ಉದ್ಘಾಟನೆಯ ಭಾಗ್ಯ ಕಾಣದ ಭಟ್ಕಳದ ಮಿನಿ ವಿಧಾನಸೌಧ

Source: sonews | By Staff Correspondent | Published on 21st October 2020, 11:06 PM | Coastal News |

ಭಟ್ಕಳ: ಭಟ್ಕಳ ನಗರದಲ್ಲಿ ಮಿನಿ ವಿಧಾನ ಸೌಧ ಆಗಬೇಕೆನ್ನುವ ಬಹು ವರ್ಷಗಳ ಕನಸು ನನಸಾಗಿದ್ದರೂ ಕೂಡಾ ಕಟ್ಟಡಕ್ಕೆ ಇನ್ನೂ ತನಕ ಉದ್ಘಾಟನೆಯ ಭಾಗ್ಯ ಮಾತ್ರ ದೊರೆತಿಲ್ಲ. 

1994ರಲ್ಲಿ ಪ್ರಥಮ ಬಾರಿಗೆ ಬಿ.ಜೆ.ಪಿ.ಯಿಂದ ಆರಿಸಿ ಬಂದಿದ್ದ ಡಾ. ಚಿತ್ತರಂಜನ್ ಅವರು ಭಟ್ಕಳಕ್ಕೆ ಮಿನಿ ವಿಧಾನ ಸೌಧ ಬೇಕು ಎನ್ನುವ ಕನಸು ಕಂಡಿದ್ದರು. ನಂತರ ಮೂರು ಕೋಟಿ ಮಂಜೂರಿಯಾದರೂ ಕೂಡಾ ಕಟ್ಟಡ ಮಾತ್ರ ಆರಂಭವಾಗಿಲ್ಲ.  ನಂತರ ಮಿನಿ ವಿಧಾನ ಸೌಧದ ಕನಸು ಕಮರಿ ಹೋಗಿದ್ದು, ಶಾಸಕ ಮಂಕಾಳ ವೈದ್ಯ ಅವರು ಅದಕ್ಕೆ ಮರು ಜೀವ ತುಂಬಿ 10 ಕೋಟಿ ರೂಪಾಯಿ ಮಂಜೂರಿ ಮಾಡಿಸಿದ್ದರು. ಅಂದಿನ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರು ಮಿನಿ ವಿಧಾನ ಸೌಧಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದರು.  ಕಾಮಗಾರಿಯನ್ನು ನಡೆಸಿದ ಬೆಳಗಾವಿಯ ಪ್ರೌಢ ಇಂಡಿಯಾ ಪ್ರಮೋಟರ್ಸ್ ಕಂಪೆನಿಯವರು 2017ರಲ್ಲಿ ಕಾಮಗಾರಿಯನ್ನು ಆರಂಭಿಸಿ ಫೆ,2020ರಲ್ಲಿ ಮುಗಿಸಿದ್ದು ಲೋಕೋಪಯೋಗಿ ಇಲಾಖೆ ನಿಗದಿ ಪಡಿಸಿದ್ದ ಸಮಯ ಮಿತಿಯೊಳಗೆ ಕಟ್ಟಡವನ್ನು ಕಟ್ಟಿದ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಯನ್ನು ಮಾಡಿ ಮುಗಿಸಿದ್ದರು. ಕಳೆದ 9 ತಿಂಗಳ ಹಿಂದೆ ಕಟ್ಟಡವನ್ನು ಕಂದಾಯ ಇಲಾಖೆಗೆ ವಹಿಸಿಕೊಡಲಾಗಿದ್ದರೂ ಕೂಡಾ ಇನ್ನೂ ಉದ್ಘಾಟನೆಯ ಭಾಗ್ಯ ಮಾತ್ರ ದೊರೆತಿಲ್ಲ.  ಇದಕ್ಕೆ ಹೆಚ್ಚುವರಿ ಕಾಮಗಾರಿಯಾಗಿ ಮೇಲ್ಚಾವಣಿಗೆ ತಗಡಿನ ಹೊದಿಕೆ ಹಾಗೂ ಕಚೇರಿಗಳ ಪೀಠೋಪಕರಣಗಳಿಗೆ ಹಣ ಮಂಜೂರಿಯಾಗದೇ ಇರುವುದೇ ಕಾರಣ ಎನ್ನಲಾಗಿದ್ದು ಸರಕಾರಕ್ಕೆ ಒಟ್ಟೂ 3 ಕೋಟಿ ರೂಪಾಯಿಗಳ ಅಂದಾಜು ವೆಚ್ಚ ಸಲ್ಲಿಸಲಾಗಿದ್ದು ಶಾಸಕ ಸುನಿಲ್ ನಾಯ್ಕ ಅವರ ಸತತ ಪ್ರಯತ್ನದಿಂದ ಮಂಜೂರಿಯಾಗುವ ಹಂತದಲ್ಲಿದೆ ಎನ್ನಲಾಗಿದೆ. 

ಭಟ್ಕಳ ನಗರ ಮಧ್ಯದಲ್ಲಿ ನಾಲ್ಕು ಅಂತಸ್ತುಗಳ ಮಿನಿ ವಿಧಾನ ಸೌಧ ಉದ್ಘಾಟನೆಗೆ ಸಜ್ಜಾಗಿ ನಿಂತಿದ್ದು ಇದರಲ್ಲಿ ಪಾರ್ಕಿಂಗ್, ನೆಲ ಮಹಡಿ, ಪ್ರಥಮ ಮಹಡಿ, ಎರಡನೇ ಮಹಡಿಗಳು ತಲಾ 990 ಚದರ ಅಡಿ ಇದ್ದು ಒಟ್ಟೂ ಕ್ಷೇತ್ರ 3960 ಚದರ ಅಡಿಗಳಷ್ಟಿದೆ. 

ಇದರಲ್ಲಿ ನೆಲ ಮಹಡಿಯಲ್ಲಿ ಇ.ವಿ.ಎಂ., ಸ್ಟ್ರಾಂಗ್ ರೂಮ್, ರೆಕಾರ್ಡ ರೂಮ್‍ಗಳಿದ್ದು ಮೊದಲನೇ ಮಹಡಿಯಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ, ಟ್ರಸರಿ ಕಚೇರಿ, ಸರ್ವೆ ಇಲಾಖೆಯ ಕಚೇರಿಗಳು ಇರಲಿವೆ. ಎರಡನೇ ಮಹಡಿಯಲ್ಲಿ ತಹಸೀಲ್ದಾರ್ ಕಚೇರಿ, ಕೋರ್ಟ ಹಾಲ್ ಇರಲಿದ್ದು ಮೂರನೇ ಮಹಡಿಯಲ್ಲಿ ಶಾಸಕರ ಕಚೇರಿ, ಸಹಾಯಕ ಆಯುಕ್ತರ ಕಚೇರಿ ಇರಲಿದೆ.  

ಮಿನಿ ವಿಧಾನ ಸೌಧ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿದ್ದು  ಬಸ್ ನಿಲ್ದಾಣ, ತಾಲೂಕಾ ಆಸ್ಪತ್ರೆ, ಪ್ರವಾಸಿ ಬಂಗಲೆ, ಸಂತೆ ಮಾರುಕಟ್ಟೆಗಳಿಗೆ ಸಮೀಪವಿದ್ದು ಜನರಿಗೆ ಅತ್ಯಂತ ಅನುಕೂಲಕರವಾದ ಜಾಗಾದಲ್ಲಿದೆ. ಆದರೆ ನೆಲ ಮಹಡಿಯಲ್ಲಿ ಇ.ವಿ.ಎಂ., ಸ್ಟ್ರಾಂಗ್ ರೂಮ್, ರೆಕಾರ್ಡ ರೂಮ್‍ಗೆ ಅವಕಾಶ ಮಾಡಿಕೊಡಲಾಗಿದ್ದು ತಹಸೀಲ್ದಾರ್ ಕಚೇರಿ ಎರಡನೇ ಮಹಡಿಗೆ, ಸಹಾಯಕ ಆಯುಕ್ತರು ಹಾಗೂ ಶಾಸಕರ ಕಚೇರಿ ಮೂರನೇ ಮಹಡಿಯಲ್ಲಿಟ್ಟಿರುವುದು ಮಾತ್ರ ಜನತೆಗೆ ತೊಂದರೆಯಾಗಲಿದೆ. ಕಟ್ಟಡಕ್ಕೆ ಲಿಪ್ಟ್ ಇದ್ದರೂ ಸಹ ನಮ್ಮಲ್ಲಿ ಎಷ್ಟು ಜನರು ಸರಾಗವಾಗಿ ಲಿಪ್ಟ್ ಬಳಸಬಹದು ಎನ್ನುವುದೇ ಇಲ್ಲಿ ಪ್ರಶ್ನೆಯಾಗಿದೆ. ನೆಲ ಮಹಡಿಯಲ್ಲಿ ತಹಸೀಲ್ದಾರ್ ಕಚೇರಿ, ಮೊದಲ ಮಹಡಿಯಲ್ಲಿ ಸಹಾಯಕ ಆಯುಕ್ತರು ಹಾಗೂ ಶಾಸಕರ ಕಚೇರಿ ಇರುವುದರಿಂದ ನಾಗರೀಕರಿಗೆ ಹೆಚ್ಚು ಅನುಕೂಲವಾಗಲಿದೆ ಎನ್ನುವುದು ಜನತೆಯ ಆಗ್ರಹವಾಗಿದೆ.

ಮಿನಿ ವಿಧಾನ ಸೌಧ ಕಟ್ಟಡ ಮುಗಿದಿರುವುದು ನಿಜ. ಆದರೆ ಕಟ್ಟಕ್ಕೆ ಸ್ಥಳಾಂತರಗೊಳ್ಳುವ ಕಚೇರಿಗಳ ಪೀಠೋಪಕರಣಕ್ಕೆ ಸರಕಾರದಿಂದ ಹಣ ಮಂಜೂರಿಯಾಗುವುದು ಸ್ವಲ್ಪ ವಿಳಂಬವಾಗಿರುವುದರಿಂದ ಹಣ ಮಂಜೂರಿಯಾಗಿ ಪೀಠೋಪಕರಣಗಳನ್ನು ಜೋಡಿಸಿಯೇ ಉದ್ಘಾಟನೆ ಮಾಡಲು ಯೋಚಿಸಲಾಗಿದೆ. 
ಡಾ. ಹರೀಶ ಕುಮಾರ್, ಜಿಲ್ಲಾಧಿಕಾರಿಗಳು, ಕಾರವಾರ. 

ಮಿನಿ ವಿಧಾನ ಸೌಧ ಕಟ್ಟಡದ ಸಿವಿಲ್ ಕಾಮಗಾರಿ ಪೂರ್ಣಗೊಂಡಿದ್ದು, ಕಚೇರಿಗಳಿಗೆ ಪೀಠೋಪಕರಣಕ್ಕಾಗಿ 3.45 ಕೋಟಿ ರೂಪಾಯಿಗಳನ್ನು ಮುಖ್ಯ ಮಂತ್ರಿಗಳು ಅನುಮೋದನೆ ನೀಡಿದ್ದಾರೆ. ಹಣ ಬಿಡುಗಡೆಯಾದ ತಕ್ಷಣ ಸುಸಜ್ಜಿತವಾಗಿ ಪೀಠೋಪಕರಣಗಳನ್ನು ಅಳವಡಿಸಿ ಚುನಾವಣಾ ನೀತಿ ಸಂಹಿತೆಯು ಮುಗಿದ ನಂತರ  ಕಂದಾಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.   
ಸುನಿಲ್ ನಾಯ್ಕ, ಶಾಸಕರು, ಭಟ್ಕಳ-ಹೊನ್ನಾವರ ಕ್ಷೇತ್ರ. 

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...