ಕಾರವಾರ: ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೂಚನೆ
ಕಾರವಾರ: ಮುಂದಿನ ಎರಡು ವರ್ಷದೊಳಗಾಗಿ ಜಿಲ್ಲೆಯಲ್ಲಿರುವ ಕುಡಿಯುವ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದ್ದು, ಬೇಸಿಗೆಗಾಲದಲ್ಲಿ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತೀರುವ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕಿದೆ ಎಂದು ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರೀಯಾಂಗಾ ಎಮ್ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲಿ ಜಿಲ್ಲೆಯ ಕುಮಟಾ ಹೊನ್ನಾವರ ಅಂಕೋಲಾ ಮತ್ತು ಕಾರವಾರ ತಾಲೂಕುಗಳ ವಿವಿಧ ಗ್ರಾಮಗಳಲ್ಲಿನ ಜಲ ಸಮಸ್ಯೆಗೆ ಕೈಗೊಳ್ಳಬೇಕಾದ ಸೂಕ್ತ ಪರಿಹಾರ ಕ್ರಮಗಳ ಕುರಿತಾಗಿ ಸಭೆ ನಡೆಸಿ ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲೆಯು ರಾಜ್ಯದ ಬರ ಪೀಡಿತ ಜಿಲ್ಲೆಗಳ ಪಟ್ಟಿಗೆ ಸೇರುವುದಿಲ್ಲಾ. ಹೀಗಾಗಿ ಪ್ರತಿ ವರ್ಷ ಟ್ಯಾಂಕರ್ ಮೂಲಕ ನೀರು ಪೂರೈಸಲು ನಮಗೆ ಸರ್ಕಾರದಿಂದ ಹಣ ಮಂಜೂರು ಆಗುವುದಿಲ್ಲಾ. ಟ್ಯಾಂಕರ ಮೂಲಕ ನೀರು ಪೂರೈಕೆಯೊಂದೆ ಪರಿಹಾರವಲ್ಲ, ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗಬಾರದೆಂದರೆ ಮುಖ್ಯವಾಗಿ ಅಂತರ್ಜಲ ವೃಧ್ಧಿಸಬೇಕಿದೆ. ಇದಕ್ಕೆ ಹೊಸ ಯೋಜನೆಗಳನ್ನು ರೂಪಿಸಿಕೊಳ್ಳುವದರೊಂದಿಗೆ ಮನರೇಗಾ ಯೋಜನೆಯಲ್ಲಿ ಕೆರೆ ಹೂಳೆತ್ತುವದು, ಕೆರೆಯ ಸುತ್ತಲೂ ತಡೆಗೋಡೆ ಅಥವಾ ಪಿಚ್ಚಿಂಗ್ ನಿರ್ಮಾಣ ಮಾಡುವುದು. ಇಂಗು ಗುಂಡಿಗಳಂತಹ ಕಾಮಗಾರಿಗಳನ್ನು ಕೈಗೊಂಡು 2023 ರ ಒಳಗಾಗಿ ಜಿಲ್ಲೆಯಲ್ಲಿ ನೀರಿಸ ಸಮಸ್ಯೆಯೇ ಇಲ್ಲದಂತೆ ಮಾಡಲು ನಾವೇಲ್ಲರು ಶ್ರಮಿಸಬೇಕಿದೆ ಎಂದರು.
ಕಾರವಾರ, ಹೊನ್ನಾವರ ಅಂಕೋಲಾ ಹಾಗೂ ಕುಮಾಟಾ ತಾಲ್ಲೂಕುಗಳಲ್ಲಿ ಬೇಸಿಗೆಯ ಅವಧಿಯಲ್ಲಿ ನೀರಿನ ಸಮಸ್ಯೆ ಎದುರಾಗಲು ಸಮುದ್ರದ ಉಪ್ಪು ನೀರು ಸಿಹಿ ನೀರನ್ನು ಸೇರುವುದೇ ಮುಖ್ಯ ಕಾರಣ. ಉಪ್ಪು ನೀರು ಬಾವಿ ಹಳ್ಳ ಕೊಳ್ಳಗಳ ಸಿಹಿ ನೀರನ್ನು ಸೇರದಂತೆ ಮಾಡಬೇಕೆಂದರೆ ಕಿಂಡಿ ಆಣೆಕಟ್ಟಲ್ಲಿ ಸರಿಯಾದ ಸಮಯಕ್ಕೆ ಹಲಗೆ ಹಾಕಿ, ಹೆಚ್ಚಿನ ಗಮನ ಹರಿಸುವಂತೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗೆ ಅವರು ಹೇಳಿದರು.
ವಿವಿಧ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಹಾಗೂ ಪರಿಹಾರ ಕ್ರಮಗಳ ಕುರಿತಾಗಿ ಮಾಹಿತಿ ನೀಡಿದರು.
ಬೋರ್ಶಿ ಹಳ್ಳದ ನೀರನ್ನು ಬಳಕೆ ಮಾಡುವುದರಿಂದ ಗೋಟೆಗಾಳಿಯ 20 ಹಳ್ಳಿಗಳ ನೀರಿನ ಸಮಸ್ಯೆ ನೀಗಲಿದೆ ಎಂದು ಬೇಡಿಕೆ ಇಟ್ಟ ಅಲ್ಲಿನ ಪಿಡಿಓ ಮಾತನ್ನು ಪರಿಗಣಿಸಿ, ಬೋರ್ಶಿ ಹಳ್ಳದ ನೀರನ್ನು ಸಂಗ್ರಹಿಸುವ ಯೋಜನೆಗೆ ತಗಲುವ ವೆಚ್ಚದ ಕುರಿತು ಮಾಹಿತಿ ಕಲೆಹಾಕಿ ಒಂದು ಕ್ರಿಯಾ ಯೋಜನೆ ರೂಪಿಸುವಂತೆ ಇಂಜಿನಿಯರ್ಗೆ ತಿಳಿಸಿದ ಸಿ ಇ ಒ ಅವರು, ಕದ್ರಾ ಬಳಿಯ ಸಾತೇಸೇರಿ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಲಾದ ಕಿಂಡಿ ಆಣೆಕಟ್ಟನ್ನು ಶೀಘ್ರದಲ್ಲಿ ದುರಸ್ಥಿಗೊಳಿಸಬೇಕೆಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಿ. ಎಮ್ ಜಕ್ಕಪ್ಪಗೋಳ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಇಂಜಿನೀಯರ್ ಸೇರಿದಂತೆ ಇತರರು ಹಾಜರಿದ್ದರು.