ಮಂಗಳೂರು: ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಪಿ. ಬಾಳಿಗಾ ಕೊಲೆ ಪ್ರಕರಣದ ಆರೋಪಿ ನರೇಶ್ ಶೆಣೈ (39) ಅವರನ್ನು ರವಿವಾರ ಉಡುಪಿ ಜಿಲ್ಲೆಯ ಹೆಜಮಾಡಿ ಬಳಿ ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ಅವರು ತಿಳಿಸಿದ್ದಾರೆ.
ಮಂಗಳೂರು ಸಿಸಿಬಿ ಇನ್ಸ್ಪೆಕ್ಟರ್ ವೆಲೆಂಟೈನ್ ಡಿ'ಸೋಜಾ ನೇತೃತ್ವದ ಪೊಲೀಸ್ ತಂಡವು ಮಾಹಿತಿ ಕಲೆ ಹಾಕಿ ರವಿವಾರ ಮಧ್ಯಾಹ್ನ 12.30 ಕ್ಕೆ ಆರೋಪಿ ನರೇಶ್ ಶೆಣೈ ಅವರನ್ನು ಪತ್ತೆ ಮಾಡಿ ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಪ್ರಕರಣದ ತನಿಖಾಧಿಕಾರಿ ಎಸಿಪಿ ತಿಲಕ್ ಚಂದ್ರ ಅವರಿಗೆ ಹಸ್ತಾಂತರಿಸಿದೆ. ಅವರನ್ನು ಬಂಧಿಸಲಾಗಿದ್ದು, ಸೋಮವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು. ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ವಿನಾಯಕ ಪಿ. ಬಾಳಿಗಾ ಅವರನ್ನು 2016 ಮಾರ್ಚ್ 21 ರಂದು ಬೆಳಗ್ಗೆ ನಗರದ ಕೊಡಿಯಾಲ್ಬೈಲ್ನ ಬೆಸೆಂಟ್ ಸ್ಕೂಲ್ 2 ನೇ ಲೇನ್ ಸ್ಟರ್ಲಿಂಗ್ ಚೇಂಬರ್ ಹಿಂಬದಿ ರಸ್ತೆಯಲ್ಲಿ ಅವರ ಮನೆ ಸಮೀಪ ಮಾರಕಾಯುಧಗಳಿಂದ ಕಡಿದು ಕೊಲೆ ಮಾಡಲಾಗಿತ್ತು. ಬರ್ಕೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ವಿನೀತ್ ಪೂಜಾರಿ, ನಿಶಿತ್ ದೇವಾಡಿಗ, ಶಿವ ಪ್ರಸಾದ್ ಯಾನೆ ಶಿವ ಯಾನೆ ಶಿವಪ್ರಸನ್ನ, ಶೈಲೇಶ್ ಯಾನೆ ಶೈಲು, ಶ್ರೀಕಾಂತ್ ಸಹಿತ 6 ಮಂದಿಯನ್ನು ಬಂಧಿಸಲಾಗಿತ್ತು. ನರೇಶ್ ಶೆಣೈ ಬಂಧನದೊಂದಿಗೆಬಂಧಿತರ ಸಂಖ್ಯೆ 7ಕ್ಕೇರಿದೆ. ಎಂದವರು ತಿಳಿಸಿದರು.
ನರೇಶ್ ಶೆಣೈ ಈ ಕೊಲೆ ಪ್ರಕರಣದ 1 ನೇ ಆರೋಪಿ ಹಾಗೂ ರೂವಾರಿಯಾಗಿದ್ದಾರೆ. ಬಾಳಿಗಾ ಅವರ ಹತ್ಯೆ ನಡೆಸುವ ಬಗ್ಗೆ ಇತರ ಆರೋಪಿಗಳೊಂದಿಗೆ ಸಂಚು ರೂಪಿಸಿದ್ದಲ್ಲದೆ ಕೊಲೆ ಕೃತ್ಯ ಎಸಗಿದ ಆರೋಪಿಗಳಿಗೆ ಹಣ ನೀಡಿದ್ದರು ಮತ್ತು ಬಳಿಕ ತಲೆಮರೆಸಿಕೊಂಡು ಸಾಕ್ಷÂ ನಾಶ ಪಡಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಬಾಳಿಗಾ ಅವರ ಆರ್ಟಿಐ ಚಟುವಟಿಕೆಗಳು ಈ ಕೊಲೆ ಕೃತ್ಯಕ್ಕೆ ಕಾರಣ ಎನ್ನುವುದು ಗೊತ್ತಾಗಿದೆ. ಆದರೆ ಯಾವ ಆರ್ಟಿಐ ಚಟುವಟಿಕೆ ಎನ್ನುವುದು ತನಿಖೆಯಿಂದ ಬೆಳಕಿಗೆ ಬರಬೇಕಾಗಿದೆ ಎಂದು ಪೊಲೀಸ್ ಆಯುಕ್ತರು ವಿವರಿಸಿದರು.
ಕೊಲೆ ಕೃತ್ಯದ ಬಳಿಕ ತಲೆ ಮರೆಸಿಕೊಂಡಿದ್ದ ನರೇಶ್ ಶೆಣೈ ಅವರು ಜಮ್ಮು ಮತ್ತು ಕಾಶ್ಮೀರ, ಗೋರಖ್ಪುರ, ಲಕ್ನೋ, ನೇಪಾಳದ ಗಡಿ ಮುಂತಾದ ಕಡೆ ಇದ್ದರು ಎಂಬ ಮಾಹಿತಿ ಇದೆ. ಹಾಗೆ ತಲೆಮರೆಸಿಕೊಳ್ಳಲು ಸಹಕರಿಸಿದವರ ಮೇಲೆ ಐಪಿಸಿ 212 ಸೆಕ್ಷನ್ ಪ್ರಕಾರ ಕೇಸು ದಾಖಲಿಸಲಾಗುವುದು. ವಿಘ್ನೇಶ್ ಎಂಬಾತ ತಲೆ ಮರೆಸಿಕೊಳ್ಳಲು ಸಹಕರಿಸಿದ್ದನೆಂದು ಹೇಳಲಾಗುತ್ತಿದ್ದು, ಅಗತ್ಯ ಬಿದ್ದರೆ ಅವರನ್ನು ವಿಚಾರಣೆಗೆ ಒಳ ಪಡಿಸಲಾಗುವುದು. ಈ ಕೃತ್ಯದಲ್ಲಿ ವೇದ ವ್ಯಾಸ ಕಾಮತ್ ಅವರ ಪಾತ್ರ ಇರುವ ಬಗ್ಗೆ ಇದು ವರೆಗೆ ಯಾವುದೇ ಸಾಕ್ಷಾÂಧಾರಗಳು ಲಭಿಸಿಲ್ಲ ಎಂದವರು ತಿಳಿಸಿದರು.
ಬಾಳಿಗಾ ಕೊಲೆ ಪ್ರಕರಣದಲ್ಲಿ ಭೂಗತ ಪಾತಕಿ ಗಳ ಕೈವಾಡ ಇಲ್ಲ, ಮಂಗಳೂರಿನಲ್ಲಿಯೇ ಸಂಚು ರೂಪಿಸಿ ಕೃತ್ಯ ನಡೆಸಲಾಗಿದೆ ಎನ್ನುವುದು ತನಿಖೆಯಿಂದ ಗೊತ್ತಾಗಿದೆ ಎಂದರು.
ಪ್ರಕರಣ ಕುರಿತಂತೆ ಈಗಾಗಲೇ 770 ಪುಟಗಳ ಆರೋಪ ಪಟ್ಟಿಯನ್ನು ಜೆ.ಎಂ.ಎಫ್.ಸಿ. 3 ನೇ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ತನಿಖೆಯನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಿ ಪೂರಕ ಆರೋಪ ಪಟ್ಟಿಯನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು.
ಜ್ಜsಉಚ ತಂಡದಲ್ಲಿ ತನಿಖಾಧಿಕಾರಿ ಎಸಿಪಿ ತಿಲಕ್ ಚಂದ್ರ, ಸಿಸಿಬಿ ಇನ್ಸ್ಪೆಕ್ಟರ್ ವಲೆಂಟೈನ್ ಡಿ'ಸೋಜಾ, ಇನ್ಸ್ಪೆಕ್ಟರ್ಗಳಾದ ಶಾಂತಾರಾಂ (ಬಂದರು ಠಾಣೆ), ರಾಜೇಶ್ (ಬರ್ಕೆ), ರವೀಶ್ನಾಯಕ್ (ಉರ್ವಾ), ಮಾರುತಿ ಜಿ. ನಾಯಕ್ (ಕದ್ರಿ), ಪಿಎಸ್ಐಗಳಾದ ಶ್ಯಾಂ ಪ್ರಸಾದ್, ರಾಜೇಂದ್ರ ಮುಂತಾದವರಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಡಿ.ಸಿ.ಪಿ. ಗಳಾದ ಶಾಂತಾರಾಜು ಮತ್ತು ಡಾ| ಸಂಜೀವ್ ಪಾಟೀಲ್ ಅವರುಉಪಸ್ಥಿತರಿದ್ದರು.