ಭಟ್ಕಳ: ರಾತ್ರಿ ವೇಳೆ ಶೌಚಕ್ಕೆಂದು ಮನೆಯಿಂದ ಹೊರಬಂದ ವ್ಯಕ್ತಿಯೊಬ್ಬರ ಮೇಲೆ ಎಕಾಏಕಿ ನಾಲ್ಕೈದು ಜನರ ತಂಡವೊಂದು ಹಲ್ಲೆಗೈದು ಪರಾರಿಯಾಗಿರುವ ಘಟನೆ ತಾಲೂಕಿನ ಮುರುಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಹಿರೆದೋಮಿ ಎಂಬಲ್ಲಿ ಶುಕ್ರವಾರ ಮದ್ಯರಾತ್ರಿ ಜರಗಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಮುರುಡೇಶ್ವರದ ಹಿರೇದೋಮಿ ನಿವಾಸಿ ನಾಗರಾಜ ನಾಯ್ಕ ಎಂದು ಗುರುತಿಸಲಾಗಿದೆ. ಹಲ್ಲೆಯಿಂದಾಗಿ ತಲೆ ಹಾಗೂ ಕೈಗೆ ಗಂಭೀರ ಪ್ರಮಾಣದ ಪೆಟ್ಟಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರಕ್ಕೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದುಬಂದಿದೆ.
ಗೋಕಳ್ಳರ ಕೃತ್ಯ?: ತಡರಾತ್ರಿ ವ್ಯಕ್ತಿಯೊಬ್ಬರ ಮೇಲೆ ಎಕಾಎಕಿ ಹಲ್ಲೆಗೈಯಲು ಕಾರಣಗಳೇನು ಎಂಬುದರ ಕುರಿತಂತೆ ಈಗ ಚರ್ಚೆಯಾಗುತ್ತಿದ್ದು ಈ ಭಾಗದಲ್ಲಿ ಹಲವು ದಿನಗಳಿಂದ ಗೋಕಳ್ಳರು ಸಕ್ರೀಯಗೊಂಡಿದ್ದು ಇದು ಅವರದ್ದೇ ಕೃತ್ಯವಾಗಿರಬಹುದು ಎಂಬ ಶಂಕೆಯು ವ್ಯಕ್ತವಾಗುತ್ತಿದೆ. ಗೋ ಕಳುವು ಮಾಡಲು ಬಂದ ತಂಡದವರು ರಾತ್ರಿ ವ್ಯಕ್ತಿಯನ್ನು ಕಂಡು ಗಬಾರಿಗೊಂಡಿದ್ದು ತಮ್ಮ ಮುಖವಾಡ ಕಳಚಿಬೀಳಬಹುದು ಎಂಬ ಭಯದಿಂದ ಹಲ್ಲೆಗೈಯಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು ಪೊಲೀಸ್ ತನಿಖೆಯಿಂದಲೇ ಸತ್ಯತೆ ಹೊರಬೀಳಲಿದೆ.