ಭಟ್ಕಳ: ಬೊಲೆರೋ ಪಿಕ್ ಅಪ್ ವ್ಯಾನ್ ಮತ್ತು ಆಟೋ ರಿಕ್ಷಾ ನಡುವೆ ಅಪಘಾತ ಸಂಭವಿಸಿ ಆಟೋ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ಸಂಜೆ ನವಾಯತ್ ಕಾಲೋನಿ ರಾ.ಹೆ.66ರ ಸಿಟಿಲೈಟ್ ಕ್ರಾಸ್ ಬಳಿ ನಡೆದಿದೆ.
ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ಆಝಾದ್ ನಗರ ನಿವಾಸಿ ಜಾವೀದ್ (55) ಎಂದು ಗುರುತಿಸಲಾಗಿದ್ದು ಗಂಭೀರವಾಗಿ ಗಾಯಗೊಂಡಿರುವ ಇವರನ್ನು ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಅಪಘಾತದಲ್ಲಿ ಆಟೋ ಹಿಂಬದಿಯಲ್ಲಿ ಕುಳಿತಿದ್ದ ಆಟೋ ಚಾಲಕನ ಪತ್ನಿ ಸಯೀದಾ ಹಮೀದಾ ಬಾನೋ ಎಂಬುವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಯೀದಾ ಹಮೀದಾ ಬಾನು ಅವರು ಜಾಲಿ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಿಂದ ಸಿಟಿ ಲೈಟ್ ಕ್ರಾಸ್ ಮೂಲಕ ಆಜಾದ್ ನಗರಕ್ಕೆ (ಇಮಾಮ್ ಅಬು ಹನೀಫಾ ಮಸೀದಿ ಬಳಿ) ಮರಳಲು ಹೊರಟಿದ್ದಾರೆ ಎಂದು ತಿಳಿದುಬಂದಿದ್ದು, ಭಟ್ಕಳದಿಂದ ಮುರ್ಡೇಶ್ವರ ಕಡೆಗೆ ಹೋಗುತ್ತಿದ್ದ ಬೊಲೆರೋ ವ್ಯಾನ್ ಆಟೋ ರಿಕ್ಷಕ್ಕೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.
ಅಪಘಾತದಲ್ಲಿ ಜಾವೀದ್ ಅವರ ತಲೆಗೆ ಗಂಭೀರ ಗಾಯವಾಗಿದ್ದು, ತಕ್ಷಣ ಅವರನ್ನು ಉಡುಪಿ ಆಸ್ಪತ್ರೆಗೆ ರವಾನಿಸಲಾಗಿದೆ.