ಭಟ್ಕಳ: ಮುರುಢೇಶ್ವರನ ಶ್ರೀ ಮಹಾ ಮುರ್ಡೇಶ್ವರ ದೇವರ ಮಹಾ ರಥೋತ್ಸವವು ಶಾಂತಿಯುತವಾಗಿ ವಿಜೃಂಬಣೆಯಿಂದ ನೆರವೇರಿತು.
ಪ್ರತಿ ವರ್ಷದಂತೆ ಮಕರ ಸಂಕ್ರಮಣದಂದು ಆರಂಭವಾದ ಜಾತ್ರಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ದಿನವೂ ಜರುಗಿದ್ದು ಮಹಾ ರಥೋತ್ಸವು ಗುರುವಾರ ಸಂಜೆ ಸಂಪನ್ನಗೊಂಡಿತು.
ಮಹಾ ರಥೋತ್ಸವದ ಸಂದರ್ಭದಲ್ಲಿ ಊರಿನ ಹಾಗೂ ಪರವೂರಿನ ಸಾವಿರಾರು ಜನರ ಜಯಘೋಷ ಮೊಳಗಿದ್ದು ರಥವನ್ನು ಎಳೆಯುವ ಮೂಲಕ ಜನತೆ ಅತ್ಯಂತ ಸಂತಸಪಟ್ಟರು.
ರಥ ಎಳೆಯುವುದಕ್ಕೂ ಪೂರ್ವ ಧಾರ್ಮಿಕ ವಿಧಿ ವಿಧಾನಗಳನ್ನು ಇಲ್ಲಿನ ಓಲಗ ಮಂಟಪದ ಹತ್ತಿರ ಪೂರೈಸಿದ್ದು ದೇವಸ್ಥಾನದ ವತಿಯಿಂದ ಧರ್ಮದರ್ಶಿ ಶ್ರೀಪಾದ ಕಾಮತ್, ವ್ಯವಸ್ಥಾಪಕ ಮಂಜುನಾಥ ಶೆಟ್ಟಿ, ಆನಂದ ಶೆಟ್ಟಿ, ನಾಗರಾಜ ಶೆಟ್ಟಿ, ಶಾಸಕ ಮಂಕಾಳ ವೈದ್ಯ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ, ತಾ.ಪಂ. ಅಧ್ಯಕ್ಷ ಈಶ್ವರ ಬಿ. ನಾಯ್ಕ, ಮಾವಳ್ಳಿ ಗ್ರಾ.ಪಂ.ಅಧ್ಯಕ್ಷೆ ಮಂಗಲಾ ಈಶ್ವರ ನಾಯ್ಕ, ಗ್ರಾ.ಪಂ.೨ರ ಅಧ್ಯಕ್ಷೆ ನಾಗರತ್ನಾ ಪಡಿಯಾರ್ ಸೇರಿದಂತೆ ಊರಿನ ಪ್ರಮುಖರು, ಹಿರಿಯ ಅಧಿಕಾರಿಗಳು, ತೆಂಗಿನಕಾಯಿಯನ್ನು ಒಡೆಯುವ ಮೂಲಕ ರಥೋತ್ಸವವು ಅತ್ಯಂತ ಶಾಂತಿಯುತವಾಗಿ ಜರುಗಲಿ ಎಂದು ಪ್ರಾರ್ಥಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಮುರ್ಡೇಶ್ವರ ಜಾತ್ರಾ ಮಹೋತ್ಸವವನ್ನು ನೋಡಲು, ಊರಿನ, ಪರವೂರಿನ ಭಕ್ತರು ಹಾಗೂ ವಿದೇಶಿ ಪ್ರವಾಸಿಗರು ಕೂಡಾ ಆಗಮಿಸಿದ್ದು ವಿಶೇಷವಾಗಿದ್ದು ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.