ಭಟ್ಕಳ ಅಲ್ಪಸಂಖ್ಯಾತ ಬಾಲಕರ ವಸತಿ ನಿಲಯಕ್ಕೆ ನುಗ್ಗಿ ದಾಂಧಲೆ ನಡೆಸಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು ನಗರ ಠಾಣೆಯಲ್ಲಿ ದೂರು ದಾಖಲು
ವಿದ್ಯಾರ್ಥಿಗಳ ಮೇಲೆ ಹಲ್ಲೆಗೈದ ಆರೋಪಿಗಳ ಬಂಧನಕ್ಕೆ ವಿದ್ಯಾರ್ಥಿಗಳ ಆಗ್ರಹ
ಭಟ್ಕಳ: ಇಲ್ಲಿನ ಸರ್ಕಾರಿ ಆಸ್ಪತ್ರೆಯ ಬಳಿ ಇರುವ ಮೆಟ್ರಿಕ್ ನಂತರದ ಅಲ್ಪಸಂಖ್ಯಾತರ ವಸತಿ ನಿಲಯಕ್ಕೆ ನುಗ್ಗಿ ದಾಂಧಲೆ ನಡೆಸಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ಭಾನುವಾರ ರಾತ್ರಿ ೧೧ಗಂಟೆ ಸುಮಾರು ನಡೆದಿದೆ.
ಈ ಕುರಿತಂತೆ ನಿಲಯ ಪಾಲಕ ನಾಗೇಂದ್ರ ಎಸ್. ಎನ್ನುವವರು ಭಟ್ಕಳ ನಗರ ಠಾಣೆಯಲ್ಲಿ ಹುರುಳಿಸಾಲ್ ನಿವಾಸಿ ರಾಘವೇಂದ್ರ ಅಲಿಯಾಸ್ ಬಾಬು ರಾಮಾ ನಾಯ್ಕ, ತಲಗೋಡ ನಿವಾಸಿ ನಂದನ ಜೈನ್ ಹಾಗೂ ಮತ್ತೊಬ್ಬ ಅನಾಮಧೇಯ ವ್ಯಕ್ತಿಯ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ದಾಖಲಿಸಿದ್ದಾರೆ.
ಘಟನೆಯ ವಿವರ: ಬಲ್ಲ ಮೂಲಗಳ ಪ್ರಕಾರ ಡಿ.೩೧ರ ರಾತ್ರಿ ೧೧ ಗಂಟೆ ಸುಮಾರು ಹಾಸ್ಟೆಲ್ ಮೂವರು ವಿದ್ಯಾರ್ಥಿಗಳು ಔಷಧಿಯನ್ನು ತರುವ ಉದ್ದೇಶದಿಂದ ಮೆಡಿಕಲ್ ಶಾಪ್ ಗೆ ಹೋಗಿದ್ದರು ಎನ್ನಲಾಗಿದ್ದು ಸಾಗರ ರಸ್ತೆಯಲ್ಲಿ ನಾಲ್ಕೈದು ಮಂದಿ ಕುಡಿದ ನಶೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಮಾತು ಮಾತಿಗೆ ಬೆಳೆದು ಆರೋಪಿಗಳು ವಿದ್ಯಾರ್ಥಿಗಳ ಮೇಲೆ ಕೈಮಾಡಿದ್ದಾರೆ. ಹೆದರಿಕೊಂಡ ವಿದ್ಯಾರ್ಥಿಗಳು ಹಾಸ್ಟೆಲ್ ಗೆ ಓಡಿ ಬಂದಿದ್ದಾರೆ ಅವರನ್ನು ಹಿಂಬಾಲಿಸಿಕೊಂಡು ಬಂದ ಆರೋಪಿಗಳು ಹಾಸ್ಟೆಲ್ ಒಳಗೆ ನುಗ್ಗಿ ದಾಂಧಲೆ ನಡೆಸಿದ್ದು ಅಲ್ಲದೆ ವಿದ್ಯಾರ್ಥಿಯೊಬ್ಬನ ತಲೆಗೆ ಕ್ರಿಕೆಟ್ ಬ್ಯಾಟ್ ನಿಂದ ಹಲ್ಲೆಯೂ ಮಾಡಿದ್ದಾನೆ. ಈ ಎಲ್ಲ ದೃಷ್ಶಾವಳಿಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಹಾಸ್ಟೆಲ್ ನ ಮೇಲ್ವಿಚಾರಕ ನಾಗೇಂದ್ರರವರು, ರಾತ್ರಿ ಕೈಯಲ್ಲಿ ಕೋಲು, ಕ್ರಿಕೆಟ್ ಸ್ಟಂಪ್ ಹಿಡಿದುಕೊಂಡು ಬಂದು ವಸತಿ ನಿಲಯದೊಳಗೆ ನುಗ್ಗಿ ಹಾಸ್ಟೆಲ್ ಕೋಣೆಯ ಬಾಗಿಲು, ಪ್ಲಾಸ್ಟಿಕ್ ಕುರ್ಚಿಗಳು ದ್ವಂಸಗೊಳಿಸಿದ್ದಾರೆ. ಹಾಸ್ಟೆಲ್ ವಿದ್ಯಾರ್ಥಿಗೆ ಕೋಲಿನಿಂದ ಬಲವಾಗಿ ಹಲ್ಲೆ ಮಾಡಿ ಗಾಯಗೊಳಿಸಿದ್ದು ನಿಮ್ಮನ್ನು ನೋಡಿಕೊಳ್ಳುತ್ತೇವೆ ಎಂದು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ತಿಳಿಸಿದ್ದಾರೆ. ವಿದ್ಯಾರ್ಥಿಗಳ ಮೇಲಿನ ಹಲ್ಲೆ ಪ್ರಕರಣ ಅತ್ಯಂತ ಗಂಭೀರವಾಗಿದ್ದು ಕೂಡಲೇ ಪೊಲೀಸರು ಆರೋಪಿಗಳನ್ನು ಬಂಧಿಸ ಕಾನೂನು ಕ್ರಮ ಜರುಗಿಸಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ದೂರನ್ನು ದಾಖಲಿಸಿಕೊಂಡಿರುವ ಭಟ್ಕಳ ಶಹರ ಠಾಣೆಯ ಪಿ.ಎಸ್. ಐ ಶಿವಾನಂದ ನಾವದಗಿ ತನಿಖೆ ಕೈಗೊಂಡಿದ್ದಾರೆ.