ಭಟ್ಕಳ: ಯೋಗವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಆರೋಗ್ಯ, ಶಾಂತಿ ನೆಮ್ಮದಿಯನ್ನು ತಂದುಕೊಳ್ಳಬೇಕು ಎಂದು ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತೆ ಮಮತಾ ದೇವಿ ಹೇಳಿದರು.
ಅವರು ರವಿವಾರ ನವಾಯತ್ ಕಾಲೋನಿಯ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಯುವಕರಿಗಾಗಿ ಯೋಗ ಉತ್ತರಕನ್ನಡ ಜಿಲ್ಲಾ ಮಟ್ಟದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬೆಳಿಗ್ಗೆ ೫ಗಂಟೆಯಿಂದಲೇ ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಯೋಗಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಆಯುಷ್ ಅಧಿಕಾರಿ ಲಲಿತಾ ಶೆಟ್ಟಿ ಮಾತನಾಡಿ, ಕೋವಿಡ್ ಕಾಲದಲ್ಲಿ ನಮ್ಮ ಆರೋಗ್ಯ ಹೇಗಿತ್ತು ಎಂಬುದು ಎಲ್ಲರಿಗೂ ಗೊತ್ತು. ನಿರಂತರ ಯೋಗ ಮಾಡುವುದರಿಂದಾಗಿ ನಮ್ಮಲ್ಲಿನ ರೋಗನಿರೋಧಕ ಶಕ್ತಿ ಬೆಳೆದು ನಾವು ಸದೃಢವಾಗಿರಲು ಸಾಧ್ಯ. ಅಲ್ಲದೆ ನಮಗೆ ಮನಶಾಂತಿಯೂ ಲಭಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಭದ ಅಧ್ಯಕ್ಷ ಮೋಹನ್ ನಾಯ್ಕ, ಜನಾತಾ ವಿದ್ಯಾಲಯ ಶಿರಾಲಿ ಪ್ರಾಂಶುಪಾಲ ಎ.ಬಿ.ರಾಮರಥ್, ಅಲ್ಪಸಂಖ್ಯಾತ ಇಲಾಖೆಯ ತಾಲೂಕು ವಿಸ್ತೀರ್ಣಾಧಿಕಾರಿ ಶಮ್ಸುದ್ದೀನ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು.