ಕಾರವಾರ: ದೇಶದ ಆಡಳಿತ ನಿರ್ಧಾರಕ್ಕೆ ನಮಗಿದು ಸದಾವಕಾಶ ಪ್ರತಿಯೊಬ್ಬರೂ ನಿಮ್ಮ ಅಮೂಲ್ಯವಾದ ಮತ ನೀಡುವ ಮೂಲಕ ದೇಶದ ಹಿತ ಕಾಪಾಡಲು ನಿರ್ಧರಿಸೋಣ ಎಂದು ಶಿರಸಿ ವಿಭಾಗದ ಸಹಾಯಕ ಆಯುಕ್ತೆ ಅಪರ್ಣ ರಮೇಶ್ ತಿಳಿಸಿದರು.
ಅವರು ಜಿಲ್ಲಾ ಪಂಚಾಯತ್, ಸ್ವೀಪ್ ಸಮಿತಿ, ನಗರಸಭೆ ಹಾಗೂ ತಾಲೂಕು ಪಂಚಾಯತ್ ಸಹಯೋಗದಲ್ಲಿ ಶಿರಸಿಯ ಅಜಿತ ಮನೋಚೇತನಾ ಟ್ರಸ್ಟ್ನ ವಿಕಾಸ ವಿಶೇಷ ಮಕ್ಕಳ ಶಾಲೆಯಲ್ಲಿ ಮತದಾನ ಜಾಗೃತಿ ಪಾದಯಾತ್ರೆ ಉದ್ಘಾಟಿಸಿ ಮಾತನಾಡಿದರು.
ದೇಶದ ಭವಿಷ್ಯ ನಿರ್ಧರಿಸುವ ಮಕ್ಕಳು ತಮ್ಮ ಪಾಲಕರಿಗೆ ಕಡ್ಡಾಯ ಮತದಾನ ಮಾಡುವಂತೆ ತಿಳಿಸಬೇಕು. ಯಾರೊಬ್ಬರು ಮತದಾನ ಮಾಡದೆ ಹೊರಗುಳಿಯಬಾರದು ಎಂದು ಜಾಗೃತಿ ಮೂಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಅಜಿತ ಮನೋ ಚೇತನ ಟ್ರಸ್ಟ್ ನ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ, ತಾಲೂಕು ಪಂಚಾಯತ್ ವ್ಯವಸ್ಥಾಪಕ ಸುಬ್ರಾಯ ಭಟ್, ನಗರಸಭೆಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಜರಿದ್ದರು.