ಭಟ್ಕಳ ಸರಕಾರಿ ಆಸ್ಪತ್ರೆಗೆ ಶಾಸಕ ಸುನಿಲ್ ನಾಯ್ಕರಿಂದ ಅಂಬುಲೆನ್ಸ್ ಕೊಡುಗೆ
ಭಟ್ಕಳ: ಕೋವಿಡ್ ಸಂಕಷ್ಟ ಕಾಲದಲ್ಲಿ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಶಾಸಕ ಸುನಿಲ್ ನಾಯ್ಕ, ಆಮ್ಲಜನಕವನ್ನು ಒಳಗೊಂಡ ಅಂಬುಲೆನ್ಸ್ನ್ನು ಭಟ್ಕಳ ಸರಕಾರಿ ಆಸ್ಪತ್ರೆಗೆ ದೇಣಿಗೆಯಾಗಿ ನೀಡಿದರು.
ರವಿವಾರ ನೂತನ ಅಂಬುಲೆನ್ಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸದ್ಯದ ಪರಿಸ್ಥಿತಿಯಲ್ಲಿ ಜನರು ಒತ್ತಡದಲ್ಲಿದ್ದು, ಅಂಬುಲೆನ್ಸ್ ಸೇವೆ ಅತ್ಯಗತ್ಯವಾಗಿದೆ. ಹಳ್ಳಿಹಳ್ಳಿಗಳಿಂದ ಅಂಬುಲೆನ್ಸ್ಗಾಗಿ ಜನರು ಕರೆ ಮಾಡುತ್ತಿದ್ದು, ಸರಿಯಾದ ಸಮಯಕ್ಕೆ ಅಂಬುಲೆನ್ಸ್ ಒದಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಶಾಸಕನನ್ನಾಗಿ ಆಯ್ಕೆ ಮಾಡಿದ ಜನರೊಂದಿಗೆ ನಿಲ್ಲುವ ಹೊಣೆಗಾರಿಕೆ ನನ್ನ ಮೇಲೆ ಇದ್ದು, ಜನರು ಈ ಅಂಬುಲೆನ್ಸ್ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿವರಿಸಿದರು.
ಭಟ್ಕಳ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ಮಾತನಾಡಿ, ಸರಕಾರಿ ಅಂಬಲೆನ್ಸ್ ಸೇವೆಯನ್ನು ಪಡೆಯಲು ಕೆಲವು ಮಿತಿಗಳಿದ್ದು, ಈ ಬಗ್ಗೆ ಜನರಲ್ಲಿ ಗೊಂದಲಗಳಿದ್ದವು. ಈಗ ಶಾಸಕರು ಅಂಬುಲೆನ್ಸ್ ನೀಡಿರುವುದರಿಂದ ಅಂಬುಲೆನ್ಸ್ಗೆ ಸಂಬಂಧಿಸಿದ ಹೆಚ್ಚಿನ ಸಮಸ್ಯೆಗಳು ಮುಂದಿನ ದಿನಗಳಲ್ಲಿ ಬಗೆ ಹರಿಯುವ ವಿಶ್ವಾಸ ಇದೆ ಎಂದು ವಿವರಿಸಿದರು.
ಭಟ್ಕಳ ಬಿಜೆಪಿ ಘಟಕದ ಅಧ್ಯಕ್ಷ ಸುಬ್ರಾಯ ದೇವಡಿಗ, ರಾಜೇಶ ನಾಯ್ಕ ಮುಂಡಳ್ಳಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮಹೇಂದ್ರ ನಾಯ್ಕ, ರಮೇಶ ನಾಯ್ಕ ಕಂಡೆಕೊಡ್ಲು, ಶ್ರೀಕಾಂತ ನಾಯ್ಕ ಆಸರಕೇರಿ, ನಿಸಾರ್ ಅಹ್ಮದ್ ರುಕ್ನುದ್ದೀನ್ ಉಪಸ್ಥಿತರಿದ್ದರು.