ಭಟ್ಕಳ: ತಾಲೂಕಿನ ವಿವಾದಿತ ಕೇಂದ್ರವಾಗಿ ಬದಲಾಗಿರುವ ಭಟ್ಕಳ ಮುರಿನಕಟ್ಟೆ ಪ್ರದೇಶಕ್ಕೆ ರವಿವಾರ ರಾತ್ರಿ ತೆರಳಿ, ಬೈಗುಳಗಳೊಂದಿಗೆ ಪೊಲೀಸರ ಮೇಲೇರಿ ಹೋದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂವರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಆರೋಪಿಗಳನ್ನು ತಾಲೂಕಿನ ಹುರುಳಿಸಾಲ ನಿವಾಸಿಗಳಾದ ಲಕ್ಷ್ಮಣ ನಾಗಪ್ಪ ನಾಯ್ಕ (32), ನಾಗರಾಜ ಕನ್ನಯ್ಯ ನಾಯ್ಕ (29) ಹಾಗೂ ಕಾರಗದ್ದೆಯ ರವಿ ಚಂದ್ರು ನಾಯ್ಕ ಎಂದು ಗುರುತಿಸಲಾಗಿದೆ.
ಆರೋಪಿಗಳು ರವಿವಾರ ರಾತ್ರಿ 11.30 ಸುಮಾರಿಗೆ ವಿವಾದಿತ ಸ್ಥಳಕ್ಕೆ ತೆರಳಿದ್ದು, ರಾತ್ರಿಯ ವೇಳೆ ಮುರಿನಕಟ್ಟೆ ಬಳಿ ಬಂದಿದ್ದು ಏಕೆ ಎಂದು ಪೊಲೀಸರು ಪ್ರಶ್ನಿಸಿದ್ದಾರೆ. ಇದರಿಂದ ಸಿಡಿಮಿಡಿಗೊಂಡ ಆರೋಪಿಗಳು, ಅದನ್ನು ಕೇಳಲು ನೀವು ಯಾರು, ನಮ್ಮನ್ನು ನೀವು ಏನು ಮಾಡಲಿಕ್ಕೂ ಆಗುವುದಿಲ್ಲ, ನಿಮ್ಮನ್ನು ನಾವು ಬಿಡುವುದಿಲ್ಲ ಎನ್ನುತ್ತಾ ಪೊಲೀಸರ ಮೇಲೇರಿ ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ದಿವಾಕರ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ.