ಗೋಕರ್ಣ: ಕುಮಟಾ ತಾಲೂಕಿನ ಗೋಕರ್ಣದ ತದಡಿ ಸಮುದ್ರದಲ್ಲಿ ಈಜಲು ತೆರಳಿದ್ದ ವೇಳೆ ಮುಳುಗಿ ತಾಯಿ ಹಾಗೂ ಮಗು ಅಸ್ವಸ್ಥಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಬಾನಾ ಶೇಖ್ (28), ಮುಹಮ್ಮದ್ ರಜಾಕ್ (6) ಅಸ್ವಸ್ಥಗೊಂಡವರಾಗಿದ್ದಾರೆ. ಇವರು ಭಟ್ಕಳ ಮೂಲದವರಾಗಿದ್ದಾರೆ. ಗೋಕರ್ಣದ ತದಡಿಯ ಮುರಾದ್ ಅಹ್ಮದ್ ಎಂಬುವವರ ಮನೆಗೆ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದರು. ಈ ವೇಳೆ ತದಡಿ ಕಡಲತೀರದಲ್ಲಿ ಈಜಲು ತೆರಳಿದ್ದರು.
ಈಜುತ್ತಿದ್ದಾಗ ಅಲೆಗಳು ಅಬ್ಬರಿಸಿವೆ. ಇದರಿಂದಾಗಿ ತಾಯಿ ಮತ್ತು ಮಗನಿಗೆ ಅಲೆಗಳ ನಡುವೆ ಈಜಲು ಕಷ್ಟವಾಗಿದೆ. ಹೀಗಾಗಿ ಮುಳುಗುವ ಹಂತ ತಲುಪಿದ್ದರು. ಆಗ ಇಬ್ಬರೂ ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ ಎನ್ನಲಾಗಿದೆ. ಈ ವೇಳೆ ಸ್ಥಳದಲ್ಲಿದ್ದ ಬೋಟ್ ಸಿಬ್ಬಂದಿಯು ರಕ್ಷಣೆಗೆ ದಾವಿಸಿದ್ದು, ಮುಳುಗುತ್ತಿದ್ದವರನ್ನು ರಕ್ಷಣೆ ಮಾಡಿದ್ದಾರೆ.
ಅಸ್ವಸ್ಥಗೊಂಡವರನ್ನು ಕೂಡಲೇ ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿದ್ದು, ಪ್ರಥಮ ಚಿಕಿತ್ಸೆ ಕೊಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕುಮಟಾ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಭೇಟಿ ನೀಡಿ ಮಾಹಿತಿಯನ್ನು ಕಲೆಹಾಕಿದ್ದಾರೆ.