ಭಟ್ಕಳ: ಆರ್ಥಿಕ ಯುಗಾಂತರದ ಈ ಸಂದರ್ಭದಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸಿ.ಎ. ವೃತ್ತಿಯು ಒಂದು ಅತ್ಯುತ್ತಮ ಆಯ್ಕೆಯಾಗಿದೆ ಎಂದು ಕುಂದಾಪುರದ ಪಥದರ್ಶಕ ಅಕಾಡೆಮಿಯ ಸಿ.ಎ. ರಾಜೇಶ ಶೆಟ್ಟಿ ಹೇಳಿದರು.
ಅವರು ಭಟ್ಕಳದ ನ್ಯೂ ಇಂಗ್ಲಿಷ್ ಪಿ.ಯು. ಕಾಲೇಜಿನಲ್ಲಿ ಆಯೋಜಿಸಿದ್ದ ಸಿ.ಎ. ಯಾಕೆ? ಮತ್ತು ಹೇಗೆ? ಎನ್ನುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಭಾರತದ ಚಾರ್ಟರ್ಡ್ ಅಕೌಂಟೆಂಟ್ ಪದವಿಯು ಜಗತ್ತಿನ ಮೂರನೇ ಅತ್ಯಂತ ಕಠಿಣ ಪದವಿಯಾಗಿದ್ದರೂ ಸಹ ಓದಿನಲ್ಲಿ ಶೃದ್ಧೆ, ಸರಿಯಾಗಿ ಓದಿ ಮನನ ಮಾಡುವ ಕೌಶಲ್ಯ, ಸಮಯದ ಬಳಕೆ, ಬರೆಯುವ ರೀತಿ ಮತ್ತು ಓದಿದ್ದನ್ನು ನೆನಪಿಟ್ಟುಕೊಳ್ಳುವ ತಂತ್ರವನ್ನು ವಿದ್ಯಾರ್ಥಿ ಅಳವಡಿಸಿಕೊಂಡಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ. ಯಲ್ಲಿ ಕಡಿಮೆ ಅಂಕ ತೆಗೆದುಕೊಂಡವರೂ ಸಹ ಸಿ.ಎ. ಉತ್ತೀರ್ಣರಾಗಬಹುದಾಗಿದೆ ಎಂದೂ ಅವರು ಹೇಳಿದರು.
ಪಥದರ್ಶಕ ಅಕಾಡೆಮಿಯ ಭರತ ಶೆಟ್ಟಿ ಮಾತನಾಡಿ ಸಿ.ಎ. ಪದವಿಯನ್ನು ಪಡೆಯಲು ಬೇಕಾಗುವ ಅರ್ಹತೆ ಮತ್ತು ಉಳಿದ ವಿಷಯಗಳ ಕುರಿತು ಮಾಹಿತಿ ನೀಡಿದರು.
ವಿದ್ಯಾರ್ಥಿನಿಯರಾದ ಚೈತ್ರಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕಿ ಲೋಲಿಟಾ ರೋಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು, ಪ್ರಾಂಶುಪಾಲ ವೀರೆಂದ್ರ ಶಾನಭಾಗ ವಂದಿಸಿದರು.