ಭಟ್ಕಳ: ಜು.21ರಂದು ಆಚರಿಸಲಾಗುವ ಮುಸ್ಲೀಮ್ ಧರ್ಮೀಯರ ಬಕ್ರೀದ್ ಹಬ್ಬ ನಿಮಿತ್ತ ಸೋಮವಾರ ಸಹಾಯಕ ಆಯುಕ್ತೆ ಮಮತಾದೇವಿ ನೇತೃತ್ವದಲ್ಲಿ ವಿವಿಧ ಧರ್ಮೀಯ ಮುಖಂಡರ ಶಾಂತಿ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಹಾಯಕ ಆಯುಕ್ತರು, ಕೋವಿಡ್ 3ನೇ ಅಲೆಯ ಬಗ್ಗೆ ಎಲ್ಲರ ಎಚ್ಚರ ವಹಿಸಬೇಕಾಗಿದೆ, ಹಬ್ಬದ ಆಚರಣೆಯ ಹೆಸರಿನಲ್ಲಿ ಪುಟ್ಟ ಮಕ್ಕಳನ್ನು ಮನೆಯಿಂದ ಹೊರಗೆ ಕರೆದೊಯ್ಯುವುದು ಬೇಡ, ಶಾಲಾ ಕಾಲೇಜು ಪರಿಸರ, ಆಟದ ಮೈದಾನ, ಉದ್ಯಾನವನ ಹಾಗೂ ಇತರೇ ಸಾರ್ವಜನಿಕ ಪ್ರದೇಶಗಳಲ್ಲಿ ಬಕ್ರೀದ್ ಬಲಿದಾನ ಕಾರ್ಯಕ್ಕೆ ಅವಕಾಶ ಇಲ್ಲ ಎಂದರು. ಡಿವಾಯ್ಎಸ್ಪಿ ಕೆ.ಯು.ಬೆಳ್ಳಿಯಪ್ಪ ಮಾತನಾಡಿ, ಯಾವುದೇ ಸಂದರ್ಭದಲ್ಲಿ ಸಣ್ಣಪುಟ್ಟ ಸಮಸ್ಯೆಗಳನ್ನು ದೊಡ್ಡದಾಗಿ ಬಿಂಬಿಸಲು ಹೋಗಬೇಡಿ, ಎಲ್ಲಿಯಾದರೂ ಅಂತಹ ಘಟನೆ ನಡೆದರೆ ಅದನ್ನು ನಮ್ಮ ಗಮನಕ್ಕೆ ತನ್ನಿ, ಅಶಾಂತಿಗೆ ಕಾರಣವಾಗುವ ಯಾವುದೇ ಚಟುವಟಿಕೆಗಳಿಗೂ ಅವಕಾಶ ಇಲ್ಲ ಎಂದು ವಿವರಿಸಿದರು. ಸಿಪಿಐ ದಿವಾಕರ ಮಾತನಾಡಿ, ಹಬ್ಬದ ಆಚರಣೆಯ ಸಂದರ್ಭದಲ್ಲಿ ಯಾವುದೇ ಸಮುದಾಯದ ವ್ಯಕ್ತಿಯಾಗಿರಲಿ, ಸಾಮಾಜಿಕ ಜಾಲತಾಣದಲ್ಲಿ ಶಾಂತಿ ಕದಡುವ ಸಂದೇಶ ರವಾನಿಸಿದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಮಜ್ಲಿಸೇ ಇಸ್ಲಾ ವ ತಂಝೀಮ್ ಪರವಾಗಿ ಮಾತನಾಡಿದ ಇನಾಯಿತುಲ್ಲಾ ಶಾಬಂದ್ರಿ, ಬಕ್ರೀದ್ ಅವಧಿಯಲ್ಲಿ ಭಟ್ಕಳ ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು, ವಿದ್ಯುತ್ ಕಡಿತವಾಗದಂತೆ ನೋಡಿಕೊಳ್ಳಬೇಕು ಎಂದು ವಿನಂತಿಸಿಕೊಂಡರು.
ತಹಸೀಲ್ದಾರ ಎಸ್.ರವಿಚಂದ್ರ, ಭಟ್ಕಳ ಪುರಸಭಾ ಮುಖ್ಯಾಧಿಕಾರಿ ರಾಧಿಕಾ, ಎಸೈ ಸುಮಾ, ಎಸೈ ಭರತ್, ಎಸೈ ಹನುಮಂತ ಕುಡಗುಂಟಿ, ವಿಶ್ವಹಿಂದೂಪರಿಷತ್ನ ಶಂಕರ ಶೆಟ್ಟಿ, ಭಟ್ಕಳ ಮಜ್ಲಿಸೇ ಇಸ್ಲಾ ವ ತಂಜೀಮ್ ಅಧ್ಯಕ್ಷ ಎಸ್.ಎಮ್.ಫರ್ವೇಜ್, ಚೆನ್ನಪಟ್ಟಣ ಶ್ರೀ ಹನುಮಂತ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಧರ ಮೊಗೇರ, ತಂಜೀಮ್ ಪ್ರಧಾನ ಕಾರ್ಯದರ್ಶಿ ಅಬ್ದುರ್ರಕೀಬ್ ಎಮ್.ಜೆ., ತಾಪಂ ಮಾಜಿ ಅಧ್ಯಕ್ಷ ಪರಮೇಶ್ವರ ದೇವಡಿಗ, ಶಾಂತಾರಾಮ ಭಟ್ಕಳ, ಶ್ರೀಪಾದ ಕಂಚುಗಾರ, ಇಮ್ರಾನ್ ಲಂಕಾ, ಭಟ್ಕಳ ಮುಸ್ಲೀಮ್ ಯೂಥ್ ಫೆಡರೇಶನ್ನಿನ ಅಧ್ಯಕ್ಷ ಅಝೀಜ್ಉರ್ರೆಹೆಮಾನ್, ಆಲ್ತಾಫ್ ಖರೂರಿ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.