ಕೋಲಾರ, ಮಾರ್ಚ್ 23 :ಜಿಲ್ಲೆಯಾಧ್ಯಂತ ಪಲ್ಸ್ಪೋಲಿಯೊ ಲಸಿಕೆ ಹಾಕುವ ಆಂದೋಲನಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕಲ್ಲದೆ ಕಾರ್ಯಕ್ರಮವನ್ನು ಸುಸೂತ್ರವಾಗಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ್ ಚಂದ್ರ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಗುರುವಾರ ರಾಷ್ಟ್ರೀಯ ಪಲ್ಸ್ಪೊಲೀಯೋ ಕಾರ್ಯಕ್ರಮವನ್ನು ಏ.02 ರಂದು ಹಾಗೂ ಏ.30 ರಂದು ಹಮ್ಮಿಕೊಳ್ಳುವ ಸಲುವಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯಲ್ಲಿ ನಡೆಸಲಾಯಿತು.
ಜಿಲ್ಲೆಯಲ್ಲಿ ಏಪ್ರಿಲ್ 02 ರಿಂದ 3 ದಿನಗಳ ಕಾಲ ಗ್ರಾಮೀಣ ಪ್ರದೇಶದಲ್ಲಿ ಮತ್ತು 4 ದಿನಗಳ ಕಾಲ ನಗರ ಪ್ರದೇಶದಲ್ಲಿ ಪಲ್ಸ್ಪೋಲಿಯೋ ಹಾಕಲಾಗುವುದು. ನಂತರ ಏಪ್ರಿಲ್ 30 ರಿಂದ ಗ್ರಾಮೀಣ ಪ್ರದೇಶದಲ್ಲಿ 3 ದಿನಗಳ ಕಾಲ ಮತ್ತು ನಗರ ಪ್ರದೇಶದಲ್ಲಿ 4 ದಿನಗಳ ಕಾಲ ಪಲ್ಸ್ ಪೋಲಿಯೋ ಹಾಕಲಾಗುವುದು ಎಂದು ತಿಳಿಸಿದರು.
ಮೊದಲ ದಿನ ಬೂತ್ಗಳಲ್ಲಿ ಮತ್ತು ನಂತರ 2 ದಿನಗಳ ಕಾಲ ಕಾರ್ಯಕರ್ತರು ಮನೆಮನೆಗೆ ತೆರಳಿ ಲಸಿಕೆ ಹಾಕಲಿದ್ದಾರೆ. 5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ಪೋಲಿಯೋ ಲಸಿಕೆಯನ್ನು ಹಾಕಿಸಬೇಕು. ಜಿಲ್ಲೆಯಲ್ಲಿ ಒಟ್ಟು 1,65,699 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಬೇಕೆಂದು ಗುರುತಿಸಲಾಗಿದೆ.
ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮದಲ್ಲಿ ಜಿಲ್ಲೆಯಾದ್ಯಂತ ಒಟ್ಟು 803 ಬೂತ್ಗಳನ್ನು ಮಾಡಲಾಗಿದ್ದು ಇವುಗಳಲ್ಲಿ ಒಟ್ಟು 2900 ಮಂದಿ ಕೆಲಸ ನಿರ್ವಹಿಸುವರು. ಸಿಬ್ಬಂದಿ ವರ್ಗವು ಮೊದಲ ದಿನ ಬೂತ್ಗಳಲ್ಲಿ ಕೆಲಸ ಮಾಡಿದರೆ ನಂತರ ಗ್ರಾಮಾಂತರ ಪ್ರದೇಶದಲ್ಲಿ 2 ದಿನ ಹಾಗೂ ನಗರ ಪ್ರದೇಶದಲ್ಲಿ 3 ದಿನಗಳ ಕಾಲ ಮನೆ ಮನೆಗೆ ತೆರಳಿ ಮಕ್ಕಳಿಗೆ ಪಲ್ಸ್ಪೋಲಿಯೋ ಹಾಕಲಿದ್ದಾರೆ.
ಜಿಲ್ಲೆಯಾಧ್ಯಂತ ಒಟ್ಟು 3,40,612 ಮನೆಗಳಿದ್ದು ಇವುಗಳಿಗೆ ಭೇಟಿ ನೀಡಿ ಮಕ್ಕಳಿಗೆ ಲಸಿಕೆ ಹಾಕಲಾಗುವುದು. ಪಲ್ಸ್ಪೋಲಿಯೋ ಅಭಿಯಾನದಲ್ಲಿ ಒಟ್ಟು 3,306 ಮಂದಿ ಸಿಬ್ಬಂಧಿ ಕಾರ್ಯ ನಿರ್ವಹಿಸಲಿದ್ದು 156 ಮಂದಿ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸುವರು ಎಂದು ಹೇಳಿದರು.
ಗುಡಿಸಲು, ಇಟ್ಟಿಗೆ ಪ್ಯಾಕ್ಟರಿಗಳು ಹೀಗೆ ಬೇರೆ ಬೇರೆ ಕಡೆ ಬಿಡಾರಗಳನ್ನು ಹಾಕಿಕೊಂಡು ಸಾಕಷ್ಟು ಮಂದಿ ವಾಸಿಸುತ್ತಾರೆ. ಇವರಿಗೂ ಸಹ ತಪ್ಪದೆ ಲಸಿಕೆ ಹಾಕಬೇಕೆಂಬ ಉದ್ದೇಶದಿಂದ 4 ಮೊಬೈಲ್ಟೀಂಗಳನ್ನು ರಚಿಸಲಾಗಿದೆ. ಈ ಕುರಿತು ಕರಪತ್ರ, ಬ್ಯಾನರ್ಗಳನ್ನು ಹಾಗೂ ಆಟೋಗಳ ಮೂಲಕ ಪ್ರಚಾರ ನಡೆಸಲಾಗುವುದು. ಅಷ್ಟೇ ಅಲ್ಲದೆ ಜನತೆಯಲ್ಲಿ ಅರಿವು ಮೂಡಿಸುವ ಸಲುವಾಗಿ ಜಾಥಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಇನ್ನೂ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ರೋಟರಿ ಸಂಸ್ಥೆಯವರು ಸಹಕಾರ ನೀಡುತ್ತಿದ್ದಾರೆ. ಅದರಂತೆ ರೋಟರಿ ಸಂಸ್ಥೆಯವರು ಏಪ್ರಿಲ್ 02 ರಂದು ಜಾಥಾ ಜವಾಬ್ದಾರಿಯನ್ನು ವಹಿಸಲಿದ್ದಾರೆ. ಸುಮಾರು 100 ಹೆಚ್ಚು ಬ್ಯಾನರ್ಗಳನ್ನು ನೀಡಲು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇದೇ ಏ.27 ರಂದು ಪಲ್ಸ್ ಪೋಲಿಯೋಗೆ ಸಂಬಂಧಿಸಿದಂತೆ ಕಾರ್ಯಾಗಾರವನ್ನು ನಡೆಸುವುದಾಗಿ ತಿಳಿಸಿದ್ದಾರೆ ಎಂದು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ, ಡಿ.ಹೆಚ್.ಓ. ವಿಜಯಕುಮಾರ್, ಡಾ.ಜಗದೀಶ್, ಡಾ.ಚಂದನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರಸನ್ನ, ರೋಟರಿ ಸಂಸ್ಥೆ ಅಧ್ಯಕ್ಷ ರಾಮಚಂದ್ರಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಪರಿವೀಕ್ಷಕ ಅಶೋಕ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.