ಮುಂಡಗೋಡ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಮುಂಡಗೋಡ ಓಂ ಗ್ಯಾಸ್ ಮಾಲೀಕ ಮತ್ತು ಉತ್ತರ ಕನ್ನಡ ಜಿಲ್ಲಾ ಅನಿಲ ವಿತರಕರ ಸಂಘದ ಅಧ್ಯಕ್ಷ ಬಸವರಾಜ ಓಶಿಮಠ ಸೋಮವಾರ ಇಲ್ಲಿನ ಹಳೂರ ಓಣಿಯ ಸಫೂರಾ ಬೇಗಂ ಮುಗಳಿಕಟ್ಟಿ ಅಲ್ಪಸಂಖ್ಯಾತ ಕುಟುಂಬಕ್ಕೆ ಸಂಪೂರ್ಣ ಉಚಿತ ಉಜ್ವಲ ಗ್ಯಾಸ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮೋದಿಯವರು ಸರ್ವಧರ್ಮ ಸಹಿಷ್ಣುವಾಗಿದ್ದಾರೆ. ಮುಸಲ್ಮಾನ ಯುವತಿ ಪದವಿ ಶಿಕ್ಷಣ ಹೊಂದಿದರೆ 2ಲಕ್ಷ ರೂ. ಅನುದಾನ ನೀಡಿದ್ದಾರೆ. ಅನೇಕ ಅಲ್ಪಸಂಖ್ಯಾತರಿಗೆ ಸಾಲ ಸೌಲಭ್ಯ ಮಾಡಿದ್ದಾರೆ. ತ್ರಿವಳಿ ತಲಾಖ್ ರದ್ದು ಮಾಡುವುದರ ಮೂಲಕ ಇಡೀ ಮುಸ್ಲಿಂ ಮಹಿಳಾ ಸಮುದಾಯ ಮೋದಿಯವರ ಬೆನ್ನ ಹಿಂದೆ ಇದೆ. ಪುರುಷರೂ ಕೂಡ ಇದಕ್ಕೆ ಸಮ್ಮತಿಸಿದ್ದಾರೆ.
ಈಗಾಗಲೇ ನಾವು ಅನೇಕ ಸರ್ಕಾರಗಳನ್ನು ನೋಡಿದ್ದೇವೆ. ಸುಮಾರು 70ವರ್ಷಗಳಲ್ಲಿ ಬಹುತೇಕ ಕಾಂಗ್ರೆಸ್ ಪರ ಸರ್ಕಾರಗಳೇ ಆಳಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಕಾಂಗ್ರೆಸ್ನವರು ಕೇವಲ ಒಂದೇ ಕೋಮಿಗೆ ಹಿಡಿದುಕೊಂದು ಓಟಿನ ರಾಜಕಾರಣ ಮಾಡಿ ತಮ್ಮ ಅಧಿಕಾರ ನಡೆಸಿದ್ದಾರೆ. ಬಹಳಷ್ಟು ಕಾಂಗ್ರೆಸ್ನ ನಾಯಕರಿಗೆ ನಮ್ಮ ದೇಶವನ್ನು ಸುತ್ತಲು ಆಗಿಲ್ಲ. ನಮ್ಮ ದೇಶದಲ್ಲಿ ಎಷ್ಟು ವರ್ಗಗಳಿವೆ? ಎಷ್ಟು ನದಿಗಳಿವೆ? ಎಂಬುದು ಗೊತ್ತಿಲ್ಲ.
ನಂತರ ಪ್ರಧಾನಿಯಾಗಿ ಬಂದ ವಾಜಪೇಯಿಯವರು ಅದ್ಭುತ ಕಾರ್ಯಕ್ರಮಗಳನ್ನು ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶದ ಹೆಸರನ್ನು ತಂದರು. ತದ ನಂತರ ಪ್ರಧಾನಿಯಾದ ಮೋದಿಯವರು ನಮ್ಮ ದೇಶವನ್ನು ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಔದ್ಯೋಗಿಕವಾಗಿ ಇಡೀ ಜಗತ್ತಿಗೇ ಪರಿಚಯ ಮಾಡಿಕೊಟ್ಟರು. ಅನೇಕ ಸಂಘ ಸಂಸ್ಥೆಗಳ ನೇತೃತ್ವವನ್ನು ವಹಿಸಿದ್ದಾರೆ. ದೀನ್ ದಯಾಲ್ ಯೋಜನೆಯಲ್ಲಿ ದೇಶದ ಹಳ್ಳಿ ಹಳ್ಳಿಗಳಲ್ಲಿ ಉಚಿತವಾಗಿ ವಿದ್ಯುತ್ ಕಲ್ಪಿಸಿದರು. ಉಜ್ವಲ ಯೋಜನೆಯಲ್ಲಿ ಪ್ರತಿಯೊಬ್ಬರಿಗೂ ಉಚಿತ ಗ್ಯಾಸ್ ವಿತರಣೆ ಮಾಡಿದರು.
ಅನಿಲವಿತರಕರಾದ ನಾನೂ ಕೂಡ ನಮ್ಮ ಮುಂಡಗೋಡ ತಾಲೂಕಿನ ಅಗಡಿ, ರಾಮಾಪುರ ಮತ್ತು ನಾಗನೂರ ಗ್ರಾಮಗಳಲ್ಲಿ ಎಲ್ಲರಿಗೂ ಉಚಿತ ಗ್ಯಾಸ್ ವಿತರಣೆ ಮಾಡಿ ಹೊಗೆಮುಕ್ತ ಗ್ರಾಮಗಳನ್ನಾಗಿ ಮಾಡಿದ್ದೇನೆ. ಉಜ್ವಲ ಯೊಜನೆಯಲ್ಲಿ 3000ಸಂಪರ್ಕಗಳನ್ನು ಉಚಿತವಾಗಿ ನೀಡಿದ್ದೇನೆ. ಇಡೀ ತಾಲೂಕನ್ನು ಹೊಗೆಮುಕ್ತ ತಾಲೂಕನ್ನಾಗಿ ಮಾಡುತ್ತೇನೆ.
ರಾಜ್ಯ ಸರ್ಕಾರದವರು ಪುಕ್ಕಟೇ ಅಕ್ಕಿಯನ್ನು ಕೊಡುತ್ತಾರೆಂದು ಎಲ್ಲರೂ ತಿಳಿದಿದ್ದಾರೆ. ಆದರೆ ಕೇಂದ್ರ ಸರ್ಕಾರ ಅಕ್ಕಿಯನ್ನು ಕೊಟ್ಟಾಗ ಮಾತ್ರ ಅದು ರಾಜ್ಯ ಸರ್ಕಾರಕ್ಕೆ ಕೊಡಲಿಕ್ಕೆ ಆಗುತ್ತದೆ. ಕೇಂದ್ರ ಸರ್ಕಾರದ ಸಾವಿರಾರು ಕೋಟಿಗಳ ಯೋಜನೆಗಳು ರಾಜ್ಯ ಸರ್ಕಾರದಿಂದ ದುರ್ಬಳಕೆಯಾಗುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮೋದಿಯವರಿಗೆ ಆಯಷ್ಯ, ಆರೋಗ್ಯ ಮತ್ತು ಅಧಿಕಾರ ಹೊಂದಿ ನಮ್ಮ ದೇಶವನ್ನು ವಿಶ್ವದ ಗುರುವನ್ನಾಗಿ ಮಾಡಲಿ ಎಂದು ಶುಭ ಹಾರೈಸಿದರು. ಅವರ ಪತ್ನಿ ವೀಣಾ ಓಶಿಮಠ, ಗಿರೀಶ ಕಾತೂರ, ಶಂಕ್ರಯ್ಯಾ ಹಿರೇಮಠ, ಈರಯ್ಯಾ ಹಿರೇಮಠ ಹಾಗೂ ಇತರರಿದ್ದರು.