ಹೊಸದಿಲ್ಲಿ: ಮೂವರು ವಿದ್ಯಾರ್ಥಿ ಹೋರಾಟಗಾರರ ಜಾಮೀನಿಗೆ ತಡೆ ನೀಡಲು ಸುಪ್ರೀಂ ನಕಾರ
ಹೊಸದಿಲ್ಲಿ: ದಿಲ್ಲಿ ಹಿಂಸಾಚಾರಗಳಿಗೆ ಸಂಬಂಧಿಸಿದಂತೆ ಒಳಸಂಚು ಆರೋಪಗಳಲ್ಲಿ ಮತ್ತು ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಯಡಿ ಕಳೆದ ವರ್ಷದ ಮೇ ತಿಂಗಳಿನಲ್ಲಿ ಬಂಧಿಸಲ್ಪಟ್ಟಿದ್ದ ವಿದ್ಯಾರ್ಥಿ ಹೋರಾಟಗಾರರಾದ ಜೆಎನ್ಯುನ ನತಾಶಾ ನರ್ವಾಲ್ (32), ದೇವಾಂಗನಾ ಕಲಿತಾ (31) ಹಾಗೂ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿಯ ಆಸಿಫ್ ಇಕ್ಬಾಲ್ ತನ್ಹಾ (25) ಅವರಿಗೆ ಜಾಮೀನು ಮಂಜೂರು ಮಾಡಿರುವ ದಿಲ್ಲಿ ಉಚ್ಚ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ನಿರಾಕರಿಸಿದೆ.
ಆದರೆ, ಯುಎಪಿಎ ಅನ್ನು ವ್ಯಾಖ್ಯಾ ನಿಸಲಾಗಿರುವ ರೀತಿಯಿಂದಾಗಿ ಈ ಪ್ರಕರಣವು ದೇಶಾದ್ಯಂತ ಪರಿಣಾಮವನ್ನು ಬೀರಬಹುದಾಗಿದೆ ಎಂದು ಬೆಟ್ಟು ಮಾಡಿದ ನ್ಯಾಯಮೂರ್ತಿಗಳಾದ ಹೇಮಂತ ಗುಪ್ತಾ ಮತ್ತು ವಿ.ರಾಮ ಸುಬ್ರಮಣಿಯನ್ ಅವರ ಪೀಠವು ಜಾಮೀನು ಆದೇಶವನ್ನು ತಾನು ಪರಿಶೀಲಿಸುವುದಾಗಿಯೂ ತಿಳಿಸಿತು. ಈ ಬಗ್ಗೆ ವಿಚಾರಣೆಯನ್ನು ಮುಂದಿನ ತಿಂಗಳು ನಿಗದಿಗೊಳಿಸಿದ ಅದು ಮೂವರು ವಿದ್ಯಾರ್ಥಿ ಹೋರಾಟಗಾರ ರಿಗೆ ನೋಟಿಸ್ಗಳನ್ನು ಹೊರಡಿಸಿತು. ತನ್ಮಧ್ಯೆ ಉಚ್ಚ ನ್ಯಾಯಾಲಯದ ಆದೇಶವನ್ನು ಇತರ ಪ್ರಕರಣಗಳಲ್ಲಿ ಪೂರ್ವನಿದರ್ಶನವಾಗಿ ಬಳಸುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿತು.
ಮಂಗಳವಾರ ಪ್ರತಿಭಟನೆಯ ಹಕ್ಕು ಮತ್ತು ಭಯೋತ್ಪಾದಕ ಚಟುವಟಿಕೆಯ ನಡುವಿನ ಅಂತರವನ್ನು ವಿವರಿಸಿದ್ದ ದಿಲ್ಲಿ ಉಚ್ಚ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದ್ದು, ಮೂವರೂ ಗುರುವಾರ ರಾತ್ರಿ ದಿಲ್ಲಿಯ ತಿಹಾರ್ ಜೈಲಿನಿಂದ ಬಿಡು ಗಡೆಗೊಂಡಿದ್ದಾರೆ.