ಭಟ್ಕಳ: ಕನ್ನಡ ಭಾಷೆ, ನಮ್ಮ ಸಂಸ್ಕೃತಿ ಹಾಗೂ ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆಯಾಗಿದ್ದು, ಕನ್ನಡಿಗರಾದ ನಾವು, ಕನ್ನಡದ ದಾಸೋಹವನ್ನು ನಿರಂತರವಾಗಿ ಮಾಡುತ್ತೇವೆ ಎಂದು ಸಚಿವ ಮಂಕಾಳು ವೈದ್ಯ ಹೇಳಿದರು.
ಅವರು ನಗರದ ಕಮಲಾವತಿ ಶಾನಭಾಗ ಸಭಾಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಭಟ್ಕಳದ ಝೇಂಕಾರ್ ಕಲಾ ಸಂಘದ ಸಹಕಾರದೊಂದಿಗೆ ನಡೆದ ಸಾಂಸ್ಕೃತಿಕ ಸೌರಭ - ೨೦೨೪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ರಾಮಚಂದ್ರ ಕೆ. ಎಮ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಝೇಂಕಾರ್ ಸಂಸ್ಥೆಯ ಅಧ್ಯಕ್ಷ ಪ್ರಸನ್ನ ಪ್ರಭು ಸರ್ವರನ್ನು ಸ್ವಾಗತಿಸಿದರು.
ವೇದಿಕೆಯಲ್ಲಿ ತಹಶೀಲ್ದಾರ ತಿಪ್ಪೆಸ್ವಾಮಿ ಕೆ., ಕಲಾವಿದರಾದ ರಾಜಾರಾಮ ಪ್ರಭು, ಸಂಗೀತ ಶಿಕ್ಷಕ ವೆಂಕಟೇಶ ಭಟ್ಟ ಉಪಸ್ಥಿತರಿದ್ದರು. ಚಿತ್ರಕಲಾ ಶಿಕ್ಷಕ ಸಂಜಯ ಗುಡಿಗಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ಭರತನಾಟ್ಯ, ಸಂಗೀತ, ಜನಪದ ಕಲೆ, ಯಕ್ಷಗಾನ, ಕಥಾ ಕೀರ್ತನೆ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿದವು.