ಮುಸ್ಲಿಮರ ಹೆಸರಿನಲ್ಲಿ ರಾಮ ಮಂದಿರ, ಯೋಗಿ ಆದಿತ್ಯನಾಥ್ ಗೆ ಬಾಂಬ್ ಬೆದರಿಕೆ: ತಹರ್ ಸಿಂಗ್, ಓಂಪ್ರಕಾಶ್ ಮಿಶ್ರಾ ಬಂಧನ
ಲಕ್ನೋ: ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ರನ್ನು ಕೊಲೆ ಮಾಡುವ ಮತ್ತು ಅಯೋಧ್ಯೆಯ ರಾಮ ಮಂದಿರವನ್ನು ಬಾಂಬಿಟ್ಟು ಸ್ಪೋಟಿಸುವ ಬೆದರಿಕೆಗಳನ್ನು ಮುಸ್ಲಿಮರ ಹೆಸರಿನಲ್ಲಿ ಒಡ್ಡಿದ ಆರೋಪದಲ್ಲಿ ರಾಜ್ಯ ಪೊಲೀಸರು ಬುಧವಾರ ಇಬ್ಬರನ್ನು ಬಂಧಿಸಿದ್ದಾರೆ.
ಉತ್ತರಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆಯು ಓಮ್ಪ್ರಕಾಶ್ ಮಿಶ್ರಾ ಮತ್ತು ತಾಹರ್ ಸಿಂಗ್ ಎಂಬವರನ್ನು ಲಕ್ಷ್ಮಿದ ಗೋಮತಿನಗರದ ವಿಭೂತಿ ಖಂಡ ಪ್ರದೇಶದಿಂದ ಬಂಧಿಸಿದೆ ಎಂದು ಪೊಲೀಸ್ ಹೇಳಿಕೆಯೊಂದು ತಿಳಿಸಿದೆ. ಇಬ್ಬರು ವ್ಯಕ್ತಿಗಳು ಗೊಂಡ ನಿವಾಸಿಗಳಾಗಿದ್ದಾರೆ.
ಆದಿತ್ಯನಾಥ್ ಮತ್ತು ಪೊಲೀಸ್ ವಿಶೇಷ ಕಾರ್ಯಪಡೆಯ ಮುಖ್ಯಸ್ಥ ಅಮಿತಾಭ್ ಯಶ್ ರನ್ನು ಕೊಲ್ಲುವುದಾಗಿ ಹಾಗೂ ಅಯೋಧ್ಯೆಯಲ್ಲಿರುವ ರಾಮ ಮಂದಿರವನ್ನು ಸ್ಪೋಟಿಸುವುದಾಗಿ ಬಂಧಿತರು ನವೆಂಬರ್ನಲ್ಲಿ ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಬೆದರಿಕೆ ಹಾಕಿದ್ದರು.
ಮಿಶ್ರಾ ಮತ್ತು ಸಿಂಗ್ ಮುಸ್ಲಿಮರ ಹೆಸರುಗಳುಳ್ಳ ಇ-ಮೇಲ್ ಐಡಿಗಳ ಮೂಲಕವೂ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಅವರು ತಮ್ಮ ಕೃತ್ಯಕ್ಕೆ 'ಆಲಮ್ ಅನ್ಸಾರಿ ಖಾನ್' ಮತ್ತು 'ಝುಬೇರ್ ಖಾನ್' ಎಂಬ ಹೆಸರುಗಳನ್ನು ಬಳಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ದೇವೇಂದ್ರ ತಿವಾರಿ ಎಂಬಾತನ ಸೂಚನೆಯಂತೆ ಬಂಧಿತರು ಈ ಕೃತ್ಯ ನಡೆಸಿದ್ದಾರೆ ಎಂದು ತನಿಖೆಯ ನೇತೃತ್ವ ವಹಿಸಿರುವ ಉಪ ಪೊಲೀಸ್ ಸೂಪರಿಂಟೆಂಡೆಂಟ್ ಪ್ರಮೇಶ್ ಕುಮಾರ್ ಶುಕ್ಲಾ ಹೇಳಿದರು. ದೇವೇಂದ್ರ ತಿವಾರಿಯು ಭಾರತೀಯ ಗೋ ಸೇವಾ ಪರಿಷದ್ ಮತ್ತು ಭಾರತೀಯ ಕಿಸಾನ್ ಮಂಚ್ ಎಂಬ ಸರಕಾರೇತರ ಸಂಘಟನೆಗಳನ್ನು ನಡೆಸುತ್ತಿದ್ದಾನೆ ಎನ್ನಲಾಗಿದೆ.
ನಕಲಿ ಇ-ಮೇಲ್ ಖಾತೆಗಳನ್ನು ಸಿಂಗ್ ಸೃಷ್ಟಿಸಿದ್ದನು ಮತ್ತು ಮಿಶ್ರಾ ಅವುಗಳ ಮೂಲಕ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದನು ಎನ್ನುವುದು ತಾಂತ್ರಿಕ ವಿಶ್ಲೇಷಣೆಯಲ್ಲಿ ಹೊರಬಿದ್ದಿದೆ.
ಮಾಧ್ಯಮಗಳ ಗಮನ ಸೆಳೆಯಲು ಮತ್ತು ರಾಜಕೀಯ ಲಾಭ ಪಡೆದುಕೊಳ್ಳಲು ಈ ಬೆದರಿಕೆ ಸಂದೇಶಗಳನ್ನು ತಿವಾರಿಯು ತನ್ನ 'ಎಕ್ಸ್' ಖಾತೆಯಲ್ಲಿ ಹಂಚಿಕೊಂಡಿದ್ದನು.