ಬೆಂಗಳೂರು: ಹಿಜಾಬ್ ನಿರ್ಬಂಧಿಸಿದ್ದ ಕೆಲವು ಕಾಲೇಜುಗಳ ಕ್ರಮ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ಸಂಹಿತೆ ಜಾರಿಗೆ ಸರಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕೆಲವು ಮುಸ್ಲಿಮ್ ವಿದ್ಯಾರ್ಥಿನಿಯರು ಸಲ್ಲಿಸಿದ್ದ ರಿಟ್ ಅರ್ಜಿಗಳ ವಿಚಾರಣೆಯನ್ನು ಶುಕ್ರವಾರ ಪೂರ್ಣಗೊಳಿಸಿದ ಹೈಕೋರ್ಟ್ ಪೂರ್ಣ ಪೀಠ ತೀರ್ಪನ್ನು ಕಾಯ್ದಿರಿಸಿದೆ.
ನ್ಯಾಯಮೂರ್ತಿ ರಿತುರಾಜ್ ಅವಸ್ಥೆ, ನ್ಯಾಯಮೂರ್ತಿಗಳಾದ ಕೃಷ್ಣಎಸ್. ದೀಕ್ಷಿತ್ ಹಾಗೂ ಖಾಜಿ ಮೈಬುನ್ನಿಸಾ ಮೊಹಿಯುದ್ದೀನ್ ಅವರ ತ್ರಿಸದಸ್ಯ ನ್ಯಾಯಪೀಠ ಸತತ 11ನೇ ದಿನ ಹಿಜಾಬ್ಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಿ, ವಾದ ಮುಕ್ತಾಯಗೊಳಿಸಿ ತೀರ್ಪು ಕಾಯ್ದಿರಿಸಿದೆ.
ವಿಚಾರಣೆ ಆರಂಭವಾಗುತ್ತಿದ್ದಂತೆಯೇ ನ್ಯಾಯಪೀಠ ನಾಲ್ಕು ಗಂಟೆಯೊಳಗೆ ವಾದ ಮುಗಿಸಿ ಇವತ್ತೆ ಎಲ್ಲರೂ ತಮ್ಮ ವಾದ ಸಲ್ಲಿಸಿದರೆ ಒಳ್ಳೆಯದು ಎಂದು ಸಲಹೆ ನೀಡಿತು. ಅದರಂತೆ ಎಲ್ಲ ವಕೀಲರ ವಾದ-ಪ್ರತಿವಾದವನ್ನು ಆಲಿಸಿದ ಬಳಿಕ ನ್ಯಾಯಪೀಠ ವಿಚಾರಣೆ ಪೂರ್ಣಗೊಂಡಿದೆ, ತೀರ್ಪು ಕಾಯ್ದಿರಿಸಿದೆ. ಯಾವ ವಕೀಲರು ಬೇಕಾದರೂ ಲಿಖಿತ ವಾದ ಸಲ್ಲಿಸಬಹುದು ಎಂದು ಆದೇಶಿಸಿತು.