ಭಟ್ಕಳ: ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ), ರಾಜ್ಯ ಘಟಕ ಧಾರವಾಡ, ಜಿಲ್ಲಾ ಘಟಕ ಉತ್ತರಕನ್ನಡ ಇದರ ಆಶ್ರಯದಲ್ಲಿ ಸಂಘದ ಉತ್ತರಕನ್ನಡ ಜಿಲ್ಲಾ ಹಾಗೂ ಎಲ್ಲ ತಾಲೂಕು ಘಟಕಗಳ ಉದ್ಘಾಟನೆ, ಪದ ಸೇವಾದೀಕ್ಷಾ ಕಾರ್ಯಕ್ರಮ ಫೆ.18ರಂದು ಬೆಳಿಗ್ಗೆ 10 ಗಂಟೆಗೆ ಮುರುಡೇಶ್ವರ ಜನತಾ ವಿದ್ಯಾಲಯದಲ್ಲಿ ನೆರವೇರಲಿದೆ.
ಈ ಕುರಿತು ಸಂಘದ ಜಿಲ್ಲಾ ಅಧ್ಯಕ್ಷೆ ಜಯಶ್ರೀ ನಾಯ್ಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ವಿಶೇಷ ಆಹ್ವಾನಿತರಾಗಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ನಿವೃತ್ತ ನ್ಯಾಯಾಧೀಶ ರವಿ ಎಮ್. ನಾಯ್ಕ, ಸಹಾಯಕ ಆಯುಕ್ತೆ ಡಾ,ನಯನಾ ಉಪಸ್ಥಿತರಿರಲಿದ್ದಾರೆ.
ಸಂಸ್ಥೆಯ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷೆ ಡಾ.ಲತಾ ಎಸ್.ಮುಳ್ಳೂರು ಪುಷ್ಪಾರ್ಚನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾರವಾರ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಲತಾ ಎಮ್. ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ.ಮೊಗೇರ ಮತ್ತಿತರರು ಉಪಸ್ಥಿತರಿರಲಿದ್ದಾರೆ.
ಡಾ.ಶೈಲಜಾ ಉಪನ್ಯಾಸ ಮಾಡಲಿದ್ದಾರೆ. ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ಮಹಿಳೆಯರ, ಮಕ್ಕಳ, ಅದರಲ್ಲಿಯೂ ವಿಶೇಷವಾಗಿ ವಿಕಲಚೇತನ ಮಕ್ಕಳ ಏಳಿಗೆಗಾಗಿ ದುಡಿಯುತ್ತಿದೆ. ಬಾಲ ಅಪರಾಧ ತಡೆಗೂ ಸಂಘವು ಪ್ರಯತ್ನ ಮುಂದುವರೆಸಿದ್ದು, ಮಹಿಳೆಯರಿಗೆ ಕೌಶಲ್ಯ ವೃದ್ಧಿಯ ಬಗ್ಗೆ ಗಮನ ಹರಿಸಿದೆ ಎಂದರು. ಸೀಮಾ ಹೊನ್ನಾವರ, ಸಾವಿತ್ರಿಬಾಯಿ ಫುಲೆ ಸಂಘದ ಭಟ್ಕಳ ತಾಲೂಕು ಘಟಕದ ಅಧ್ಯಕ್ಷೆ ಶೋಭಾ ನಾಯ್ಕ, ನೂರ್ ಜಹಾನ್ ಶೇಕ್, ಮಮತಾ ವಾರೇಕರ್, ಜಯಲಕ್ಷ್ಮೀ ನಾಯ್ಕ, ನೇತ್ರಾವತಿ ಶ್ಯಾನಭಾಗ, ಯಮುನಾ ನಾಯ್ಕ, ಕೆ.ಮಾಲತಿ ಉಪಸ್ಥಿತರಿದ್ದರು.