ಹೊಸದಿಲ್ಲಿ: ಲೋಕಸಭೆಯಲ್ಲಿ ಡಿಸೆಂಬರ್ 13ರಂದು ನಡೆದ ಭಾರೀ ಭದ್ರತಾ ಉಲ್ಲಂಘನೆ ಘಟನೆ ಬಗ್ಗೆ ಚರ್ಚೆಗೆ ಆಗ್ರಹಿಸಿ, ಸದನದಲ್ಲಿ ಕಲಾಪದ ಚಟುವಟಿಕೆಗಳಿಗೆ ಅಡ್ಡಿಪಡಿಸಿದ ಆರೋಪದಲ್ಲಿ ಬುಧವಾರ ಇನ್ನೂ ಇಬ್ಬರು ಲೋಕಸಭಾ ಸದಸ್ಯರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಲಾಗಿದೆ.
ಇದೇ ಕಾರಣಕ್ಕಾಗಿ 49 ಮಂದಿ ಪ್ರತಿಪಕ್ಷ ಎಂಪಿಗಳನ್ನು ಅಮಾನತುಗೊಳಿಸಿದ ಮರುದಿನವೇ ಈ ವಿದ್ಯಮಾನ ನಡೆದಿದೆ. ಇದರೊಂದಿಗೆ ಡಿಸೆಂಬರ್ 14ರಿಂದೀಚೆಗೆ ಸಂಸತ್ ಭವನದ ಉಭಯ ಸದನಗಳಲ್ಲಿ ಅಮಾನತುಗೊಂಡ ಸಂಸದರ ಸಂಖ್ಯೆ 143ಕ್ಕೇರಿದೆ. ಇವರಲ್ಲಿ ಲೋಕಸಭಾದ 97 ಹಾಗೂ ರಾಜ್ಯಸಭಾದ 46 ಸದಸ್ಯರಿದ್ದಾರೆ.
ಬುಧವಾರದಂದು ಲೋಕಸಭಾ ಎಂಪಿಗಳಾದ ಥಾಮಸ್ ಚಾಝಿ ಕಡಾನ್ ಪ್ರತಿಪಕ್ಷ ಹಾಗೂ ಎ.ಎಂ. ಆರೀಫ್ ಅವರನ್ನು ಘೋಷಣಾ ಫಲಕಗಳನ್ನು ಪ್ರದರ್ಶಿಸಿದ ಹಾಗೂ ಸದನದ ಅಂಗಣವನ್ನು ಗೊಳಿಲಾಗಿದೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಥಾಮಸ್ ಚಾಝಿಕಡಾನ್ ಅವರು ಕೇರಳಕಾಂಗ್ರೆಸ್ (ಮಾಣಿ) ಹಾಗೂ ಆರೀಫ್ ಅವರು ಸಿಪಿಎಂ ಪಕ್ಷಕ್ಕೆ ಸೇರಿದವರಾಗಿದ್ದಾರೆ. ಡಿಸೆಂಬರ್ 13ರಂದು ಇಬ್ಬರು ಯುವಕರು ಪ್ರೇಕ್ಷಕರ ಗ್ಯಾಲರಿಯಿಂದ ಲೋಕಸಭೆಯ ಸದನಕ್ಕೆ ಜಿಗಿದು ಹೊಗೆಬಾಂಬ್ ಸಿಡಿಸಿದ ಘಟನೆಯು ಘೋರ ಭದ್ರತಾ ಲೋಪವಾಗಿದ್ದು, ಆ ಬಗ್ಗೆ ಸದನದಲ್ಲಿ ಚರ್ಚೆ ನಡೆಯಬೇಕೆಂದು ಪ್ರತಿಪಕ್ಷ ಸದಸ್ಯರು ಬಲವಾಗಿ ಆಗ್ರಹಿಸುತ್ತಿದ್ದಾರೆ.