ಪರಿಷತ್ನಲ್ಲಿ ಮಂಡನೆಯಾಗದ ಮತಾಂತರ ನಿಷೇಧ ಮಸೂದೆ; ಮುಂದಿನ ಅಧಿವೇಶನದಲ್ಲಿ ಮಂಡಿಸಲು ಸರಕಾರ ನಿರ್ಧಾರ
ಬೆಳಗಾವಿ: ರಾಜ್ಯ ಸರಕಾರವು ಮತಾಂತರ ನಿಷೇಧ ಮಸೂದೆಯನ್ನು ಸದ್ಯಕ್ಕೆ ಹಿಂದೆಗೆದುಕೊಂಡಿದ್ದು, ಮುಂದಿನ ಅಧಿವೇಶನದಲ್ಲಿ ಮಂಡಿಸಲು ಮುಂದಾಗಿದೆ.
ಶುಕ್ರವಾರ ಸಂಜೆ ಐದು ನಿಮಿಷಗಳ ವಿರಾಮದ ಬಳಿಕ ವಿಧಾನ ಪರಿಷತ್ ಕಲಾಪ ಮತ್ತೆ ಆರಂಭವಾಯಿತು. ಸಭಾಪತಿ ಕೊಠಡಿಯಲ್ಲಿ ನಡೆದ ತೀರ್ಮಾನದಂತೆ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ರಕ್ಷಣೆ ಮಸೂದೆ ಮಂಡನೆ ಕೈಬಿಟ್ಟಿರುವುದಾಗಿ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದರು.
ಅಲ್ಲದೆ, ಮಧ್ಯಾಹ್ನದ ವಿರಾಮದ ಬಳಿಕ ಕಲಾಪ 3 ಗಂಟೆಗೆ ಮುಂದೂಡಲಾಗಿತ್ತು. 4 ಗಂಟೆಯಾದರೂ ಕೋರಂ ಬೆಲ್ ಹಾಕಿರಲಿಲ್ಲ.
ಮತಾಂತರ ನಿಷೇಧ ಮಸೂದೆ ಅಂಗೀಕಾರಕ್ಕೆ ಬೆಂಬಲದ ಕೊರತೆ ಇರುವುದರಿಂದ ವಿಧಾನ ಪರಿಷತ್ ಕಲಾಪ ಆರಂಭಿಸದೇ ವಿಳಂಬ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಸದಸ್ಯರು ಸಭಾಪತಿ ಕೊಠಡಿಗೆ ತೆರಳಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು ಎನ್ನಲಾಗಿದೆ.
ಬೆಳಗಾವಿ ಬಿಟ್ಟಿದ್ದ ಬಿಜೆಪಿ ಸದಸ್ಯರು: ಬಿಜೆಪಿಗೆ ಸದಸ್ಯ ಬಲದ ಕೊರತೆ ಇದೆ. ಮತ್ತೊಂದೆಡೆ ಶುಕ್ರವಾರ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಸೇರಿದಂತೆ ಕೆಲವು ಸದಸ್ಯರು
ಬೆಳಗಾವಿಯಿಂದ ಹೊರಟು ಹೋಗಿದ್ದರು. ಹಾಗಾಗಿ, ಅವರಿಗೆ ವಾಪಸ್ ಸುವರ್ಣ ವಿಧಾನಸೌಧಕ್ಕೆ ಹಿಂದಿರುಗುವಂತೆ ಆಡಳಿತ ಪಕ್ಷದಿಂದ ತುರ್ತು ಸಂದೇಶ ರವಾನಿಸಲಾಗಿತ್ತು.
ಹಲವರು ದೂರ ತಲುಪಿರುವ ಅವರಿಗಾಗಿ ಕಾದು ಕುಳಿತಿದ್ದರು. ಆನಂತರ, 3:45ರ ಸುಮಾರಿಗೆ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಆಡಳಿತ ಪಕ್ಷದ ಹಲವರು ಸಭಾಪತಿ ಬಸವರಾಜ ಹೊರಟ್ಟಿಯವರ ಕೊಠಡಿಯಲ್ಲಿ ಸೇರಿದರು.
ಅಷ್ಟರಲ್ಲಿ ಸಭಾಪತಿ ಕೊಠಡಿಗೆ ಧಾವಿಸಿದ ಕಾಂಗ್ರೆಸ್ ಸದಸ್ಯರು ಕಲಾಪ ವಿಳಂಬ ಮಾಡುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಗುರುವಾರ ವಿಪಕ್ಷಗಳ ವಿರೋಧದ ನಡುವೆಯೂ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರವಾಗಿತ್ತು. ಶುಕ್ರವಾರ ಮಧ್ಯಾಹ್ನ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ವಿದಾಯದ ಭಾಷಣ ನೆರವೇರಿಸಿದರು. 2022ರ ಬಜೆಟ್ ಅಧಿವೇಶನದಲ್ಲಿ ವಿಧೇಯಕ ಚರ್ಚೆಗೆ ಬರುವ ಸಾಧ್ಯತೆ ಇದೆ.