ಪಣಜಿ: ಸರಕಾರಿ ಸ್ವಾಮಿತ್ವದ ಗೋವಾ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ (ಜಿಎಂಸಿಎಚ್)ಯಲ್ಲಿ ಮಂಗಳವಾರ ಬೆಳಗ್ಗೆ 26 ಕೊರೋನ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಅವರು ಹೇಳಿದ್ದಾರೆ.
ಈ ಸಾವಿಗೆ ಖಚಿತ ಕಾರಣ ತಿಳಿಯಲು ಹೈಕೋರ್ಟ್ ತನಿಖೆ ನಡೆಸುವಂತೆ ಅವರು ಕೋರಿದ್ದಾರೆ. ಬೆಳಗ್ಗೆ 2 ಗಂಟೆಯಿಂದ 6 ಗಂಟೆಯ ನಡುವೆ ಈ ಸಾವು ಸಂಭವಿಸಿದೆ ಎಂದ ಅವರು ಸಾವಿನ ಕಾರಣ ತಿಳಿಸುವುದರಿಂದ ನುಣುಚಿಕೊಂಡಿದ್ದಾರೆ.
ಗೋವಾ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗೆ ಭೇಟಿ ನೀಡಿರುವ ಗೋವಾಮುಖ್ಯಮಂತ್ರಿ ಪ್ರಮೋದ್ ಸಾವಂತ್, ವೈದ್ಯಕೀಯ ಆಮ್ಲಜನಕದ ಲಭ್ಯತೆ ಹಾಗೂ ಜಿಎಂಸಿಎಚ್ನ ಕೋವಿಡ್-19 ವಾರ್ಡ್ಗೆ ಅದರ ಪೂರೈಕೆ ನಡುವಿನ ಅಂತರ ರೋಗಿಗಳಿಗೆ ಕೆಲವು ಸಮಸ್ಯೆ ಉಂಟು ಮಾಡಿರಬಹುದು. ರಾಜ್ಯದಲ್ಲಿ ಆಮ್ಲಜನಕ ಪೂರೈಕೆಯ ಕೊರತೆ ಇಲ್ಲ ಎಂದಿದ್ದಾರೆ.
ಆದರೆ, ಪತ್ರಕರ್ತರೊಂದಿಗೆ ಮಾತನಾಡಿದ ರಾಣೆ ಅವರು, ಗೋವಾ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಸೋಮವಾರದಿಂದ ವೈದ್ಯಕೀಯ ಆಮ್ಲಜನಕ ಪೂರೈಕೆಯ ಕೊರತೆಯನ್ನು ಒಪ್ಪಿಕೊಂಡಿದ್ದಾರೆ.