ಯಶಸ್ವಿಯಾಗಿ ನೆಡೆದ ಉದ್ಯೋಗ ಮೇಳ: ಸಂಘಟಕರ ಶ್ರಮಕ್ಕೆ ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಮೆಚ್ವುಗೆ
ಭಟ್ಕಳ: ತಾಲೂಕಿನಲ್ಲಿ ಅಭಿವೃದ್ಧಿಯ ನಿಟ್ಟಿನಲ್ಲಿ ಸಾಕಷ್ಟು ಮಂದಿ ಉದ್ಯೋಗ ನಿರ್ಮಾಣಕ್ಕೆ ಪಣ ತೊಟ್ಟಿದ್ದು ಉತ್ತಮ ವೇದಿಕೆಯನ್ನು ನಿರ್ಮಿಸಿದ್ದಾರೆ. ಇದರಿಂದಾಗಿ ಉತ್ತಮ ವಾತಾವರಣದ ಸೃಷ್ಟಿಯಾಗಿ ಉದ್ಯೋಗಾಕಾಂಕ್ಷಿಗಳಿಗೆ ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಕೆ. ಹೇಳಿದರು.
ಅವರು ಶನಿವಾರದಂದು ಇಲ್ಲಿನ ನವಾಯತ ಕಾಲೋನಿಯ ಕುಶಾಲ್ ಸಭಾ ಭವನದಲ್ಲಿ ಇಂಡಿಯನ್ ನವಾಯತ್ ಫೋರಂ ವತಿಯಿಂದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಳೆದ ಕೆಲವು ವರ್ಷಗಳ ಹಿಂದೆ ಭಟ್ಕಳದಲ್ಲಿ ಸಹಾಯಕ ಆಯುಕ್ತರಾಗಿ ಕೆಲಸ ನಿರ್ವಹಿಸಿದ್ದು ಈ ತಾಲೂಕಿನಲ್ಲಿ ಪ್ರಜ್ಞಾವಂತ ಜನರಿದ್ದಾರೆ. ಉದ್ಯೋಗ ಸೃಷ್ಟಿಗೆ ಒಂದು ಅರ್ಥಪೂರ್ಣ ಕಾರ್ಯಕ್ರಮವನ್ನು ನಿರ್ಮಾಣ ಮಾಡಿದ್ದು, ಇದು ಜಿಲ್ಲಾ ಮಟ್ಟದಲ್ಲಿಯೂ ಸಹಕಾರಿಯಾಗಲಿದೆ. ಯಾರೊಬ್ಬರೇ ಆಗಲಿ ಜನರ ಸೇವೆಗಾಗಿ ಬಂದಿದ್ದು, ಅದರ ಜವಾಬ್ದಾರಿ ಅರಿತು ಕಾರ್ಯ ಮಾಡಬೇಕು. ಕೊನೆಯಲ್ಲಿ ಅವರ ಸೇವೆ ಮೇಲ್ದರ್ಜೇ ಬರಲಿದೆ ಹೊರತು ಹಣ ಅಥವಾ ಇನ್ಯಾವುದೇ ಅಂಶ ಗಣನೆಗೆ ಬರುವುದಿಲ್ಲ ಎಂದ ಅವರು ಸದ್ಯ ಚುನಾವಣಾ ಆಯೋಗದ ನಿಯೋಜಿತ ಅಧಿಕಾರಿಯಾಗಿದ್ದು, ಲೋಕಸಭಾ ಚುನಾವಣಾ ಫಲಿತಾಂಶ ಬಳಿಕ ತಾಲೂಕಿಗೆ ಭೇಟಿ ನೀಡಿ ನಗರ ಅಭಿವೃದ್ಧಿ ನಿಟ್ಟಿನಲ್ಲಿ ಜವಾಬ್ದಾರಿಯುತ ಕೆಲಸ ನಿರ್ವಹಿಸಲಿದ್ದೇವೆ. ಮೇಳದಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಎಲ್ಲಾ ಅಭ್ಯರ್ಥಿಗಳಿಗೆ ಶುಭವಾಗಲಿ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಕಾರವಾರ ಕೈಗಾರಿಕೆ ಕೇಂದ್ರ ಜಂಟಿ ನಿರ್ದೇಶಕ ಧನಂಜಯ ಹೆಗಡೆ ಭಾಗವಹಿಸಿ ಮಾತನಾಡಿ ‘ಉದ್ಯೋಗ ಸೃಷ್ಟಿಯಿಂದ ಮಾತ್ರ ಒಂದು ತಾಲೂಕಿನ ಅಭಿವೃದ್ದಿ ಸಾಧ್ಯ. ಸದ್ಯ ವಿದೇಶದಿಂದಲೂ ಕೂಡಾ ಸಾಕಷ್ಟು ಜನರು ಊರಿಗೆ ವಾಪಾಸು ಬರುತ್ತಿದ್ದು ಅವರಿಗೆ ಉತ್ತಮ ಉದ್ಯೋಗದ ಅನಿವಾರ್ಯತೆ ಎದುರಾಗಿದೆ. ತಾಲೂಕಿನಲ್ಲಿ ಹೆಚ್ಚಿನದಾಗಿ ಕೈಗಾರಿಕೆ ನಿರ್ಮಾಣದ ಜೊತೆಗೆ ಸ್ವಯಂ ಉದ್ಯೋಗದ ಸೃಷ್ಠಿಯ ಅವಶ್ಯಕತೆ ಇದ್ದು ಆದರೆ ಕೈಗಾರಿಕೆ ನಿರ್ಮಾಣಕ್ಕೆ ಸ್ಥಳ ನಿಗದಿ ಪ್ರಮುಖವಾಗಿದೆ. ಈ ವ್ಯಾಪ್ತಿಯಲ್ಲಿ ಖಾಸಗಿ ಹಾಗೂ ಕೋ ಆಪರೇಟಿವ ಕೈಗಾರಿಕೆ ನಡೆಸಬಹುದಾಗಿದ್ದು, ಇದಕ್ಕೆ ಸರಕಾರ ಮಟ್ಟದಿಂದ ಎಲ್ಲಾ ಸೌಲಭ್ಯ-ಸಹಕಾರಿ ದೊರಕಲಿದೆ ಹಾಗೂ ಕೈಗಾರಿಕೆ ನಡೆಸುವವರ ಆಲೋಚನೆ, ಚಿಂತನೆ ಅವರ ಆಸಕ್ತಿ ಇವೆಲ್ಲದರ ಬಗ್ಗೆ ಮಾಹಿತಿ ಪಡೆದು ಸ್ವಯಂ ಉದ್ಯೋಗಕ್ಕೆ ಅವಕಾಶ ನೀಡಲಿದ್ದೇವೆ ಎಂದು ಹೇಳಿದರು.
ಉದ್ಯೋಗ ಮೇಳದಲ್ಲಿ 500ಕ್ಕೂ ಅಧಿಕ ಉದ್ಯೋಗಾಂಕಾಕ್ಷಿಗಳು ರಿಜಿಸ್ಟ್ರೇಶನ ಮಾಡಿಕೊಂಡಿದ್ದು, ಈ ಪೈಕಿ 100ಕ್ಕೂ ಅಧಿಕ ಜನರಿಗೆ ಉದ್ಯೋಗ ಲಭಿಸಿದ್ದು ಇನ್ನುಳಿದವರು ಮೊದಲ ಹಂತದ ಸಂದರ್ಶನದಲ್ಲಿ ತೇರ್ಗಡೆಗೊಂಡಿದ್ದು ಮುಂದಿನ ಹಂತದ ಸಂದರ್ಶನಕ್ಕಾಗಿ ಕಂಪನಿಗೆ ಬರಬೇಕೆಂದು ಕಂಪನಿಯಿಂದ ತಿಳಿಸಲಾಗಿದೆ.ಸ್ವಯಂ ಉದ್ಯೋಗ ದಡಿಯಲ್ಲಿ ರಿಜಿಸ್ಟ್ರೇಶನ ಮಾಡಿದ 102 ಅಭ್ಯರ್ಥಿಗಳ ಪೈಕಿ ಮಂಗಳೂರಿನ ಹಂಪನಕಟ್ಟೆಯ ಮೋಹತೇಶಾಮ ಬಿಲ್ಡರ್ಸ ವತಿಯಿಂದ 52 ಅಂಗಡಿ ಬಾಡಿಗೆ ಇಲ್ಲದೇ ಒಂದು ವರ್ಷದ ಅವಧಿಯ ವರೆಗೆ ಸ್ವಂತ ಉದ್ಯೋಗಕ್ಕೆ ಸ್ಥಳಾವಕಾಶ ಮಾಡಿಕೊಟ್ಟಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಎಂ.ಅರ್ಷದ ಅವರು ವಹಿಸಿದ್ದರು.
ಈ ಸಂಧರ್ಭದಲ್ಲಿ ಇಂಡಿಯನ್ ನವಾಯತ್ ಫೋರಂ ಅಧ್ಯಕ್ಷ ಅಬ್ದುಲ್ ಮಜೀದ್ ಜುಕಾಕು ಪ್ರಾಸ್ತಾವಿಕ ಮಾತನಾಡಿದರು.
ಸಂಚಾಲಕ ಅಫ್ತಾಬ್ ಹುಸೇನ್ ಕೋಲಾ ಅವರು ಪೋರಂನ ಉದ್ದೇಶ, ಗುರಿಗಳ ಬಗ್ಗೆ ವಿವರಿಸಿದರು. ಸದಸ್ಯ ನೌಮಾನ್ ಪಟೇಲ್, ಆದಿಲ್ ನಾಗರಮಠ, ಅಮೀನ್ ಅಕ್ರಮಿ, ಸಾದಾ ಖಲೀಲ್ ಮುಂತಾದವರು ಉಪಸ್ಥಿತರಿದ್ದರು.