ಭಟ್ಕಳ:ವಿಶಿಷ್ಟ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಕನ್ನಡಾಭಿಮಾನ ಮೂಡಿಸುವ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ ಹೇಳಿದರು.
ಅವರು ಅಳ್ವೆಕೋಡಿ ದುರ್ಗಾಪರಮೇಶ್ವರಿ ಪ್ರೌಢಶಾಲೆಯಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ತಾಲೂಕು ಮಟ್ಟದ ಕನ್ನಡ ನಾಡು ನುಡಿಗೆ ಸಂಬಂಧಿಸಿದ ಥಟ್ ಅಂತ ಹೇಳಿ ರಸಪ್ರಶ್ನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಮಾರಿಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ರಾಮಾ ಮೊಗೇರ ಮಾತನಾಡಿ ವಿದ್ಯಾರ್ಥಿಗಳು ಕನ್ನಡ ಭಾಷೆಯ ಜೊತೆಗೆ ಇಂಗ್ಲೀಷ ಮತ್ತಿತರ ಭಾಷೆಯನ್ನೂ ಕಲಿಯಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕಾ ಅಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ ವಿವಿಧ ಕಾರ್ಯಕ್ರಮಗಳ ಮೂಲಕ ಸಾಹಿತ್ಯಾಸಕ್ತಿ, ನಾಡಿನ ಪರಂಪರೆಯ ಘನತೆಯನ್ನು ಅರಿಯುವಂತೆ ಮಾಡುವುದು ಮುಖ್ಯ ಉದ್ಧೇಶ ಎಂದರು.
ಶಿಕ್ಷಕ ಅಶೋಕ ಟಿ.ನಾಯ್ಕ ನಿರ್ವಹಿಸಿದರು. ಶಿಕ್ಷಕ ಡಿ.ಟಿ.ನಾಯ್ಕ ವಂದಿಸಿದರು.
ಉದ್ಘಾಟನಾ ಕಾರ್ಯಕ್ರಮದ ನಂತರ ಶಿಕ್ಷಕ ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಪೆಟ್ರಿಕ್ ಟೆಲ್ಲಿಸ್ ಪ್ರಾಜೆಕ್ಟರ ಬಳಸಿ ಹಲವು ಸುತ್ತುಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ, ಕವಿಗಳು, ಪದಬಂಧ, ಗಾದೆ ಮಾತುಗಳು, ನುಡಿಗಟ್ಟು ಮುಂತಾದ ಹಲವು ವಿಷಯಗಳನ್ನ ಆಯ್ದುಕೊಂಡು ರಸಪ್ರಶ್ನೆ ನಡೆಸಿಕೊಟ್ಟರು.
ಸ್ಪರ್ದೆಯಲ್ಲ ತೆರ್ನಮಕ್ಕಿಯ ಕರ್ನಾಟಕ ಪಬ್ಲಿಕ್ ಶಾಲೆಯ ಹರ್ಷಿತಾ ಶಿವಕುಮಾರ ನಾಯ್ಕ, ನಮಿತಾ ಮಧುಕರ ದೀಕ್ಷಿತ, ಹೇಮಾ ಮಾದೇವ ನಾಯ್ಕ ತಂಡ ಪ್ರಥಮ, ಬೈಲೂರಿನ ಕರ್ನಾಟಕ ಪಬ್ಲಿಕ್ ಶಾಲೆಯ ಸಾಕ್ಷಿ ವಿಷ್ಣು ನಾಯ್ಕ, ಸಾಧನಾ ರಾಮಕೃಷ್ಣ ನಾಯ್ಕ, ಸಿಂಚನಾ ಗೋಪಾಲ ನಾಯ್ಕ ದ್ವಿತೀಯ ಹಾಗೂ ಜನತಾ ವಿದ್ಯಾಲಯ ಮುರ್ಡೇಶ್ವರದ ಮಹಾಲಕ್ಷ್ಮೀ ಅಣ್ಣಪ್ಪ ನಾಯ್ಕ, ನಮೃತಾ ಎ.ನಾಯ್ಕ, ಹೇಮಶ್ರೀ ಎಂ.ಮೊಗೇರ ಮತ್ತು ಶ್ರೀವಲಿ ಪ್ರೌಢ ಶಾಲೆಯ ಮೋನಿಕಾ ಜಯಕರ ನಾಯ್ಕ, ಶಾರದಾ ವೆಂಕಟೇಶ ದೇವಾಡಿಗ, ಪ್ರಥಮೇಶ ರಾಜೇಶ ಬಲ್ಸೇಕರ ತೃತೀಯ ಬಹುಮಾನ ಪಡೆದರು. ಬಹುಮಾನದ ಪ್ರಾಯೋಜಕತ್ವವನ್ನು ಅಳ್ವೇಕೋಡಿ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ವಹಿಸಿತ್ತು.