ಬೆಂಗಳೂರು: ಚಂದ್ರಯಾನ-3 ವ್ಯೂಮ ನೌಕೆಯಿಂದ 'ವಿಕ್ರಮ್' ಲ್ಯಾಂಡರ್ ಗುರುವಾರ ಯಶಸ್ವಿಯಾಗಿ ಬೇರ್ಪಟ್ಟಿದೆ. ಇದರೊಂದಿಗೆ ಭಾರತದ ಚಂದ್ರ ಯಾತ್ರೆಯ ಕೊನೆಯ ಹಂತದ ಚಟುವಟಿಕೆಗಳು ಗರಿಗೆದರಿವೆ.
ಈಗ ಆಗಸ್ಟ್ 23ರಂದು ಚಂದ್ರನ ಮೇಲೆ ನಿಧಾನವಾಗಿ ಇಳಿಯುವ ಗುರಿಯತ್ತ ಯೋಜನೆಯು ಇನ್ನೊಂದು ಹೆಜ್ಜೆಯನ್ನು ಇಟ್ಟಿದೆ. ಈ ಮಹತ್ವದ ಹಂತದ ಯಶಸ್ವಿ ಮುಕ್ತಾಯವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಟ್ವಿಟರ್ನಲ್ಲಿ ಘೋಷಿಸಿದೆ.
“ಲ್ಯಾಂಡರ್ ಮೊಡ್ಯೂಲ್ ಚಂದ್ರನ ಸಮೀಪದ ಕಕ್ಷೆಯೊಂದಕ್ಕೆ ನೆಗೆಯಲು ಸಿದ್ಧವಾಗಿದೆ. ಇದಕ್ಕಾಗಿ ಶುಕ್ರವಾರ ಸಂಜೆ 4 ಗಂಟೆಯ ವೇಳೆಗೆ ಡೀಬೂಸ್ಟಿಂಗ್ ಕಾರ್ಯಾ ಚರಣೆಗೆ ವೇದಿಕೆ ಸಿದ್ಧವಾಗಿದೆ' ಎಂದು ಅದು ಹೇಳಿದೆ.
ಈಗ ಲ್ಯಾಂಡರ್, ಪ್ರೊಪಲ್ಟನ್ ಮೊಡ್ಯೂಲ್ ನಿಂದ ಪ್ರತ್ಯೇಕಗೊಂಡಿರುವುದರಿಂದ, ಅದು (ಲ್ಯಾಂಡರ್) ಚಂದ್ರನತ್ತ ಸಾಗುವ ಪ್ರಯಾಣದ ಉಳಿದ ಭಾಗವನ್ನು ಸ್ವತಃ ತಾನೇ ಪೂರ್ಣಗೊಳಿಸಲಿದೆ ಎಂದು ಇಸ್ರೋ ತಿಳಿಸಿದೆ.
ಚಂದ್ರಯಾನ-3 ಎರಡು ಭಾಗಗಳನ್ನು ಒಳಗೊಂಡಿದೆ- ಲ್ಯಾಂಡರ್ ಮೊಡ್ಯೂಲ್ ಮತ್ತು ಪ್ರೊಪಲ್ಟನ್ ಮೊಡ್ಯೂಲ್, ಪ್ರೊಪಲ್ಟನ್ ಮೊಡ್ಯೂಲ್ನಿಂದ ಪ್ರತ್ಯೇಕಗೊಂಡಿರುವ ಲ್ಯಾಂಡರ್ ಇನ್ನು ಚಂದ್ರನತ್ತ ಪ್ರಯಾಣಿಸಲಿದೆ. ಲ್ಯಾಂಡರನ್ನು ಚಂದ್ರನ ಕಕ್ಷೆಯವರೆಗೆ ಸಾಗಿಸುವುದು ಪ್ರೊಪಲ್ಟನ್ ಮೊಡ್ಯೂಲ್ನ ಕೆಲಸವಾಗಿತ್ತು. ಈಗ ಅದರ ಪ್ರಮುಖ ಕೆಲಸ ಮುಗಿದಿದ್ದರೂ, ಅದು ಕೆಲವು ತಿಂಗಳುಗಳು ಅಥವಾ ವರ್ಷಗಳ ಕಾಲವೂ ಚಂದ್ರನ ಸುತ್ತ ಸುತ್ತುವುದನ್ನು ಮುಂದುವರಿಸಲಿದೆ.
ವಿಕ್ರಮ್ ಲ್ಯಾಂಡರ್ ಮುಂದೇನು?: ಮುಂದೆ ವಿಕ್ರಮ ಲ್ಯಾಂಡರ್ ಎರಡು ಮಹತ್ವದ ಕಕ್ಷೆ ಕಡಿತ ಕಾರ್ಯಾಚರಣೆಗಳನ್ನು ನಡೆಸಲಿದೆ. ಮೊದಲು, ಅದು 100x100 ಕಿ.ಮೀ. ಗಾತ್ರದ ವೃತ್ತಾಕಾರದ ಕಕ್ಷೆಯನ್ನು ಪ್ರವೇಶಿಸುತ್ತದೆ. ಬಳಿಕ, ಚಂದ್ರನಿಗೆ ಇನ್ನೂ ಹತ್ತಿರವಾಗುತ್ತಾ 100X30 ಕಿ.ಮೀ. ಗಾತ್ರದ ಕಕ್ಷೆಗೆ ಪ್ರವೇಶ ಪಡೆಯುತ್ತದೆ. ಲ್ಯಾಂಡರ್ ಆಗಸ್ಟ್ 23ರಂದು, ಚಂದ್ರನ ನೆಲವನ್ನು ನಿಧಾನವಾಗಿ ಸ್ಪರ್ಶಿಸುವುದಕ್ಕಾಗಿ ಈ 100X30 ಕಿ.ಮೀ. ಕಕ್ಷೆಯಿಂದ ತನ್ನ ಅಂತಿಮ ಯಾನವನ್ನು ಆರಂಭಿಸುತ್ತದೆ.