ಕಾರವಾರ ಕೆಡಿಪಿ ಸಭೆ:ಫಲಾನುಭವಿಗಳ ಆಯ್ಕೆ ಪುನಾವರ್ತನೆಗೆ ಕಡಿವಾಣ ಬೇಕು: ಆರ್.ವಿ.ದೇಶಪಾಂಡೆ

Source: so news | By MV Bhatkal | Published on 15th June 2019, 10:30 PM | Coastal News | Don't Miss |

ಕಾರವಾರ: ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆ ಸೇರಿದಂತೆ ಯಾವುದೇ ಇಲಾಖೆಗಳ ಯೋಜನೆಗಳ ಫಲಾನುಭವಿ ಅಯ್ಕೆಯಲ್ಲಿ ಪುನರಾವರ್ತನೆಗೆ ಕಡಿವಾಣ ಹಾಕುವಂತೆ ಕಂದಾಯ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಸೂಚಿಸಿದ್ದಾರೆ.

ಜಿಲ್ಲಾ ಪಂಚಾಯ್ತಿಯಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಕೆಲವು ಇಲಾಖೆಗಳಲ್ಲಿ ಒಂದೇ ಕುಟುಂಬದವರು ಬೇರೆ ಬೇರೆ ಹೆಸರಿನಲ್ಲಿ ಯೋಜನೆ ಲಾಭ ಪಡೆಯುತ್ತಿರುವುದು ಗಮನಕ್ಕೆ ಬಂದಿದ್ದು ಮುಂದಿನ ದಿನಗಳಲ್ಲಿ ಯಾವುದೇ ಯೋಜನೆ ಫಲಾನುಭವಿಗಳ ಆಯ್ಕೆ ಪುನರವರ್ತನೆ ಆಗಬಾರದು ಎಂದು ಸೂಚಿಸಿದರು.

ಸರ್ಕಾರದ ಯೋಜನೆಗಳು ಸಮಾಜದ ಎಲ್ಲ ವರ್ಗದವರಿಗೂ ಸಿಗಬೇಕು. ಈ ನಿಟ್ಟಿನಲ್ಲಿ ಫಲಾನುಭವಿಗಳ ಆಯ್ಕೆಯನ್ನೂ ನಿಯಮಾನುಸಾರ ಕ್ರಮಬದ್ಧವಾಗಿ ಮಾಡಬೇಕು ಎಂದು ಅವರು ತಿಳಿಸಿದರು.

ಕಡತಗಳ ವಿಲೇವಾರಿ ವಿಳಂಬವಾಗುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಕಡತಗಳನ್ನು ನಿರ್ವಹಿಸುವವರು ನಿರ್ದಿಷ್ಟ ಸಮಯದಲ್ಲಿ ವಿಲೇ ಮಾಡಲು ನಿಯಮಗಳಿವೆ. ಆದರೂ ಒಬ್ಬೊಬ್ಬ ಅಧಿಕಾರಿಗಳ ಬಳಿ ತಿಂಗಳುಗಟ್ಟಲೆ ಒಂದು ಕಡತ ಇರುವುದು ಸರಿಯಲ್ಲ. ನಿರ್ದಿಷ್ಟ ಸಮಯದಲ್ಲಿ ಒಂದು ಕಡತ ವಿಲೇವಾರಿ ಆಗಬೇಕು. ಆ ಸಮಯದಲ್ಲಿ ವಿಲೇ ಆಗದಿದ್ದರೆ ಅಂತಹ ಬೇಜವಾಬ್ದಾರಿ ಸಿಬ್ಬಂದಿಯ ಮೇಲೆ ಕ್ರಮ ಜರುಗಿಸಬೇಕು ಎಂದು ಜಿಲ್ಲಾಡಳಿತಕ್ಕೆ ತಿಳಿಸಿದರು.

ಯಾವುದೇ ಇಲಾಖೆ ಸೌಲಭ್ಯಗಳ ವಿತರಣೆಯನ್ನು ಅಧಿಕಾರಿಗಳ ಹಂತದಲ್ಲೇ ಮಾಡುವುದು ಸರಿಯಲ್ಲ ಎಂದ ಅವರು, ಸ್ಥಳೀಯ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿ ಅವರಿಂದ ಸವಲತ್ತುಗಳನ್ನು ವಿತರಿಸಬೇಕು ಎಂದರು.

ವಿವಿಧ ಅಭಿವೃದ್ಧಿ ಕಾಮಗಾರಿಗಳ ಟೆಂಡರ್ ಪಡೆದ ಸಂಸ್ಥೆಯೇ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಯಾವುದೇ ಕಾರಣಕ್ಕೂ ಉಪ ಗುತ್ತಿಗೆ ನೀಡಬಾರದು. ಇದರಿಂದ ನಿರೀಕ್ಷಿತ ಗುಣಮಟ್ಟದ ಕಾಮಗಾರಿ ಸಿಗುವುದಿಲ್ಲ ಹಾಗೂ ಕಾಮಗಾರಿ ಕುರಿತು ಉಪ ಗುತ್ತಿಗೆದಾರರಿಂದ ಮಾಹಿತಿ ಸಿಗುವುದಿಲ್ಲ. ಕನಿಷ್ಠ ಟೆಂಡರ್ ಪಡೆದ ಗುತ್ತಿಗೆದಾರರು ಕಾಮಗಾರಿ ನಡೆಯುವ ಜಾಗದಲ್ಲಿ ತಮ್ಮ ಮ್ಯಾನೇಜರ್ ಒಬ್ಬರನ್ನು ನೇಮಿಸಬೇಕು ಎಂದು ಸಚಿವರು ಸೂಚಿಸಿದರು.

ಅಲ್ಲದೆ ಒಂದು ಲಕ್ಷ ರೂ.ಗಿಂತ ಮೇಲಿನ ಯಾವುದೇ ಕಾಮಗಾರಿಗಳ ಜಾಗದಲ್ಲಿ ಕಾಮಗಾರಿಯ ವಿವರವಾದ ಫಲಕವನ್ನು ಅಳವಡಿಸಬೇಕು. ಇದರಿಂದ ಸಾರ್ವಜನಿಕರಿಗೆ ಕಾಮಗಾರಿಯ ಮೊತ್ತ, ಆರಂಭವಾದ ದಿನಾಂಕ, ಮುಗಿಯುವ ದಿನಾಂಕ ಇತ್ಯಾದಿ ವಿವರಗಳು ಸಿಗಲಿವೆ ಎಂದರು.

ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದ್ದು ಜುಲೈ ಒಂದರ ಹೊತ್ತಿಗೆ ವರ್ಗಾವಣೆಯಾದ ಶಿಕ್ಷಕರು ಆಯಾ ಶಾಲೆಗಳಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು. ಇಲ್ಲವಾದರೆ ಮಕ್ಕಳಿಗೆ ಪಾಠ ಹಿಂದುಳಿಯುತ್ತವೆ. ಜಿಲ್ಲೆ ಎರಡೂ ಶೈಕ್ಷಣಿಕ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಈ ಬಗ್ಗೆ ಗಮನ ಹರಿಸಬೇಕು ಹಾಗೂ ಯಾವುದೇ ಕಾರಣಕ್ಕೂ ತಮ್ಮ ಅನುಮತಿ ಇಲ್ಲದೆ ಶಿಕ್ಷಕರನ್ನು ಬೇರೆಡೆಗೆ ನಿಯೋಜನೆ ಮಾಡಬಾರದು ಎಂದೂ ಸಚಿವರು ತಿಳಿಸಿದರು.

ಗೋವುಗಳ ಆಧಾರದ ಮೇಲೆ ಗೋಮಾಳ ಇರಬೇಕೆಂಬ ನ್ಯಾಯಾಲಯದ ಆದೇಶ ಇರುವುದರಿಂದ ಶಾಲೆ, ಆಸ್ಪತ್ರೆ, ವಿದ್ಯಾರ್ಥಿ ನಿಲಯ ಇತ್ಯಾದಿ ಸರ್ಕಾರಿ ಕಟ್ಟಡಗಳಿಗೆ ಗೋಮಾಳ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರಸ್ತುತ ದಿನಗಳಲ್ಲಿ ಜಾನುವಾರಗಳ ಸಾಕಣೆ ಕೂಡ ಕಡಿಮೆಯಾಗಿರುವುದರಿಂದ ಪಶು ಪಾಲನಾ ಇಲಾಖೆ ಜಿಲ್ಲೆಯಲ್ಲಿರುವ ಜಾನುವಾರುಗಳನ್ನು ಗಣತಿ ಮಾಡುವಂತೆ ಸಚಿವರು ತಿಳಿಸಿದರು.

ಅರಣ್ಯ ಹಕ್ಕು ಕುರಿತು ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯಗಳಿದ್ದು ಯಾವುದೇ ಬಡ ರೈತನಿಗೆ ಅನ್ಯಾಯವಾಗಲು ತಾವು ಬಿಡುವುದಿಲ್ಲ. ಇದೇ ತಿಂಗಳ 25ರ ನಂತರ ಅರಣ್ಯ ಹಕ್ಕು ಸಂಬಂಧಿಸಿದಂತೆ ಪ್ರತ್ಯೇಕವಾಗಿ ಸಭೆ ನಡೆಸಲಾಗುವುದು. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಸೂಕ್ತ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಅವರು ಸಭೆಯಲ್ಲಿ ತಿಳಿಸಿದರು.

ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ವಿವಿಧೆಡೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕೂಗು ಕೇಳಿ ಬರುತ್ತಿದೆ. ಉತ್ತರ ಕನ್ನಡ ಜಿಲ್ಲೆಗೆ  ಟ್ರಾಮಾ ಕೇರ್ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅಗತ್ಯವಿದೆ. ಈ ಸಂಬಂಧಿಸಿದಂತೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಅವರು ಸೂಚಿಸಿದರು.

ಅಲ್ಲದೆ, ಜಿಲ್ಲೆಯ ವಿವಿಧೆಡೆ ಅಂಗಡಿ ಮುಂಗಟ್ಟುಗಳ ನಾಮಫಲಕ ಕನ್ನಡದಲ್ಲಿರಬೇಕೆಂಬ ನಿಯಮವಿದೆ ಈ ಸಂಬಂಧಿಸಿದಂತೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸೂಕ್ತ ವಹಿಸುವಂತೆ ಹಾಗೂ ಬ್ಯಾಂಕ್ ವ್ಯವಹಾರಗಳನ್ನು ಕನ್ನಡದಲ್ಲಿ ಮಾಡುವ ಸಲುವಾಗಿ ಲೀಡ್ ಬ್ಯಾಂಕ್ ಮೂಲಕ ಎಲ್ಲ ಬ್ಯಾಂಕ್ ಅಧಿಕಾರಿಗಳ ಸಭೆ ಕಡೆದು ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಯವರಿಗೆ ಸಚಿವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ, ಉಪಾಧ್ಯಕ್ಷ ಸಂತೋಷ್ ರೇಣಕೆ, ಶಾಸಕರಾದ ಸುನೀಲ್ ನಾಯ್ಕ್, ದಿನಕರ ಶೆಟ್ಟಿ, ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಕೆ. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ರೋಷನ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್.ಪಾಟೀಲ್ ಉಪಸ್ಥಿತರಿದ್ದರು.

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...