ಬೆಂಗಳೂರು: ಬೆಂಗಳೂರಿನಲ್ಲಿ ಕೊರೋನ ಸೋಂಕಿ ನಿಂದಾಗಿ ನೂರಾರು ಜನರು ಸಾವನ್ನಪ್ಪುತ್ತಿದ್ದು, ಅಂತ್ಯಸಂಸ್ಕಾರ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಹೀಗಾಗಿ, ರಾಜ್ಯ ಸರಕಾರದಿಂದ ಮೃತದೇಹಗಳ ಅಂತ್ಯ ಸಂಸ್ಕಾರಕ್ಕಾಗಿ ನಗರದ ಹೊರವಲಯದಲ್ಲಿರುವ ತಾವರೆಕೆರೆ ಸಮೀಪ ತಾತ್ಕಾಲಿಕ ರುದ್ರಭೂಮಿ ಸ್ಥಾಪಿಸಲಾಗಿದ್ದು, ಇಲ್ಲಿಯೇ ಕೊರೋನ ಮೃತದೇಹಗಳನ್ನು ದಹನ ಮಾಡಲಾಗುತ್ತಿದೆ. ಶುಕ್ರವಾರ ಒಂದೇ ದಿನ, ಒಂದೇ ಬಾರಿಗೆ 26 ಮೃತದೇಹಗಳನ್ನು ಸಾಮೂಹಿಕವಾಗಿ ದಹನ ಮಾಡಲಾಯಿತು.
ಸಾಮೂಹಿಕವಾಗಿ ಮೃತದೇಹಗಳ ಅಂತ್ಯಸಂಸ್ಕಾರ ನಡೆಯುತ್ತಿದ್ದಾಗ ಕುಟುಂಬಸ್ಥರು ಹಾಗೂ ಸಂಬಂಧಿಕರು ದೂರದಿಂದಲೇ ನಿಂತು ನೋಡಬೇಕಾದಂತಹ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ದಿನಂಪ್ರತಿ ಸಾವಿನ ಪ್ರಕರಣಗಳು ಹೆಚ್ಚುತ್ತಲೇ ಇದ್ದು ರಾಜಧಾನಿಯ ಜನರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಸಾಮೂಹಿಕವಾಗಿ ಮೃತದೇಹಗಳ ಅಂತ್ಯಸಂಸ್ಕಾರ ನಡೆಯುತ್ತಿದ್ದಾಗ ಶವಗಳ ಸಂಬಂಧಿಕರನ್ನು ರುದ್ರಭೂಮಿ ಬಳಿ ಇದ್ದ ಸಿಬ್ಬಂದಿ ಮೃತದೇಹಗಳ ಬಳಿ ಹೋಗಲು ಅವಕಾಶ ನೀಡಲಿಲ್ಲ. ಕೆಲವರು ಮಾತ್ರ ಪಿಪಿಇ ಕಿಟ್ ಗಳನ್ನು ಧರಿಸಿ ಮೃತದೇಹಗಳನ್ನು ನೋಡಿಕೊಂಡು ಬಂದರೆ, ಇನ್ನು ಕೆಲವರು ಮೃತದೇಹಗಳ ಅಂತ್ಯಸಂಸ್ಕಾರವನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯುವ ದೃಶ್ಯ ಅಲ್ಲಲ್ಲಿ ಕಂಡು ಬಂದಿತು.