ಭಟ್ಕಳ:೩೦ ರಿಂದ ೮೦ಮೀ ಗೆ ಹೆಚ್ಚಿಸಿದ ಹೆದ್ದಾರಿ ಅಗಲಿಕರಣ
· ಸಾರ್ವಜನಿಕರಿಂದ ತೀವ್ರ ಅಸಮಧಾನ; ಅ.೧೬ರಂದು ಬೃಹತ್ ಪ್ರತಿಭಟನೆಗೆ ನಿರ್ಧಾರ
ಭಟ್ಕಳ: ಮಂಗಳೂರಿನಿಂದ ಗೋವಾದ ವರೆಗಿನ ರಾ.ಹೆ. ಅಗಲಿಕರಣ ಕಾರ್ಯ ಪ್ರಗತಿಯಲ್ಲಿದ್ದು ಭಟ್ಕಳದಲ್ಲಿ ಮಾತ್ರ ಇದಕ್ಕೆ ಹಲವು ಅಪಸ್ವರಗಳು ಕೇಳಿ ಬರುತ್ತಿವೆ. ಆರಂಭದಿಂದಲೇ ಹೆದ್ದಾರಿ ಅಗಲಿಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಪ್ರತಿಭಟನೆಗಳನ್ನು ನಡೆಸುತ್ತಿದ್ದು ೩೦ಮೀಟರ್ ನಿಂದ ೮೦-೮೫ ಮೀಟರ್ ರಸ್ತೆ ಅಗಲಿಕರಣಕ್ಕೆ ಹೆದ್ದಾರಿ ಪ್ರಧಿಕಾರವು ಯೋಜಿಸುತ್ತಿದೆ ಎನ್ನುವ ಮಾಹಿತಿ ಮೆರೆಗೆ ಭಟ್ಕಳದ ಸಾರ್ವಜನಿಕರು ಮತ್ತೊಮ್ಮೆ ಹೆದ್ದಾರಿ ಅಗಲಿಕರಣದ ವಿರುದ್ಧ ಅ.೧೬ ರಂದು ಪ್ರತಿಭಟನೆ ನಡೆಸಲು ಸಿದ್ದತೆ ನೆಡಿಸಿದ್ದಾರೆ.
ರವಿವಾರ ಸಂಜೆ ನವಾಯತ್ ಕಾಲೋನಿಯ ರಾಬಿತಾ ಸಭಾಭವನದಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಈ ನಿರ್ಣಯವನ್ನು ಕೈಗೊಂಡಿದ್ದು ರಾಷ್ಟ್ರೀಯ ಹೆದ್ದಾರಿಯನ್ನು ಬೈಪಾಸ್ ಮೂಲಕ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಸಹಾಯಕ ಕಮಿಷನರ್ ಮೂಲಕ ಮನವಿಯನ್ನು ಅರ್ಪಿಸಲಾಗುತ್ತಿದ್ದು ಭಟ್ಕಳದಲ್ಲಿ ಮತ್ತೊಮ್ಮೆ ಹೆದ್ದಾರಿ ಅಗಲಿಕರಣದ ವಿಷಯ ಚರ್ಚೆಗೆ ಬಂದಂತಾಗಿದೆ.
ಸಾರ್ವಜನಿಕರ ಮನವಿಗೆ ಸರ್ಕಾರ ಅಥವಾ ಹೆದ್ದಾರಿ ಪ್ರಾಧಿಕಾರಿ ಸ್ಪಂಧನೆ ನೀಡದೆ ಇದ್ದಲ್ಲಿ ಭಟ್ಕಳದ ಹಿಂದೂ, ಮುಸ್ಲಿಮ್, ಕ್ರೈಸ್ಥರೆನ್ನದೆ ಎಲ್ಲ ಸಮುದಾಯದ ಜನರು ಸೇರಿ ಭಟ್ಕಳ ಬಂದ್ ಮಾಡುವುದರ ಮೂಲಕ ಸರ್ಕಾರದ ಗಮನವನ್ನು ಸೆಳೆಲಾಗುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಗಿದೆ.
ಹೆದ್ದಾರಿ ಅಗಲಿಕರಣಕ್ಕೆ ಈ ಹಿಂದೆ ೩೦ಮೀಟರ್ ನಿಗದಿಗೊಳಿಸಿದ್ದು ಅದರಂತೆ ಪ್ರಾಧಿಕಾರವು ಭೂಮಿಯನ್ನು ಸ್ವಾಧೀನಕ್ಕೊಳಪಡಿಸಿತ್ತು. ಇದರಿಂದ ನಗರ ವ್ಯಾಪ್ತಿಯಲ್ಲಿರುವ ಮನೆ,ಅಂಗಡಿಗಳಿಗೆ ಹೆಚ್ಚಿನ ತೊಂದರೆ ಆಗುತ್ತಿರಲಿಲ್ಲ. ಆದರೆ ಈಗ ಲಭ್ಯ ಮಾಹಿತಿಯಂತೆ ನಗರದ ಹೃದಯಭಾಗವಾಗಿರುವ ಶಮ್ಸುದ್ದೀನ್ ವೃತ್ತದಲ್ಲಿ ಪ್ಲೈ ಓವರ್ ನಿರ್ಮಾಣ ಮಾಡುವುದು, ಬಂದರ್ ರೋಡ್ ನಿಂದ ಸಾಗರ್ ರೋಡ್ ಗೆ ಒಳರಸ್ತೆ ನಿರ್ಮಿಸಲಾಗುವುದು ಇದಕ್ಕಾಗಿ ಶಮ್ಸುದೀನ್ ಸರ್ಕಲ್ ನಲ್ಲಿ ೮೦ ರಿಂದ ೮೫ ಮೀಟರ್ ನಷ್ಟು ಸ್ಥಳವನ್ನು ಅತಿಕ್ರಮಿಸಲಾಗುವುದು. ಒಂದು ವೇಳೆ ಹೀಗೆ ಮಾಡಿದ್ದೇ ಆದಲ್ಲಿ ಶಮ್ಸುದ್ದೀನ್ ವೃತ್ತದ ಬಳಿ ಇರುವ ಎಲ್ಲರೂ ತಮ್ಮ ಮನೆಮಠ,ಅಂಗಡಿ ಆಸ್ತಿಯನ್ನು ಕಳೆದುಕೊಳ್ಳಬೇಕಾದೀತು ಎನ್ನುವ ಆತಂಕ ಸಾರ್ವಜನಿಕರಲ್ಲಿ ವ್ಯಕ್ತವಾಗುತ್ತಿದೆ. ಈ ಹೊಸ ಯೋಜನೆಯ ವಿರುದ್ಧ ಭಟ್ಕಳದ ಸಾರ್ವಜನಿಕರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದು ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಅಧ್ಯಕ್ಷ ಮುಝಮ್ಮಿಲ್ ಖಾಜೀಯಾ ಮಾಹಿತಿ ಹಕ್ಕಿನಡಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿದ್ದು ಹೆದ್ದಾರಿ ನಗರದ ಹೊರಗಡೆಯಿಂದ ನಿರ್ಮಾಣ ಮಾಡುವಂತೆ ಅಗ್ರಹಿಸಿದ್ದಾರೆ.
ಹೆದ್ದಾರಿಯನ್ನು ಬೈಪಾಸ್ ಮೂಲಕ ನಿರ್ಮಾಣಕ್ಕೆ ಆಗ್ರಹಿಸಿ ನಡೆಯುವ ಪ್ರತಿಭಟನೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಭೆಯಲ್ಲಿ ಕೋರಲಾಗಿದೆ. ಇದಕ್ಕಾಗಿ ಪ್ರತ್ಯೇಕ ಸಮಿತಿಯೊಂದನ್ನು ರಚಿಸಿದ್ದು ಎಸ್.ಎಂ.ಪರ್ವೇಝ್ ಇದರ ಸಂಚಾಲಕರಾಗಿದ್ದಾರೆ. ರಾಜೇಶ್ ನಾಯಕ, ಅಲ್ತಾಫ್ ಖರೂರಿ, ಇನಾಯತುಲ್ಲಾ ಶಾಬಂದ್ರಿ, ಎಲ್.ಎಸ್.ನಾಯ್ಕ, ಮೊಹತೆಶಮ್ ಅಬ್ದುಲ್ ರಹ್ಮಾನ್ ಜಾನ್, ಮೊಹತೆಶಮ್ ಮಂಡೇಸಾಯಿಬ್ ಸಮಿತಿಯ ಸದಸ್ಯರಾಗಿದ್ದಾರೆ.