ಬೆಂಗಳೂರು: ನಿಮಗೆ ದಮ್ಮು, ತಾಕತ್ತು ಇದ್ದರೆ ನನ್ನನ್ನು ಹೊಡೆದು ಹಾಕಿ. ನಿಮ್ಮ ಬೆದರಿಕೆಗಳಿಗೆ ನಾನು ಯಾವುದೇ ಕಾರಣಕ್ಕೂ ಹೆದರುವುದಿಲ್ಲ, ಬಗ್ಗುವುದೂ ಇಲ್ಲ' ಎಂದು ಪ್ರತಿಪಕ್ಷನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ಆಯವ್ಯಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 'ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಬಡವರ ಪರವಾಗಿ ನಾನು ಧ್ವನಿ ಎತ್ತುತ್ತೇನೆ. ಅವರ ಪರವಾಗಿ ಹಾಗೂ ಕೋಮುವಾದಿಗಳ ವಿರುದ್ಧವಾಗಿ ಹೋರಾಟ ಮಾಡುತ್ತೇನೆ ಎಂದು ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದರು.
“ಸಚಿವರೊಬ್ಬರು ಟಿಪ್ಪು ರೀತಿ, ಸಿದ್ದರಾಮಯ್ಯರನ್ನು ಹೊಡೆದು ಹಾಕಿ' ಎಂದು ಕರೆ ಕೊಟ್ಟಿದ್ದಾರೆ. ಇಂತಹ ಹೇಳಿಕೆಗಳಿಂದ ನನ್ನನ್ನು ಹೆದರಿಸಬಹುದು ಎಂದು ಭಾವಿಸಿದ್ದರೆ, ಅದು ನಿಮ್ಮ ಭ್ರಮೆ. ನನ್ನ ಬಾಯಿ ಮುಚ್ಚಿ ಸಲು ಯಾರಿಂದಲೂ ಸಾಧ್ಯವಿಲ್ಲ. ಒಂದು ರೀತಿಯಲ್ಲಿ ರೌಡಿಗಳ ಭಾಷೆ. ಇದು ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.'ಸಚಿವರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕಿತ್ತು. ಅವರು ಜವಾಬ್ದಾರಿ ಸ್ಥಾನದಲ್ಲಿದ್ದು, ಈ ರೀತಿ ಮಾತನಾಡಿರುವುದು ಭೂಗತ ಲೋಕದವರು ಬಳಸುವ ಭಾಷೆಯಂತಿದೆ. ಸರಕಾರ ಹಾಗೂ ಗೃಹ ಇಲಾಖೆ ಜೀವಂತವಾಗಿದ್ದರೆ ಕ್ರಮ ಕೈಗೊಳ್ಳಬೇಕಿತ್ತು. ನೀವು ಒಳ್ಳೆಯವರು, ಆದರೆ, ಅಸಮರ್ಥ ಗೃಹ ಮಂತ್ರಿ' ಎಂದು ಸಿದ್ದರಾಮಯ್ಯ, ಆರಗ ಜ್ಞಾನೇಂದ್ರರನ್ನು ಕೆಣಕಿದರು.
ಈ ವೇಳೆ ಮಧ್ಯಪ್ರವೇಶಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, 'ರಾಜಕೀಯ ಪರಿಭಾಷೆಯಲ್ಲಿ ಸಚಿವರು ಹೇಳಿಕೆ ನೀಡಿದ್ದು, ಈಗಾಗಲೇ ಅವರು ವಿಷಾದ ವ್ಯಕ್ತಪಡಿಸಿದ್ದಾರೆ' ಎಂದು ಸ್ಪಷ್ಟಪಡಿಸಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, 'ನಿಮ್ಮ ಇಲಾಖೆ ಸತ್ತು ಹೋಗಿದೆ' ಎಂದು ಛೇಡಿಸಿದರು. 'ಹೌದು ನೀವು ಒಳ್ಳೆಯವರು. ಆದರೆ, ಸಚಿವರು ನೀಡಿದ ಪ್ರಚೋದನಕಾರಿ ಹೇಳಿಕೆ ವಿರುದ್ಧ ಏಕೆ ಕ್ರಮ ಕೈಗೊಳ್ಳಲಿಲ್ಲ. ನೀವು ದುರ್ಬಲ ಮಂತ್ರಿ ಅಲ್ಲವೆಂದಾದರೆ ಅವರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲು ಮಾಡಿ ಕಾನೂನು ಕ್ರಮ ಜರುಗಿಸಬೇಕಿತ್ತು. ಏಕೆ ಆ ಕೆಲಸ ಮಾಡಲಿಲ್ಲ. ಹೀಗಾಗಿ ಅಸಮರ್ಥರು ಎನ್ನಬೇಕಾಗಿದೆ' ಎಂದು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.
ಈ ವೇಳೆ ಮಧ್ಯಪ್ರವೇಶಿಸಿದ ಪ್ರಿಯಾಂಕ್ ಖರ್ಗೆ, 'ನನ್ನನ್ನು ದುರ್ಬಲ ಮಂತ್ರಿ ಎನ್ನುತ್ತಾರೆ ಎಂದು ಸಭೆಯಲ್ಲಿ ತಾವೇ ಹೇಳಿದ್ದೀರಿ. ಪೊಲೀಸ್ ಅಧಿಕಾರಿ ತನ್ನನ್ನು ವರ್ಗಾವಣೆ ಮಾಡಿ ಎಂದು ತಮಗೆ ಕರೆ ಮಾಡಿದ್ದರು. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಎಬಿವಿಪಿ ಕಾರ್ಯಕರ್ತರೇ ನಿಮ್ಮ ಕಚೇರಿಯ ಮೇಲೆ ದಾಳಿ ಮಾಡಿದ್ದಾರೆ' ಎಂದು ಉಲ್ಲೇಖಿಸಿದರು.