26ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ

Source: SO News | By Laxmi Tanaya | Published on 13th January 2023, 11:17 PM | State News | Don't Miss |

ಹುಬ್ಬಳ್ಳಿ : ಡಿಜಿಟಲ್ ಇಂಡಿಯಾದ ಪ್ರಸ್ತುತ ಕಾಲಘಟ್ಟದಲ್ಲಿ ಕೌಶಲ್ಯಭರಿತ ಯುವಜನತೆಗೆ ಅವಕಾಶಗಳ ಬಾಗಿಲು ತೆರೆದಿದೆ. ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ"-  ಎಂಬ ಸ್ವಾಮಿ ವಿವೇಕಾನಂದರ ಮಂತ್ರವನ್ನು ಮನದಲ್ಲಿಟ್ಟುಕೊಂಡು ಅಭಿವೃದ್ಧಿಯ ದಿಗಂತದ ಕಡೆಗೆ ದೇಶವನ್ನು ಕೊಂಡೊಯ್ಯಲು ಯುವಸಮುದಾಯ ಕೈಜೋಡಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದೀಜಿಯವರು ಕರೆ ನೀಡಿದರು.

"ವಿಕಸಿತ ಯುವ-ವಿಕಸಿತ ಭಾರತ" ಎಂಬ ಘೋಷವಾಕ್ಯದೊಂದಿಗೆ ಹುಬ್ಬಳ್ಳಿ-ಧಾರವಾಡದಲ್ಲಿ  ಜನವರಿ 16 ರವರೆಗೆ ನಡೆಯಲಿರುವ 26ನೇ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮಕ್ಕೆ ಕೇಶ್ವಾಪುರದ ರೈಲ್ವೆ ಮೈದಾನದಲ್ಲಿ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಮೂರುಸಾವಿರ ಮಠ...ಸಿದ್ಧಾರೂಢ ಮಠ ಇಂತಹ ಅನೇಕ ಮಠಗಳ ಕ್ಷೇತ್ರಗಳಿಗೆ ನನ್ನ ನಮಸ್ಕಾರಗಳು..
ಚೆನ್ನಮ್ಮನ ನಾಡು, ರಾಯಣ್ಙನ ಬೀಡು ಪುಣ್ಯದ ನಾಡಿಗೆ ನನ್ನ ನಮಸ್ಕಾರಗಳು.... ಎಂದು ಕನ್ನಡದಲ್ಲಿ ಮಾತು ಆರಂಭಿಸಿದ ಪ್ರಧಾನಮಂತ್ರಿ ನರೇಂದ್ರ ಮೋದೀಜಿಯವರು, ದೇಶದ ಪ್ರಗತಿಯಲ್ಲಿ ಯುವಕರ ಪಾತ್ರವನ್ನು ಮನದಟ್ಟು ಮಾಡಿಕೊಟ್ಟರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು, ಭೀಮಸೇನ್ ಜೋಶಿ, ಗಂಗೂಬಾಯಿ ಹಾನಗಲ್ ಸೇರಿದಂತೆ ಅನೇಕ ಸಂಗೀತ ಲೋಕದ ದಿಗ್ಗಜರನ್ನು ಸ್ಮರಿಸಿದರು.

"ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ"-  ಎಂಬ ಸ್ವಾಮಿ ವಿವೇಕಾನಂದರ ಮಂತ್ರವನ್ನು ಕನ್ನಡದಲ್ಲಿ ಉಚ್ಛರಿಸಿದ ಪ್ರಧಾನಮಂತ್ರಿ ಮೋದೀಜಿಯವರು, ಇಂತಹ ಸಂದರ್ಭದಲ್ಲಿ ನಾವು ನಮ್ಮ ಕರ್ತವ್ಯಗಳನ್ನು ಅರಿತುಕೊಂಡ ದೇಶವನ್ನು ಮುನ್ನಡೆಸಬೇಕಿದೆ ಎಂದು ಯುವಕರಿಗೆ ಕಿವಿಮಾತು ಹೇಳಿದರು.

ಸ್ವಾಮಿ ವಿವೇಕಾನಂದರು ಕರ್ನಾಟಕದ ಜತೆ ಅವಿನಾಭಾವ ಸಂಬಂಧ ಹೊಂದಿದ್ದರು. ಬೆಂಗಳೂರು, ಹುಬ್ಬಳ್ಳಿ-ಧಾರವಾಡದಲ್ಲಿ ಸಂಚರಿಸಿದ್ದರು. ಮೈಸೂರು ಮಹಾರಾಜರು ವಿವೇಕಾನಂದ ಅವರು ಶಿಕ್ಯಾಗೊ ಸಮ್ಮೇಳನ ಹೋಗಲು ನೆರವು ನೀಡಿದ್ದರು ಎಂದು ನೆನಪಿಸಿದರು.

ಏಕ ಭಾರತ ಶ್ರೇಷ್ಠ ಭಾರತ ನಿರ್ಮಾಣಕ್ಕೆ ದೇಶವು ಹೊಸ ಸಂಕಲ್ಪದಿಂದ ಮುನ್ನಡೆದಿದೆ. ಯುವ ಶಕ್ತಿ ಸದೃಢವಾಗಿದ್ದರೆ ಸದೃಢ ದೇಶ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದು ಸ್ವಾಮಿ ವಿವೇಕಾನಂದರ ನಂಬಿಕೆಯಾಗಿತ್ತು.

ಚೆನ್ನಮ್ಮ ಎಂತಹ ಸಂಕಷ್ಟದ ಕಾಲದಲ್ಲೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಸಂಗೊಳ್ಳಿ ರಾಯಣ್ಣನ ಶೌರ್ಯವು ಬ್ರಿಟಿಷ್ ರ ಎದೆ ನಡುಗಿಸಿತ್ತು ಇಂತಹ ಮಹನೀಯರ ದೇಶಭಕ್ತಿ ನಮಗೆ ಆದರ್ಶವಾಗಬೇಕಿದೆ.

ವಿಶ್ವೇಶ್ವರಯ್ಯ ಅವರು ತಮ್ಮ ಪ್ರತಿಭೆಯ ಮೂಲಕ ಯುವ ಸಮುದಾಯವು ಹೇಗೆ ಎಲ್ಲೆಡೆ ಪಸರಿದೆ ಎಂಬುದಕ್ಕೆ ಉದಾಹರಣೆಯಾಗಿದ್ದಾರೆ.
ಜಾಗತಿಕ ಮಟ್ಟದಲ್ಲಿ ಗಣಿತದಿಂದ ವಿಜ್ಞಾನದ ಯಾವುದೇ ಸ್ಪರ್ಧೆ ನಡೆದರೂ ಭಾರತೀಯರ ಸಾಧನೆ ಅದ್ವಿತೀಯ.
ಇದು ಭಾರತದ ಯುವಶಕ್ತಿಯ ಸಂಕೇತವಾಗಿದೆ. ಯುವಶಕ್ತಿ ದೇಶವನ್ನು ನಡೆಸುವ ಶಕ್ತಿಯಾಗಿದೆ. ಮುಂದಿನ 25 ವರ್ಷಗಳಲ್ಲಿ ಭಾರತಕ್ಕೆ ಯುವಶಕ್ತಿ ದಿಕ್ಸೂಚಿಯಾಗಲಿದೆ ಎಂದರು.

ನಮ್ಮ ಚಿಂತನೆ ಹಾಗೂ ಪ್ರಯತ್ನಗಳು ಸಕಾರಾತ್ಮಕವಾಗಿ ಇರಬೇಕು. ಜಗತ್ತು ಸಮಸ್ಯೆಗಳ ಪರಿಹಾರಕ್ಕಾಗಿ ಭಾರತದ ಕಡೆ ನೋಡುತ್ತಿದೆ. ಇದರ ಹಿಂದೆ ಯುವಶಕ್ತಿಯ ಶ್ರಮವಿದೆ. 

ಭಾರತವು ಜಗತ್ತಿನ 5 ನೇ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಿದೆ.  ಇದನ್ನು ಅಗ್ರ ಮೂರನೇ ಸ್ಥಾನಕ್ಕೆ ಕೊಂಡೊಯ್ಯುವ ಗುರಿ ನಮ್ಮದಾಗಿದೆ ಎಂದು ಪ್ರಧಾನಮಂತ್ರಿ  ನರೇಂದ್ರ ಮೋದೀಜಿ ಹೇಳಿದರು.
ಕೃಷಿ ಕ್ಷೇತ್ರದಲ್ಲಿ ಭಾರತವು ಜಗತ್ತಿನ ಮುಂಚೂಣಿಯಲ್ಲಿದ್ದು, ಈ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆಯಿಂದ ಯುವ ಜನತೆಗೆ ಇನ್ನಷ್ಟು ಅವಕಾಶಗಳು ಲಭಿಸಲಿವೆ.

ಕ್ರೀಡಾ ಕ್ಷೇತ್ರದಲ್ಲಿ ಭಾರತವು ಪ್ರಕಾಶಿಸುತ್ತಿರುವುದಕ್ಕೆ ಯುವ ಸಮುದಾಯದ ಪ್ರಯತ್ನವೇ ಕಾರಣವಾಗಿದೆ.
ಇದೊಂದು ವಿಶೇಷ ಅವಕಾಶ. ಈಗಿರುವುದು ವಿಶೇಷ ಪೀಳಿಗೆ ಆಗಿದೆ. ದೇಶದ ಆರ್ಥಿಕತೆ ಸುಧಾರಣೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಕಳೆದ ಒಂಭತ್ತು ವರ್ಷಗಳಲ್ಲಿ ಸಾಕಷ್ಟು ಕೆಲಸ ಮಾಡಲಾಗಿದೆ.
ಇದೀಗ ರನ್ ವೇ ಸಿದ್ಧವಾಗಿದೆ. ಯುವ ಸಮಯದಾಯ ಇದನ್ನು ಬಳಸಿಕೊಂಡು ಅಭಿವೃದ್ಧಿಯ ದಿಗಂತದ ಕಡೆಗೆ ಹಾರಲು ಮುಂದಾಗಬೇಕಿದೆ ಎಂದರು.

ಸ್ತ್ರೀಶಕ್ತಿಯು ರಾಷ್ಟ್ರಶಕ್ತಿಯನ್ನು ಮುನ್ನಡೆಸುವಲ್ಲಿ ಸಫಲರಾಗಿದ್ದಾರೆ. ಫೈಟರ್ ಜೆಟ್ ಹಾರಿಸುತ್ತಿರುವ ಮಹಿಳೆಯರು ವಿಜ್ಞಾನ, ತಂತ್ರಜ್ಞಾನ, ಕ್ರೀಡೆ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿದ್ದಾರೆ.
ಯುವಜನತೆ ವರ್ತಮಾನದಲ್ಲಿದ್ದಕೊಂಡು ಭವಿಷ್ಯದ ಕಡೆ ಸಕಾರಾತ್ಮಕವಾಗಿ ಯೋಚಿಸುವ ಮೂಲಕ ಹೊಸ ಹೊಸ ಆವಿಷ್ಕಾರಗಳತ್ತ ಚಿತ್ತವನ್ನು ಹರಿಸಬೇಕು.

ಹತ್ತು ವರ್ಷಗಳ ಇಲ್ಲದ ಎಷ್ಟೋ ವಿಷಯಗಳಿಂದ ನಾವು ಈಗ ಚಕಿತರಾಗಿದ್ದೇವೆ ಈಗ ಸೈಬರ್ ಸೆಕ್ಯುರಿಟಿ, ಡೇಟಾ‌ ಸೈನ್ಸ್, ದೇಶದ ಸುರಕ್ಷತೆ ಸೇರಿ ಎಲ್ಲದರ ಸ್ವರೂಪ ಬದಲಾಗಿದೆ. ಯುವಸಮುದಾಯವು ತಂತ್ರಜ್ಞಾನದ ಈ ಬದಲಾವಣೆಯಿಂದ ಪಾಠ ಕಲಿತು ಹೊಸ ಕೌಶಲಗಳನ್ನು ಬೆಳೆಸಿಕೊಳ್ಳಬೇಕು.

ಪ್ರಸ್ತುತ ದಿನಗಳಲ್ಲಿ ಯುವಶಕ್ತಿಯ ಮುಂದೆ ಹತ್ತಾರು ಅವಕಾಶಗಳಿವೆ. ಆಯ್ಕೆ ಅವರ ಮುಂದಿದೆ. ಕ್ಷಿಪ್ರವಾಗಿ ಬದಲಾಗುತ್ತಿರುವ ಈ ಸಂದರ್ಭದಲ್ಲಿ ಯುವಕರು ವೈಯಕ್ತಿಕ ಸಾಧನೆಯ ಜತೆಗೆ ಸಾಂಸ್ಥಿಕ ಹಾಗೂ ಅನ್ವೇಷಣೆ ಮೂಲಕ ದೇಶದ ಪ್ರಗತಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಸ್ವಚ್ಛ ಭಾರತ, ಡಿಜಿಟಲ್ ಇಂಡಿಯಾ, ಕೋವಿಡ್ ಲಸಿಕೆ ಹೀಗೆ ಪ್ರತಿಯೊಂದು ಮಜಲುಗಳಲ್ಲಿ ಕೆಲವರು ಅಪಹಾಸ್ಯ ಮಾಡಿದ್ದರು. ಆದರೆ ಭಾರತದ ಈ ಸಾಧನೆಯ ಬಗ್ಗೆ ಜಗತ್ತಿನಲ್ಲಿ ಈಗ ಚರ್ಚೆ ನಡೆದಿದೆ.
ಯುವಶಕ್ತಿಯನ್ನು ಕಟ್ಟಿಕೊಂಡು ದೇಶದಲ್ಲಿ ವಿಭಿನ್ನ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ದೇಶದ ಬೇರೆ‌ ಬೇರೆ ಭೌಗೋಳಿಕ ಪ್ರದೇಶಗಳ ಯುವಕರ ತಂಡಗಳು ಬಂದಿವೆ. ಇಲ್ಲಿನ ಸ್ಪರ್ಧೆಯಲ್ಲಿ ಯಾರೇ ಗೆದ್ದರೂ ಅಂತಿಮವಾಗಿ ಭಾರತವೇ ಗೆಲ್ಲುತ್ತದೆ.
ಆದ್ದರಿಂದ ಯುವಜನೋತ್ಸವದಲ್ಲಿ ಭಾಗವಹಿಸುವ ತಂಡಗಳು ವಿಕಸಿತ ಭಾರತ ಸಮರ್ಥ ಭಾರತವನ್ನು ಗಮನದಲ್ಲಿಟ್ಟುಕೊಂಡು ದೇಶವನ್ನು ಮುನ್ನಡೆಸಬೇಕು ಎಂದು ಕರೆ ನೀಡಿದರು.

ಯುವಜನೋತ್ಸವದಿಂದ ಭಾವನಾತ್ಮಕ ಬೆಸುಗೆ: ರಾಷ್ಟ್ರೀಯ ಯುವಜನೋತ್ಸವವು ಇಡೀ ದೇಶವನ್ನು ಭೌಗೋಳಿಕವಾಗಿ ಹಾಗೂ ಭಾವನಾತ್ಮಕವಾಗಿ ಒಂದುಗೂಡಿಸುತ್ತದೆ ಎಂದು ಕೇಂದ್ರ ಯುವ ವ್ಯವಹಾರಗಳು ಹಾಗೂ ಕ್ರೀಡಾ ಸಚಿವರಾದ ಅನುರಾಗ್ ಸಿಂಗ್ ಠಾಕೂರ್ ಅಭಿಪ್ರಾಯಪಟ್ಟರು.

ಸ್ವಸ್ಥ ಶರೀರದಲ್ಲಿ ಸ್ವಸ್ಥ ಮನಸ್ಸು ಇರುತ್ತದೆ. ಆದ್ದರಿಂದ ಗೀತಾ-ರಾಮಾಯಣ ಓದುವ ಮೊದಲು ಫುಟ್ಬಾಲ್ ಆಡುವಂತೆ ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರು.
ಪ್ರಸ್ತುತ ಪ್ರಧಾನ ಮಂತ್ರಿಗಳು ಕೂಡ ಅದೇ ಮಾರ್ಗದಲ್ಲಿ ದೇಶದ ಯುವ ಜನತೆಯನ್ನು ಕೊಂಡೊಯ್ಯುತ್ಯಿದ್ದಾರೆ.
ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ನಿರ್ಮಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಜೀಯವರ ಕನಸುಗಳ ಸಾಕಾರಕ್ಕೆ ಯುವಸಮುದಾಯ ಕೈಜೋಡಿಸುವ ಅಗತ್ಯವಿದೆ.

ಮೋದಿಜಿಯವರ ನಾಯಕತ್ವದಲ್ಲಿ ಜಿ-20 ಅಧ್ಯಕ್ಷತೆ ಸ್ಥಾನವು ಭಾರತಕ್ಕೆ ಲಭಿಸಿದೆ. ಕ್ರೀಡೆಗಳಲ್ಲಿ ಅತ್ಯುನ್ನತ ಸಾಧನೆಯನ್ನು ದೇಶವು ಸಾಧಿಸಿದೆ.
ಭಾರತವನ್ನು ವಿಕಸಿತಗೊಳಿಸುವ ಆಂದೋಲನವು ಒಬ್ಬ ನರೇಂದ್ರ(ಸ್ವಾಮಿ ವಿವೇಕಾನಂದ) ಅವರಿಂದ ಆರಂಭಗೊಂಡು ಈಗ ಇನ್ನೊಬ್ಬ ನರೇಂದ್ರ(ಪ್ರಧಾನಮಂತ್ರಿ ನರೇಂದ್ರ ಮೋದೀಜಿ) ಅವರ ಮೂಲಕ ಮುಂದುವರಿದಿದೆ.

ಭ್ರಷ್ಟಾಚಾರ ಮುಕ್ತ, ನಶಾಮುಕ್ತವಾಗಿರುವ ಸ್ವಸ್ಥ ಮತ್ತು ಸದೃಢ ಭಾರತ ನಿರ್ಮಾಣಕ್ಕೆ ಯುವಜನತೆ ಕೈಜೋಡಿಸಬೇಕು ಎಂದು  ಕೇಂದ್ರ ಸಚಿವ ಅನುರಾಗ ಸಿಂಗ್ ಠಾಕೂರ್ ಅವರು ಕರೆ ನೀಡಿದರು.

ಕೇಂದ್ರ ಸಂಸದೀಯ ವ್ಯವಹಾರಹಗಳು,ಕಲ್ಲಿದ್ದಲು ಮತ್ತು ಗಣಿ  ಸಚಿವರಾದ ಪ್ರಹ್ಲಾದ್ ಜೋಶಿ ಮಾತನಾಡಿ,ಸ್ವಾಮಿ ವಿವೇಕಾನಂದರ ಜಯಂತಿಯ ಈ ಸಂದರ್ಭದಲ್ಲಿ ಮೊಟ್ಟ ಮೊದಲ ಬಾರಿಗೆ ಉತ್ತರ ಕರ್ನಾಟಕದಲ್ಲಿ ರಾಷ್ಟ್ರೀಯ ಯುವಜನೋತ್ಸವ ಆಯೋಜಿಸಲಾಗಿದೆ. ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಹೊಂದಿರುವ ಭಾರತ ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಪ್ರಧಾನ ಮಂತ್ರಿಯವರ ಆಶೀರ್ವಾದದಿಂದ ಧಾರವಾಡ ಜಿಲ್ಲೆಗೆ ಐಐಟಿ,ಐಐಐಟಿ,ನವದೆಹಲಿಗೆ,ಕಾಶಿಗೆ ನೇರ ವಿಮಾನಯಾನ ಸೌಕರ್ಯ ದೊರೆತಿದೆ.ದೇಶದ ಯುವ ಜನತೆ ಉತ್ಸಾಹದಿಂದ ಉತ್ಸವದಲ್ಲಿ ಭಾಗವಹಿಸುತ್ತಿರುವುದು ಸಂತಸ ತಂದಿದೆ ಎಂದರು‌.

ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಕೈಮಗ್ಗ ಮತ್ತು ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಇಲಾಖೆಯ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಅಧ್ಯಕ್ಷತೆ ವಹಿಸಿದ್ದರು.

ಏಲಕ್ಕಿ ಹಾರ,ವಿವೇಕಾನಂದರ ವಿಗ್ರಹ, ರಾಷ್ಟ್ರಧ್ವಜ ಚೌಕಟ್ಟಿನ ಸ್ಮರಣಿಕೆ
ಸಾಂಪ್ರದಾಯಿಕ ಶಾಲು ಹೊದಿಸಿ,ಹಾವೇರಿಯ ಏಲಕ್ಕಿ ಹಾರ,ಮುತ್ತಿನಿಂದ ಅಲಂಕರಿಸಿದ ಪೇಟ ತೊಡಿಸಿ,ತೇಗದ ಮರದಲ್ಲಿ ತಯಾರಿಸಿದ ಸ್ವಾಮಿ ವಿವೇಕಾನಂದರ ವಿಗ್ರಹ,ಗರಗ-ಬೆಂಗೇರಿಯಲ್ಲಿ ಸಿದ್ಧವಾಗುವ ರಾಷ್ಟ್ರಧ್ವಜವನ್ನು ಅಳವಡಿಸಿದ ಚೌಕಟ್ಟಿನ ಸ್ಮರಣಿಕೆ ನೀಡಿ ಪ್ರಧಾನಿಯವರನ್ನು ಗೌರವಿಸಲಾಯಿತು‌.

ಕೇಂದ್ರ ಗೃಹ ವ್ಯವಹಾರಗಳು ಹಾಗೂ ಯುವ ವ್ಯವಹಾರಗಳು ಮತ್ತು ಕ್ರೀಡಾ ಇಲಾಖೆಯ ರಾಜ್ಯ ಸಚಿವರಾದ ನಿಸಿತ್ ಪ್ರಮಾಣಿಕ್,  ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕರ್ನಾಟಕ ಸರ್ಕಾರದ ಯುವ ಸಬಲೀಕರಣ, ಕ್ರೀಡೆ ಹಾಗೂ ರೇಷ್ಮೆ ಇಲಾಖೆಯ ಸಚಿವರಾದ ಡಾ.ಕೆ.ಸಿ.ನಾರಾಯಣಗೌಡ, 
ಗಣಿ-ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಆಚಾರ್ ಹಾಲಪ್ಪ ಬಸಪ್ಪ, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ,ಮಾಜಿ ಮುಖ್ಯಮಂತ್ರಿ,ಶಾಸಕ ಜಗದೀಶ ಶೆಟ್ಟರ್,ಶಾಸಕರಾದ ಅಮೃತ ದೇಸಾಯಿ,ಅರವಿಂದ ಬೆಲ್ಲದ, ವಿಧಾನಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ, ಪ್ರದೀಪ ಶೆಟ್ಟರ್, ಬಯಲುಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ,ಜಂಗಲ್ ರೆಸಾರ್ಟ್ಸ ಅಭಿವೃದ್ದಿ ನಿಗಮ ಅಧ್ಯಕ್ಷ ರಾಜು ಕೋಟೆಣ್ಣವರ,ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಮಹಾಪೌರ ಈರೇಶ್ ಅಂಚಟಗೇರಿ ಮತ್ತಿತರರು ವೇದಿಕೆಯಲ್ಲಿದ್ದರು.

ಚಿತ್ತಾಕರ್ಷಕ ಪಥಸಂಚಲನ : ದೇಶದ ವೈವಿಧ್ಯಮಯ ಕಲೆ, ಪೋಷಾಕು, ಸಂಸ್ಕೃತಿಗಳನ್ನು ಪ್ರತಿಬಿಂಬಿಸುವ ಚಿತ್ತಾಕರ್ಷಕ ಪಥಸಂಚಲನವು ವಿವಿಧ ರಾಜ್ಯಗಳ ತಂಡಗಳಿಂದ ಜರುಗಿತು. ರಾಷ್ಟ್ರೀಯ ಯೋಗಾಸನ ಮತ್ತು ಕ್ರೀಡಾ ಫೆಡರೇಷನ್ನಿನ ವಿದ್ಯಾರ್ಥಿಗಳಿಂದ ಕಲಾತ್ಮಕ ಯೋಗಾಸನ ಮತ್ತು ಮಲ್ಲಕಂಬ ಸಾಹಸಗಳ ಪ್ರದರ್ಶನ ಜರುಗಿತು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಬಿಜೆಪಿ ಮುಖಂಡನಿಗೆ ಪೆನ್‌ಡ್ರೈವ್ ನೀಡಿದ್ದೆ; ಪ್ರಜ್ವಲ್ ಕಾರು ಚಾಲಕನಿಂದ ಹೇಳಿಕೆ

ಪ್ರಜ್ವ ರೇವಣ್ಣರದ್ದು ಎನ್ನಲಾದ ಅಶ್ಲೀಲ ವೀಡಿಯೊ ಪೆನ್ ಡ್ರೈವ್ ಬಿಜೆಪಿ ಮುಖಂಡರೂ ಆಗಿರುವ ವಕೀಲ ದೇವರಾಜೇಗೌಡ ಬಿಟ್ಟು ಬೇರೆ ಯಾರಿಗೂ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಅವಧಿ ಉಲ್ಲೇಖಿಸದೇ ಪ್ರಜ್ವಲ್ ರೇವಣ್ಣ ಜೆಡಿಎಸ್‌ನಿಂದ ಅಮಾನತು

ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಪ್ರಕರಣ ಸಂಬಂಧ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ರೇವಣ್ಣ, ಪ್ರಜ್ವಲ್ ಉಚ್ಚಾಟನೆಗೆ ಜೆಡಿಎಸ್ ಶಾಸಕರ ಪಟ್ಟು

ರಾಜ್ಯದ ಜನತೆಯ ಮುಂದೆ ತಲೆ ತಗ್ಗಿಸುವಂತಹ ಕೆಲಸ ಮಾಡಿದವರನ್ನು ರಾಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಘನತೆಯನ್ನು ಉಳಿಸಬೇಕಿದೆ ಎಂದು ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ: ಕುಮಾರಸ್ವಾಮಿ

ಜೆಡಿಎಸ್ ಸಂಸದ ಪ್ರಜಿ ಕುಮಾರಸ್ವಾಮಿ ಡ್ರೈವ್ ಪ್ರಕರಣದಲ್ಲಿ ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ' ಎಂದು ಮಾಧ್ಯಮಗಳ ಮುಂದೆ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ತ್ವರಿತಗತಿಯಲ್ಲಿ ತನಿಖೆ ನಡೆಸಿ, ವರದಿ ಸಲ್ಲಿಸಲು ಸೂಚನೆ: ಪರಮೇಶ್ವ‌ರ್

ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಿ, ವರದಿ ಸಲ್ಲಿಸುವಂತೆ ...