ತಮಿಳುನಾಡು: ರಾಜ್ಯಪಾಲರ ನೀಟ್ ಪರ ನಿಲುವಿಗೆ ಸಿಎಂ ಸ್ಟಾಲಿನ್ ಖಂಡನೆ; ಸ್ವಾತಂತ್ರೋತ್ಸವದ ಚಹಾಕೂಟ ಬಹಿಷ್ಕಾರ
ಚೆನ್ನೈ: ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರು ವೈದ್ಯಕೀಯ ಶಿಕ್ಷಣದ ಪ್ರವೇಶಾತಿ ಪರೀಕ್ಷೆ ನೀಟ್ ಪರವಾದ ನಿಲುವನ್ನು ತಾಳಿರುವುದನ್ನು ಮುಖ್ಯಮಂತ್ರಿ ಸ್ಟಾಲಿನ್ ಬಲವಾಗಿ ಖಂಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಮಂಗಳವಾರ ರಾಜ್ಯಪಾಲರು ಆಯೋಜಿಸಿರುವ ಚಹಾಕೂಟವನ್ನು ತನ್ನ ಸರಕಾರ ಬಹಿಷ್ಕರಿಸುವುದಾಗಿ ಅವರು ಹೇಳಿದ್ದಾರೆ.
ಒಂದು ವೇಳೆ ತನಗೆ ಅಧಿಕಾರವಿರುತ್ತಿದ್ದರೆ, ನೀಟ್ ಪರೀ ಕೈಯ ವ್ಯಾಪ್ತಿಯಿಂದ ರಾಜ್ಯವನ್ನು ಹೊರತುಪಡಿಸುವ ತಮಿಳು ನಾಡು ವಿಧಾನಸಭೆಯ ವಿಧೇಯಕಕ್ಕೆ ತಾನು ಒಪ್ಪಿಗೆಯನ್ನು ನೀಡುತ್ತಿರಲಿಲ್ಲವೆಂದು ರವಿ ಹೇಳಿದ್ದರು
ರಾಜ್ಯಪಾಲರ ಹೇಳಿಕೆಯಿಂದ ತಮಿಳುನಾಡಿನ ವಿದ್ಯಾರ್ಥಿಗಳು ಹಾಗೂ ಯುವಜನತೆಗೆ ಆಘಾತವಾಗಿದೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ಅವರು ರವಿ ಅವರ ನೀಟ್ ಪರ ನಿಲುವನ್ನು ಖಂಡಿಸುತ್ತಾ ಹೇಳಿದರು.
ರಾಜ್ಯಪಾಲರ ಅನಿಸಿಕೆಯು ಬೇಜವಾಬ್ದಾರಿಯುತ ವಾದುದು ಹಾಗೂ ಏಳು ವರ್ಷಗಳ ನೀಟ್ ವಿರೋಧಿ ಹೋರಾಟವನ್ನು ಕ್ಷುಲ್ಲಕಗೊಳಿಸಿದೆ ಎಂದು ಸ್ಟಾಲಿನ್ ಹೇಳಿದರು. ಉನ್ನತ ಶಿಕ್ಷಣ ಇಲಾಖೆಯಲ್ಲಿಯೂ ರಾಜ್ಯಪಾಲ ರವಿ ಅವರು ಗೊಂದಲ ಸೃಷ್ಟಿಸುತ್ತಿದ್ದಾರೆ. ಅವರ ನೀಟ್ ಪರವಾದ ಅನಿಸಿಕೆಯು ವಿದ್ಯಾರ್ಥಿಗಳು ಹಾಗೂ ಪಾಲಕರ ಕನಸುಗಳನ್ನು ಭಗ್ನಗೊಳಿಸುತ್ತಿದೆ ಎಂದರು.