ಚತುಷ್ಪತ ಹೆದ್ದಾರಿ ಸಮಸ್ಯೆಗೆ ಮಾಜಿ ಸಚಿವ ದೇಶಪಾಂಡೆಯವರ ಮೇಲೆ ದೋಷ ಹೊರಿಸಿರುವುದು ಸರಿಯಲ್ಲ:ಮಾಜಿ ಶಾಸಕ ಜೆ.ಡಿ. ನಾಯ್ಕ

Source: S.O. News Service | By MV Bhatkal | Published on 12th April 2021, 8:04 PM | Coastal News |

ಮಾಜಿ ಸಚಿವ ಆರ್.ವಿ. ದೇಶಪಾಂಡೆಯವರೇ ಕಾರಣ ಎನ್ನುವ ಶಾಸಕ ಸುನಿಲ್ ನಾಯ್ಕ ಅವರ ಹೇಳಿಕೆ ಖಂಡನೀಯ


ಭಟ್ಕಳ: ಜಿಲ್ಲೆಯ ಚತುಷ್ಪತ ಹೆದ್ದಾರಿ ಸಮಸ್ಯೆಗೆ ಮಾಜಿ ಸಚಿವ ಆರ್.ವಿ. ದೇಶಪಾಂಡೆಯವರೇ ಕಾರಣ ಎನ್ನುವ ಶಾಸಕ ಸುನಿಲ್ ನಾಯ್ಕ ಅವರ ಹೇಳಿಕೆ ಖಂಡನೀಯ, ಇದೊಂದು ಬಾಲಿಷವಾದ ಹೇಳಿಕೆ ಎಂದು ಮಾಜಿ ಶಾಸಕ ಜೆ.ಡಿ. ನಾಯ್ಕ ಹೇಳಿದ್ದಾರೆ. ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. 
ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯು ಕೇಂದ್ರ ಪುಸ್ಕøತ ಯೋಜನೆಯಾಗಿದ್ದು ಸಂಪೂರ್ಣ ಕೇಂದ್ರ ಸರಕಾರದ ಹಿಡಿತದಲ್ಲಿರುತ್ತದೆ. ಕಾಲ ಕಾಲಕ್ಕೆ ಆ ಪ್ರದೇಶದ ಸಂಸದರು ಜನರೊಂದಿಗೆ ಬೆರೆತು ಜನರಿಗೆ ಅಗತ್ಯವಿರುವೆಡೆಗಳಲ್ಲಿ ಯಾವರೀತಿಯಾಗಬೇಕು ಎಂದು ತಿಳಿದುಕೊಂಡು ಆ ರೀತಿ ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ಮಾಡಬೇಕಾಗುತ್ತದೆ. ಅದನ್ನು ಬಿಟ್ಟು ಶಾಸಕರು ಮಾಜಿ ಸಚಿವ ದೇಶಪಾಂಡೆಯವರ ಮೇಲೆ ದೋಷ ಹೊರಿಸಿರುವುದು ಸರಿಯಲ್ಲ. ಸಾಮಾನ್ಯವಾಗಿ ಉಸ್ತುವಾರಿ ಸಚಿವರಿದ್ದಾಗ ಸಾರ್ವಜನಿಕರು ಅರ್ಜಿ ಕೊಡುತ್ತಾರೆ. ಅದನ್ನು ರಾಜ್ಯಕ್ಕೋ, ಕೇಂದ್ರಕ್ಕೋ ಕಳುಹಿಸುವುದು ಸಾಮಾನ್ಯವಾಗಿದೆ. ಆ ರೀತಿ ಪತ್ರ ಬರೆಯುವುದನ್ನೇ ಪ್ರಶ್ನಿಸಲಾಗದು ಎಂದ ಅವರು ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೂ ಮೊದಲು ಸಾಕಷ್ಟು ಕಡೆಗಳಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲಾಗಿತ್ತು.  ಆಗ ಅಲ್ಲಿಯೂ ಕೂಡಾ ಅಗತ್ಯತೆಯನ್ನು ಬಿಂಬಿಸಲು ಅವಕಾಶವಿತ್ತ, ಅದೆಲ್ಲವನ್ನೂ ಬಿಟ್ಟು ಹೆದ್ದಾರಿ ಅವ್ಯವಸ್ಥೆಗೆ ದೇಶಪಾಂಡೆ ಕಾರಣ ಎನ್ನುವ ಇವರ ಹೇಳಿಕೆಯು ಹಾಸ್ಯಾಸ್ಪದವಾಗಿದ್ದು ಅದನ್ನು ವಾಪಾಸು ಪಡೆಯಬೇಕು ಎಂದು ಆಗ್ರಹಿಸಿದರು. 
ಹೆದ್ದಾರಿಯಂತಹ ರಾಷ್ಟ್ರೀಯ ಯೋಜನೆಯಾಗುವಾಗ ಜನರು ತಮ್ಮ ಜಾಗಾಗಳನ್ನು ಸ್ವಯಂ ಇಚ್ಚೆಯಿಂದ ಬಿಟ್ಟು ಕೊಡಬೇಕು, ಅದಕ್ಕೆ ಸರಿಯಾದ ಪರಿಹಾರವನ್ನು ಸಂಬಂಧ ಪಟ್ಟವರು ನೀಡಬೇಕು. ಆದರೆ ಇಲ್ಲಿ ಐ.ಆರ್.ಬಿ. ಕಂಪೆನಿ ದೊಡ್ಡ ದೊಡ್ಡ ಕಟ್ಟಡಗಳಿದ್ದರೆ ಅಲ್ಲಿ ಕೋಟಿಗಟ್ಟಲೆ ಪರಿಹಾರ ಕೊಡುವುದನ್ನು ತಪ್ಪಿಸಲು ಹೆದ್ದಾರಿ ನಕ್ಷೆಯನ್ನು ಬದಲಿ ಕಡಿಮೆ ಪರಿಹಾರ ಕೊಡುವಂತೆ ಮಾಡಿಕೊಂಡ ಉದಾಹರಣೆ ಬಹಳ ಕಡೆ ಇದೆ. ಅಲ್ಲದೇ ಶಿರಾಲಿ, ಭಟ್ಕಳ ನಗರ, ಹಳದೀಪುರದಂತಹ ಪ್ರದೇಶದಲ್ಲಿ ಹೆದಾರಿಯನ್ನು ಇನ್ನೂ ಅಗಲೀಕರಣಗೊಳಿಸಿದರೆ ಇಡೀ ನಗರವೇ ಇಲ್ಲವಾಗುವುದು. ಮತ್ತೆ ನಗರ ನಿರ್ಮಾಣಕ್ಕೆ ಹತ್ತಾರು ವರ್ಷಗಳೇ ಬೇಕಾಗುವುದು ಎಂದ ಅವರು ಇಷ್ಟಕ್ಕೂ ಹೆದ್ದಾರಿ ಅಗಲಗೊಳಿಸುವುದ, ಇಲ್ಲವೇ ಕಿರಿದಾಗಿಸುವುದರಿಂದ ದೇಶಪಾಂಡೆಯವರಿಗೇನು ಲಾಭ ಅವರು ಐ.ಆರ್.ಬಿ. ಕಂಪೆನಿಯ ಶೇರುದಾರರೂ ಅಲ್ಲ ಪಾಲುದಾರರೂ ಅಲ್ಲ ಎಂದು ಖಾರವಾಗಿ ಹೇಳಿದರು. 
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಕಾಂಗ್ರೆಸ್ ಮುಖಂಡ ರಾಮಾ ಮೊಗೇರ ಅವರು ಹಿರಿಯ ರಾಜಕಾರಣಿ ಆರ್.ವಿ.ದೇಶಪಾಂಡೆಯವರ ಕುರಿತು ಸುನಿಲ್ ನಾಯ್ಕ ಮಾಡಿದ ಆರೋಪವನ್ನು ವಾಪಾಸು ಪಡೆಯಬೇಕು. ಜಿಲ್ಲೆಯ ಅಭಿವೃದ್ಧಿಗೆ ದೇಶಪಾಂಡೆಯವರ ಕೊಡುಗೆಯನ್ನು ಯಾರೂ ಅಲ್ಲಗಳೆಯಲಾರರು. ಕೇಂದ್ರದಲ್ಲಿ ಬಿ.ಜೆ.ಪಿ ಸರಕರವೇ ಇದ್ದಾಗ, ಇವರದ್ದೇ ಸಂಸದರಿದ್ದಾಗ ಇವರು ಶಾಸಕರಿದ್ದು ತಮ್ಮ ಕ್ಷೇತ್ರದಲ್ಲಿ ರಸ್ತೆ ಹೇಗಿರಬೇಕು ಎಂದು ಮಾಡಿಸಿಕೊಳ್ಳದೇ ದೇಶಪಾಂಡೆಯವರನ್ನು ದೂರುವುದು ಸರಿಯಲ್ಲ ಎಂದರು. 
ರಾಜ್ಯ ಹಾಗೂ ಕೇಂದ್ರ ಸರಕಾರದ ಕಾರ್ಯವೈಖರಿಯ ಕುರಿತು ಲೇವಡಿ ಮಾಡಿದ ರಾಮಾ ಮೊಗೇರ ಯಡ್ಯೂರಪ್ಪನವರು ಒಂದು ಬಾರಿಯೂ ಪ್ರಜಾಪ್ರಭುತ್ವ ರೀತಿಯಲ್ಲಿ ಆಯ್ಕೆಯಾದ ಸರಕಾರದ ಮುಖ್ಯಮಂತ್ರಿಗಳಾಗಿಲ್ಲ, ಬದಲಾಗಿ ಆಪರೇಶನ್ ಕಮಲದಿಂದ ಮುಖ್ಯ ಮಂತ್ರಿಯಾದವರು. ಸಿದ್ಧರಾಮಯ್ಯನವರ ಜನಪರ ಕಾಳಜಿಯುಳ್ಳ ಅನ್ನಭಾಗ್ಯಕ್ಕೆ ಕತ್ತರಿ ಹಾಕಿರುವ ಇವರು ಜನಪರವಾಗಿಲ್ಲ ಎಂದು ಹೇಳಿದರು. ಕೇಂದ್ರ ಸರಕಾರ ನುಡಿದಂತೆ ನಡೆದಿಲ್ಲ, ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಇಂದು ಗಗನಕ್ಕೇರಿದ್ದರೂ ಕೇಂದ್ರ ಸರಕಾರ ಕಣ್ಮುಚ್ಚಿ ಕುಳಿತಿದೆ. ಕೇಂದ್ರ ಸರಕಾರ ಖಾಸಗೀಕರಣ ಮಾಡುವುದಕ್ಕೇ ಹೆಚ್ಚು ಆಸಕ್ತಿಯನ್ನು ಹೊಂದಿದ್ದು ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದರು. ಬಿ.ಜೆ.ಪಿ. ಅಧಿಕಾರದಲ್ಲಿದ್ದಾಗಲೇ ಅತೀ ಹೆಚ್ಚು ಹಿಂದೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವಾಗಿದೆ.  ಜಾರಕಿಹೋಳಿಯವರ ಅತಿರೇಕದ ವರ್ತನೆಗೆ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಎಳೆದು ತಂದಿರುವುದು ಸರಿಯಲ್ಲ. ಜಾರಕಿಹೋಳಿಯವರೇ ಸ್ವತಹ ಆ ಯುವತಿಗೆ ಚಿನ್ನ ಖರೀಧಿಸಿಕೊಟ್ಟಿದ್ದಾರೆ, ದೂರವಾಣೀ ಸಂಭಾಷಣೆ ಮಡಿದ್ದಾರೆಂದರೆ ಅದು ಡಿ.ಕೆ.ಸಿ.ಯವರ ತಪ್ಪೇ ಎಂದ ಅವರು ಇಂತಹ ಕೃತ್ಯವನ್ನು ಬಿ.ಜೆ.ಪಿ. ಮೊದಲು ಕೈಬಿಡಬೇಕಿದೆ ಎಂದರು. 
ಈ ಸಂದರ್ಭದಲ್ಲಿ ಎಫ್. ಕೆ. ಮೊಗೇರ, ವೆಂಕ್ಟಯ್ಯ ಭೈರುಮನೆ, ಮಹೇಶ ನಾಯ್ಕ, ಕರೀಮ್ ಸಾಬ್, ನಾಗೇಶ ದೇವಡಿಗ,ಸಚಿನ್ ನಾಯ್ಕ, ಸುಲೇಮಾನ್ ಕೆ., ಮುಂತಾದವರು ಉಪಸ್ಥಿತರಿದ್ದರು.

 

Read These Next