ಹೊಸದಿಲ್ಲಿ: ಗುಜರಾತ್, ರಾಜಸ್ಥಾನ ಸಹಿತ ಐದು ರಾಜ್ಯಗಳಲ್ಲಿ ಪೌರತ್ವ ಅರ್ಜಿ ಕರೆದ ಕೇಂದ್ರ
ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), 2019ರಡಿ ನಿಯಮಗಳನ್ನು ಕೇಂದ್ರವು ಇನ್ನಷ್ಟೇ ರೂಪಿಸಬೇಕಿದೆ, ತನ್ಮಧ್ಯೆ ಶುಕ್ರವಾರ ಗೆಝಟ್ ಅಧಿಸೂಚನೆಯನ್ನು ಹೊರಡಿಸಿರುವ ಅದು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಿಂದ ಬಂದಿರುವ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರಿಂದ ಪೌರತ್ವ ಅರ್ಜಿಗಳನ್ನು ಸ್ವೀಕರಿಸಲು, ದೃಢಪಡಿಸಿಕೊಳ್ಳಲು ಮತ್ತು ಪುರಸ್ಕರಿಸಲು ಗುಜರಾತ್, ಛತ್ತೀಸ್ಗಡ, ರಾಜಸ್ಥಾನ, ಹರ್ಯಾಣ ಮತ್ತು ಪಂಜಾಬ್ ರಾಜ್ಯಗಳ 13 ಜಿಲ್ಲಾಧಿಕಾರಿಗಳಿಗೆ ಹಾಲಿ ನಿಯಮಗಳಡಿ ಅಧಿಕಾರವನ್ನು ನೀಡಿದೆ.
ಮೋರ್ಬಿ, ರಾಜಕೋಟ್, ಪಾಟನ್ ಮತ್ತು ವಡೋದರಾ (ಗುಜರಾತ್), ದುರ್ಗ ಮತ್ತು ಬಲೋದಾಬಾಝಾರ್ (ಛತ್ತೀಸ್ಗಡ), ಜಾಲೋರ, ಉದಯಪುರ, ಪಾಲಿ, ಬಾರ್ಮೇರ್ ಮತ್ತು ಸಿರೋಹಿ(ರಾಜಸ್ಥಾನ), ಫರೀದಾಬಾದ್ (ಹರ್ಯಾಣ) ಮತ್ತು ಜಲಂಧರ (ಪಂಜಾಬ್) ಇವು ಈ 13 ಜಿಲ್ಲೆಗಳಾಗಿವೆ. ಫರೀದಾಬಾದ್ ಮತ್ತು ಜಲಂಧರ್ ಹೊರತುಪಡಿಸಿ ಹರ್ಯಾಣ ಮತ್ತು ಪಂಜಾಬ್ಗಳ ಗೃಹ ಕಾರ್ಯದರ್ಶಿಗಳಿಗೂ ಇಂತಹುದೇ ಅಧಿಕಾರಗಳನ್ನು ನೀಡಲಾಗಿದೆ.
ಅಧಿಸೂಚನೆಯಲ್ಲಿ ಹಿಂದೂಗಳು, ಸಿಖ್ಖರು, ಜೈನರು, ಪಾರ್ಸಿಗಳು ಮತ್ತು ಕ್ರೈಸ್ತರನ್ನು ಅಲ್ಪಸಂಖ್ಯಾತ ಸಮುದಾಯಗಳೆಂದು ಪಟ್ಟಿ ಮಾಡಲಾಗಿದೆ. ಅರ್ಜಿಗಳನ್ನು ಆನ್ಲೈನ್ ಮೂಲಕವೇ ಸಲ್ಲಿಸುವಂತೆ ಸೂಚಿಸಲಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), 2019ರಡಿ ನಿಯಮಗಳನ್ನು ಇನ್ನಷ್ಟೇ ರೂಪಿಸಬೇಕಿದೆ. ಹೀಗಾಗಿ ಪೌರತ್ವ ಕಾಯ್ದೆ,1955 ಮತ್ತು ಪೌರತ್ವ ನಿಯಮಗಳು,2009ರಡಿ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯದಲ್ಲಿನ ಮೂಲಗಳು ತಿಳಿಸಿವೆ.
2018ರಲ್ಲಿ ಹಲವಾರು ರಾಜ್ಯಗಳಲ್ಲಿಯ ಇತರ ಜಿಲ್ಲೆಗಳಿಗಾಗಿ ಇಂತಹುದೇ ಅಧಿಸೂಚನೆಯನ್ನು ಹೊರಡಿಸಲಾಗಿತ್ತು.