ಭಟ್ಕಳ:ಭಾದ್ರಪದ ಶುಕ್ಲ ಪಕ್ಷದ ಚತುರ್ಥಿಯಂದು ಧರೆಗಿಳಿದು ಮನೆ ಮನೆಗೂ ಆಗಮಿಸಿದ ನಾಡಿನಾದ್ಯಂತ ಸಡಗರ ಸಂಭ್ರಮವನ್ನು ತಂದ ಗೌರಿಯ ಕಂದ ಗಣೇಶನು ಐದು ದಿನಗಳನ್ನು ಪೂರೈಸಿ ಭಕ್ತರಿಗೆಲ್ಲ ಆಶೀರ್ವದಿಸಿ ಗಂಗೆಯ ಮಡಿಲಿಗೆ ಸೇರಿದ್ದಾನೆ. ಅಂದರೆ ಗಂಗಾಮಾತೆಯ ಪ್ರತೀಕವಾದ ಸಮುದ್ರ, ಹಳ್ಳ, ಬಾವಿಯ ನೀರಿನಲ್ಲಿ ವಿಸರ್ಜನೆಯಾಗಿ ಕರಗುತ್ತಿದ್ದಾನೆ.
ಪಟ್ಟಣದ ಆಟೋ ರಿಕ್ಷಾ ಚಾಲಕರ ಮಾಲಕರ ಸಂಘದ ಗಣೇಶನ ಮೂರ್ತಿ ಸೇರಿದಂತೆ ವಿವಿಧ ಕಡೆಗಳಲ್ಲಿ ಪ್ರತಿ ಸ್ಥಾಪಿಸಲಾದ ಗಣೇಶನ ಮೂರ್ತಿಯನ್ನು ಗಣೇಶೋತ್ಸ ವದ ಐದನೇ ದಿನವಾದ ಶನಿವಾರ ರಾತ್ರಿ ವಿಸರ್ಜಿಸಲಾಯಿತು.
ಈ ಸಲ ಎಲ್ಲೆಡೆ ವಿಜೃಂಭಣೆಯಿಂದ ಗಣೇಶ ಚತುರ್ಥಿ ಆಚರಿಸಲಾಗಿದ್ದು, ಮೂರ್ತಿ ವಿಸರ್ಜನೆಯನ್ನೂ ಸಹ ಅಷ್ಟೇ ಅದ್ಧೂರಿಯಾಗಿ ನೆರವೇರಿಸಲಾಗಿದೆ.
ಆಟೋ ಚಾಲಕರ ಮಾಲಕರ ಗಣೇಶ ಮೂರ್ತಿ, ವಾಯುವ್ಯ ಸಾರಿಗೆ ಸಂಸ್ಥೆಯ ವತಿಯಿಂದ ಪ್ರತಿಷ್ಠಾಪಿಸಲಾದ ಗಣೇ ಶನಮೂರ್ತಿ, ಮಣ್ಣುಳಿಯಸಾರ್ವಜನಿಕ ಗಣೇಶೋತ್ಸವ ಸಮಿತಿ ಪ್ರತಿಷ್ಠಾಪಿಸಿದ ಗಣೇಶ, ಚೆನ್ನಪಟ್ಟಣ ಹನುಮಂತ ದೇವಸ್ಥಾನದ ಆವರಣದಲ್ಲಿನ ವಿಶ್ವಹಿಂದೂ ಪರಿಷತ್ ಗಣಪತಿ,ಮಣ್ಣಕುಳಿ ಸಾರ್ವಜನಿಕ ಗಣಪತಿ ಹಾಗೂ ಪೊಲೀಸ್ ಇಲಾಖೆಯ ಗಣೇಶನ ಮೂರ್ತಿಯನ್ನು ಶನಿವಾರ ರಾತ್ರಿ ಅದ್ಧೂರಿಯಾಗಿ ಚೌತನಿ ಹೊಳೆಯಲ್ಲಿ ವಿಸರ್ಜಿಸಲಾಯಿತು.
ಆಟೊ ರಿಕ್ಷಾ ಚಾಲಕರ ಮಾಲಕರ ಸಂಘದ ಗಣೇಶನ ಮೂರ್ತಿ ವಿಸರ್ಜನೆ ವೇಳೆ ಸಂಘದ ಅಧ್ಯಕ್ಷ ಕೃಷ್ಣಾ ನಾಯ್ಕ, ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ರಿಕ್ಷಾ ಚಾಲಕರು, ಮಾಲಕರು ಪಾಲ್ಗೊಂಡಿದ್ದರು.
ವಿವಿಧ ಗಣೇಶನ ಮೂರ್ತಿ ಮೆರವಣಿಗೆ ಸಂದರ್ಭದಲ್ಲೂ ಜನಸ್ತೋಮವೇ ಸೇರಿತ್ತು. ವಿಸರ್ಜನೆ ಮೆರವಣಿಗೆಯಲ್ಲಿ ನೃತ್ಯ ಗಮನ ಸೆಳೆಯಿತು.