ಪಡಿಸಿ ಬಹಳಷ್ಟು ಹೊಸ ಹೊಸ ಅದ್ಯಯನಗಳು ತೆರೆದುಕೊಳ್ಳುತ್ತವೆ. ಸರಿಯಾದ ಸಮಯಕ್ಕೆ ನಮ್ಮ ಗುರಿಯನ್ನು ಇಟ್ಟುಕೊಳ್ಳದೆ ಹೋದರೆ ಮುಂದೆ ದಾರಿ ತಪ್ಪುವ ಭಯ ಇದೆ. ಆದಕ್ಕಾಗಿ ವಿದ್ಯಾರ್ಥಿ ತಾನು ಏನಾಗಬೇಕು, ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದರ ಕುರಿತು ಬಹಳ ಮುಂಚಿತವಾಗಿಯೆ ಗುರಿ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ತಮ್ಮ ಮಕ್ಕಳನ್ನು ಇತರ ಮಕ್ಕಳ ಮುಂದೆ ಕೀಳಾಗಿ ಕಾಣುವುದನ್ನು ನಿಲ್ಲಿಸುವಂತೆ ಪಾಲಕರಿಗೆ ಕಿವಿ ಮಾತು ಹೇಳಿದ ಅವರು, ಇಂದು ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರತಿಭಾವಂತನಾಗಿದ್ದಾನೆ. ಸರಿಯಾದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವುದರ ಮೂಲಕ ತನ್ನ ವೃತ್ತಿಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಭಟ್ಕಳ ಜಾಮಿಯ ಮಸೀದಿ ಇಮಾಮ್ ಮತ್ತು ಖತೀಬ್ ಮೌಲಾನ ಅಬ್ದುಲ್ ಅಲೀಮ್ ಕತೀಬಿ ನದ್ವಿ ಸಾಹಿಲ್ ಆನ್ ಲೈನ್ ಸುದ್ದಿತಾಣದ ನಿರ್ದೇಶಕ ಜಾವೀದ್ ಹುಸೇನ್ ಅರ್ಮಾರ್ ಮಾತನಾಡಿದರು. ವ್ಯವಸ್ಥಾಪ ಸಂಪಾದ ಇನಾಯತುಲ್ಲಾ ಗವಾಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಾಫಿಝ್ ಅಮೀನ್ ಝುಹೇಬ್ ರ ಕುರಾನ್ ಪಠಣದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಪತ್ರಕರ್ತ ಎಂ.ಆರ್.ಮಾನ್ವಿ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಪ್ರೋ.ರವೂಫ್ ಆಹ್ಮದ್ ಸವಣೂರು ಸಾಹಿಲ್ ಆನ್ಲೈನ್ ಸುದ್ದಿತಾಣ ಪರಚಯಿಸಿದರು. ವ್ಯವಸ್ಥಾಪ ಮುಬಶ್ಶಿರ್ ಹಲ್ಲಾರೆ ಧನ್ಯವಾದ ಅರ್ಪಿಸಿದರು. ಮುಸಾಬ್ ಆಬೀದಾ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಭಟ್ಕಳ, ಮುರುಡೇಶ್ವರ, ಮಂಕಿ ಯ ಸುಮಾರು ೪೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.