ಭಟ್ಕಳ: ಅರಣ್ಯಗಳಿಂದ ಕೂಡಿದ ಸಂಪದ್ಭರಿತ ಪಶ್ಚಿಮಘಟ್ಟಗಳಿಂದು ಬರಿದಾಗುತ್ತಿದ್ದು ಮುಂದಿನ ದಿನಗಳಲ್ಲಿ ದೊಡ್ಡ ಸವಾಲುಗಳನ್ನು ಎದುರಿಸುವಂತೆ ಮಾಡುತ್ತದೆ ಎಂದು ವಿಭಾಗೀಯ ಅರಣ್ಯಾಧಿಕಾರಿ ರಂಗನಾಥ್ ಹೇಳಿದರು.
ಅವರು ಅರಣ್ಯ ಇಲಾಖೆ ಹಾಗೂ ಲಯನ್ಸ್ ಕ್ಲಬ್ ಮುರ್ಡೇಶ್ವರದ ಸಹಭಾಗಿತ್ವದಲ್ಲಿ ಮುರ್ಡೇಶ್ವರದ ಬಸ್ತಿಮಕ್ಕಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ “ವಿಶ್ವ ಪ್ರಕೃತಿ ಸಂರಕ್ಷಣಾ ದಿನ”ದ ಅಂಗವಾಗಿ ನಡೆದ ವೃಕ್ಷಾರೋಪಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
“ಇತ್ತೀಚಿನ ವರ್ಷಗಳಲ್ಲಿ ವಿಶೇಷವಾಗಿ ಕರಾವಳಿ ಪ್ರದೇಶಗಳಲ್ಲಿ ನೀರಿನ ಸಮಸ್ಯೆಯು ವಿಪರೀತವಾಗಿ ಕಾಡುತ್ತಿದ್ದು ಇದಕ್ಕೆ ಮರಗಿಡಗಳು ಕಡಿಮೆಯಾಗಿರುವುದೇ ಕಾರಣವಾಗಿದೆ. ಈ ಮೊದಲು ಪಶ್ಚಿಮಘಟ್ಟಗಳು ಅರಣ್ಯ ಸಂಪತ್ತನ್ನು ಹೊಂದಿದ್ದು ಪ್ರಾಕೃತಿಕವಾಗಿ ಸಮತೋಲನದಿಂದ ಕೂಡಿತ್ತು. ಹೇರಳವಾಗಿ ಮಳೆಯಾಗಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಇರುತ್ತಿರಲಿಲ್ಲ. ಮನುಷ್ಯನ ದುರಾಸೆಯಿಂದ ಇಂದು ಅರಣ್ಯ ಸಂಪತ್ತು ಕಡಿಮೆಯಾಗುತ್ತಿದೆ. ಇದೇ ರೀತಿ ಮುಂದುವರೆದಲ್ಲಿ ಮುಂದೆ ಜೀವನಾವಶ್ಯಕ ಅನಿಲವಾದ ಆಮ್ಲಜನಕವನ್ನೂ ಕೂಡ ಹಣ ಕೊಟ್ಟು ಪಡೆಯಬೇಕಾದ ಸಂದರ್ಭ ಬರಬಹುದು. ಹಾಗಾಗಿ ನಾವೆಲ್ಲಾ ಒಟ್ಟಾಗಿ ಪ್ರಕೃತಿಯ ಸಂರಕ್ಷಣೆಗೆ ಬದ್ಧರಾಗಬೇಕಾಗಿದೆ.” ಎಂದು ಕರೆ ನೀಡಿದರು.
ಲಯನ್ 317ಬಿ ಜಿಲ್ಲಾ ಗವರ್ನರ್ ಡಾ.ಗಿರೀಶ ಕುಚಿನಾಡ್ ಗಿಡ ನೆಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಕೃತಿಯನ್ನು ಸಂರಕ್ಷಿಸುವಲ್ಲಿ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯ ಕುರಿತು ವಿವರಿಸಿದರು.
ಮುರ್ಡೇಶ್ವರ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಗೌರೀಶ ಆರ್. ನಾಯ್ಕ, ಕಾರ್ಯದರ್ಶಿ ನಾಗೇಶ ಮಡಿವಾಳ, ಕೋಶಾಧ್ಯಕ್ಷರಾದ ಗೌರೀಶ್ ಟಿ. ನಾಯ್ಕ, ಲಯನ್ಸ್ ಪದಾಧಿಕಾರಿಗಳು, ಸದಸ್ಯರು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.