ಗ್ಯಾರಂಟಿ ಟೀಕೆ ಮಾಡಿದ್ದ ಬಿಜೆಪಿಗರೇ ಈಗ ಗ್ಯಾರಂಟಿ ಹಿಂದೆ ಬಿದ್ದಿದ್ದಾರೆ: ಆರ್ ವಿ ದೇಶಪಾಂಡೆ

Source: SO News | By Laxmi Tanaya | Published on 16th April 2024, 9:39 PM | Coastal News |

ಕಾರವಾರ: ಗ್ಯಾರಂಟಿ ಬಗ್ಗೆ ಟೀಕೆ ಮಾಡಿದ್ದ ಬಿಜೆಪಿಗರೇ ಈಗ ಗ್ಯಾರಂಟಿ ಪದ ಬಳಸುತ್ತಿದ್ದಾರೆ. ಮೋದಿ ಗ್ಯಾರಂಟಿ ಎಂದು ಪ್ರಚಾರಕ್ಕೆ‌ಇಳಿದಿದ್ದಾರೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ‌ಆರ್.ವಿ.ದೇಶಪಾಂಡೆ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಬಾರಿ 400 ಸ್ಥಾನ ಗೆಲ್ಲುತ್ತದೆ ಎಂದು ಬಿಜೆಪಿಗರು ಪ್ರಚಾರಕ್ಕೆ ಇಳಿದಿದ್ದಾರೆ. ಗೆಲ್ಲುವುದಿಲ್ಲ ಎಂದು ತಿಳಿದು ಕಾಂಗ್ರೆಸ್ ಸರ್ಕಾರದ ಸಾಧನೆ ನೋಡಿ ತಾವೂ ಗ್ಯಾರಂಟಿ ಕೊಡುತ್ತೇವೆಂದು ಜನರ ಮುಂದೆ ಹೋಗುತ್ತಿದ್ದಾರೆ ಎಂದು ಕಿಡಿಕಾರಿದರು.

ಮಂಡ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂದಿದ್ದರು. ಆದರೆ ರಾಜ್ಯದಲ್ಲಿ  ತೀವ್ರತರವಾದ ಬರವಿದೆ. ಅಲ್ಲದೇ ‌ಜನರ ಸಮಸ್ಯೆ ಸಾಕಷ್ಟು ಇದ್ದರೂ ಒಂದೇ ಒಂದು ಶಬ್ದ ಇದರ ಬಗ್ಗೆ ಉಚ್ಛರಿಸಿಲ್ಲ. ರಾಜ್ಯದ ಜನರಿಂದ ತೆರಿಗೆ ಪಡೆದು ಅದನ್ನ ಅನುದಾನವಾಗಿ ನೀ ಮಡದೇ, ರಾಜ್ಯದ ಜನರು ಸಮಸ್ಯೆಗೆ ಸಿಲುಕುವಂತೆ ಮಾಡಿದ್ದು ಕೇಂದ್ರ ಸರ್ಕಾರ ಎಂದರು.

ಸದ್ಯ ಬರಗಾಲ ರಾಜ್ಯದಲ್ಲಿ ಇದೆ. ಕೇಂದ್ರದಿಂದ ಒಂದು ರೂಪಾಯಿ ಹಣವನ್ನ ಬಿಡುಗಡೆ ಮಾಡಿಲ್ಲ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ 20ಕ್ಕೂ ಅಧಿಕ ಸ್ಥಾನ ಗೆಲ್ಲುವುದು ತಿಳಿದು ಹಣ ನೀಡದೆ ಜನರನ್ನ‌ ಸಂಕಷ್ಟಕ್ಕೆ ಸಿಲುಕಿ ಕಾಂಗ್ರೆಸ್ ಹೆಸರಿಗೆ ಕಪ್ಪು ಚುಕ್ಕೆ ತರುವಂತೆ ಮಾಡುತ್ತಿದೆ ಎಂದು ಕಿಡಿಕಾರಿದರು.

ಮೋದಿ ಆಡಳಿತದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ವಿದ್ಯಾಭ್ಯಾಸ ಮಾಡಿದ ನಂತರ ಯುವಕರು ಕೆಲಸ ಸಿಗದೇ ಮನೆಯಲ್ಲಿ ಕೂರುವ ಪರಿಸ್ಥಿತಿ ಇದೆ.‌ ರಾಜ್ಯದಲ್ಲಿ ಇಂತಹ ಸಮಸ್ಯೆಯನ್ನ ಮನಗಂಡ ಕಾಂಗ್ರೆಸ್ ರಾಜ್ಯದಲ್ಲಿ ಯುವ ನಿಧಿ ನೀಡುವ ಮೂಲಕ ಯುವಕರ ಏಳಿಗೆಗೆ ಸಹಕಾರಿಯಾಗುವ ಕಾರ್ಯಕ್ರಮ ಚಾಲನೆ ತಂದಿದೆ. ರೈತರ, ಮಹಿಳೆಯರ, ಯುವಕರ, ಶ್ರಮಿಕರ ಪರ ಗ್ಯಾರಂಟಿ ಯೋಜನೆ ಘೋಷಿಸಿದ್ದೇವೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಎಲ್ಲಾ ಗ್ಯಾರಂಟಿ ಈಡೇರಿಸುತ್ತೇವೆ. ರಾಜ್ಯದಲ್ಲಿ ಮಾತು ಕೊಟ್ಟಂತೆ  ಗ್ಯಾರಂಟಿ ಜಾರಿಗೆ ತಂದಿದ್ದು ಹಾಗೇ ಕೇಂದ್ರದಲ್ಲೂ ತರಲಿದ್ದೇವೆ. ಈ ಬಾರಿ ಉತ್ತರಕನ್ನಡದಲ್ಲಿ ಕಾಂಗ್ರೆಸ್ ಗೆಲುವು ಖಚಿತವಾಗಿದೆ. ನಾಮಪತ್ರ ಸಲ್ಲಿಕೆ ವೇಳೆ ಬಿಸಿಲನ್ನು ಲೆಕ್ಕಿಸದೇ ಜನರು ಬಂದಿರುವುದನ್ನ ನೋಡಿದರೆ ಕಾಂಗ್ರೆಸ್ ಗೆಲ್ಲುವುದರಲ್ಲಿ ಅನುಮಾನವಿಲ್ಲ ಎಂದರು.

Read These Next