ಭಟ್ಕಳ: ರಷ್ಯಾದ ದಾಳಿಯಿಂದಾಗಿ ಇಡೀ ಉಕ್ರೇನ್ ದೇಶ ಭಯಭೀತ ವಾಗಿದೆ. ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಭಾರತೀಯರನ್ನು ವಾಪಸ್ಸು ಕರೆ ತರಲು ಕೇಂದ್ರ ಸರಕಾರ ಪ್ರಯತ್ನ ಮುಂದುವರೆಸಿದೆ. ಈ ನಡುವೆ ಉಕ್ರೇನ್ನಲ್ಲಿ ಎಮ್ಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಭಟ್ಕಳ ಮೂಲದ ವಿದ್ಯಾರ್ಥಿನಿಯೋರ್ವಳು ಉಕ್ರೇನ್ ಯುದ್ಧವನ್ನು ಮೊದಲೇ ಊಹಿಸಿಕೊಂಡು ಕಳೆದ ಫೆ.19ರಂದೇ ಭಾರತಕ್ಕೆ ವಾಪಸ್ಸಾಗಿರುವ ಬಗ್ಗೆ ಮಾಹಿತಿ ಲಭಿಸಿದೆ.
ಭಟ್ಕಳ ಬಂದರ್ ರೋಡ್ 5ನೇ ಕ್ರಾಸ್ನ ನಿವಾಸಿ, ಸದ್ಯ ಕೊಲ್ಲಾಪುರದಲ್ಲಿ ನೆಲೆಸಿರುವ ರುಕಿಯಾ ಮೆಹ್ವೇಶ್ ತಂದೆ ಅಬ್ದುಲ್ ಹಮೀದ್ ಭಾರತಕ್ಕೆ ವಾಪಸ್ಸಾದ ವಿದ್ಯಾರ್ಥಿನಿಯಾಗಿದ್ದಾಳೆ. ರುಕಿಯಾ ಎಮ್ಬಿಐಎಸ್ 2ನೇ ವರ್ಷದ ವಿದ್ಯಾರ್ಥಿಯಾಗಿದ್ದು, ಈ ದೆಹಲಿ ಮೂಲದ ನಾಲ್ವರು ವಿದ್ಯಾರ್ಥಿನಿಯರೊಂದಿಗೆ ಉಕ್ರೇನ್ನ ಹಾಸ್ಟೆಲ್ವೊಂದರಲ್ಲಿ ತಂಗಿದ್ದಳು. ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸುವ ಸಾಧ್ಯತೆಯ ಬಗ್ಗೆ ಸುದ್ದಿಮಾಧ್ಯಮಗಳು ಬಿತ್ತರಿಸುತ್ತಿದ್ದಂತೆಯೇ ರುಕಿಯಾ ಹಾಗೂ ಆಕೆಯ ಸಹಪಾಠಿಗಳು ಕಂಗಾಲಾಗಿದ್ದರು. ರುಕಿಯಾ ಗೆಳತಿಯರು ಭಾರತಕ್ಕೆ ವಾಪಸ್ಸು ಬರಲು ಸಿದ್ಧರಾಗಿ, ಹೊರಡುವ ಮುನ್ನ ರುಕಿಯಾ ತಾಯಿಯನ್ನು ಸಂಪರ್ಕಿಸಿದ್ದಾರೆ.
ಉಕ್ರೇನ್ನಲ್ಲಿರುವ ಪರಿಸ್ಥಿತಿಯನ್ನು ವಿವರಿಸಿ ರುಕಿಯಾಳನ್ನು ಭಾರತಕ್ಕೆ ಕರೆದುಕೊಂಡು ಬರುವ ಬಗ್ಗೆ ತಿಳಿಸಿದ್ದಾರೆ. ಇದಕ್ಕೆ ರುಕಿಯಾಳ ತಾಯಿ ಒಪ್ಪಿದ್ದು, ದೆಹಲಿಯ ಗೆಳತಿಯರು ಆಕೆಯನ್ನು ಭಾರತಕ್ಕೆ ಕರೆದುಕೊಂಡು ಬಂದಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈ ಕುರಿತು ಸಾಹಿಲ್ ಆನ್ಲೈನ್ ಗೆ ಮಾಹಿತಿ ನೀಡಿರುವ ರುಕಿಯಾ ತಾಯಿ ತೈಬಾ, ಯುದ್ಧ ಶುರುವಾಗುವ ಮೊದಲೇ ಮಗಳು ಭಾರತಕ್ಕೆ ವಾಪಸ್ಸಾಗಿರುವುದರಿಂದ ಅತಂಕ ದೂರವಾಗಿದೆ ಎಂದು ತಿಳಿಸಿದ್ದಾರೆ.