ಶೃಂಗೇರಿ (ಚಿಕ್ಕಮಗಳೂರು): ಸ್ನೇಹಿತರೊಂದಿಗೆ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ನದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಶುಕ್ರವಾರ ಮಧ್ಯಾಹ್ನ ಜಿಲ್ಲೆಯ ಶೃಂಗೇರಿ ತಾಲೂಕಿನ ನೆಮ್ಮಾರು ಗ್ರಾಮದಲ್ಲಿ ವರದಿಯಾಗಿದೆ.
ಶೃಂಗೇರಿ ತಾಲೂಕಿನ ಸುಂಕದಮಕ್ಕಿ ಗ್ರಾಮದ ಪ್ರಜ್ವಲ್ ಹಾಗೂ ಕೊಪ್ಪ ತಾಲೂಕಿನ ಹರಿಹರಪುರ ಪಟ್ಟಣದ ರಕ್ಷಿತ್ ಮೃತ ಕಾಲೇಜು ವಿದ್ಯಾರ್ಥಿಗಳಾಗಿದ್ದು, ಶುಕ್ರವಾರ ಮಧ್ಯಾಹ್ನ ಪ್ರಜ್ವಲ್ ಹಾಗೂ ರಕ್ಷಿತ ತಮ್ಮ 14 ಮಂದಿ ಸ್ನೇಹಿತರೊಂದಿಗೆ ತಾಲೂಕಿನ ನೆಮ್ಮಾರು ಗ್ರಾಮದಲ್ಲಿ ಹರಿಯುವ ತುಂಗಾ ನದಿ ಬಳಿ ಹೋಗಿದ್ದಾರೆ. ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗುಸೇತುವೆ ಬಳಿ ತೆರಳಿದ್ದ ವಿದ್ಯಾರ್ಥಿಗಳು ನದಿಯಲ್ಲಿ ನೀರು ಕಡಿಮೆ ಎಂದು ಭಾವಿಸಿ ನದಿಯಲ್ಲಿ ಈಜಲು ಮುಂದಾಗಿದ್ದಾರೆ. ಈ ವೇಳೆ ರಕ್ಷಿತ್ ಎಂಬ ವಿದ್ಯಾರ್ಥಿ ಈಜು ಬಾರದಿದ್ದರೂ ನದಿಗಿಳಿದಿದ್ದು, ಈ ವೇಳೆ ನದಿ ಮಧ್ಯಕ್ಕೆ ತೆರಳಿದ್ದ ರಕ್ಷಿತ್ ನೀರಿನಲ್ಲಿ ಸಿಲುಕೊಂಡು ಮೇಲೆ ಬರಲಾಗದೇ ಒದ್ದಾಡಿದ್ದಾನೆ. ಇದನ್ನು ಗಮನಿಸಿದ ರಕ್ಷಿತ್ ಸ್ನೇಹಿತ ಪ್ರಜ್ವಲ್ ಆತನ ರಕ್ಷಣೆಗೆ ತೆರಳಿದ್ದಾನೆ. ಈ ವೇಳೆ ಇಬ್ಬರೂ ನೀರಿನಲ್ಲಿ ಸಿಲುಕೊಂಡು ನದಿಯಿಂದ ಮೇಲೆ ಬರಲಾಗದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ರಕ್ಷಿತ್ ಹಾಗೂ ಪ್ರಜ್ವಲ್ ಶೃಂಗೇರಿ ಪಟ್ಟಣದ ಖಾಸಗಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಾಗಿದ್ದು, ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಶೃಂಗೇರಿ ಠಾಣೆಯ ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಇಬ್ಬರು ವಿದ್ಯಾರ್ಥಿಗಳ ಮೃತದೇಹವನ್ನು ನದಿಯಿಂದ ಹೊರ ತೆಗೆಯಲಾಗಿದೆ.
ಸ್ಥಳದಲ್ಲಿ ವಿದ್ಯಾರ್ಥಿಗಳ ಪೋಷಕರು ಹಾಗೂ ವಿದ್ಯಾರ್ಥಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನೆ ಸಂಬಂಧ ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.