ರಾಜ್ಯಸಭೆಯ 12 ಸಂಸದರ ಅಮಾನತು; ಪ್ರತಿಪಕ್ಷ ಸದಸ್ಯರ ಸಭಾತ್ಯಾಗ
ಹೊಸದಿಲ್ಲಿ: ರಾಜ್ಯಸಭೆಯ 12 ಪ್ರತಿಪಕ್ಷ ಸಂಸದರ ಅಮಾನತನ್ನು ಪ್ರತಿಭಟಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷದ ಸದಸ್ಯರು ಮಂಗಳವಾರ ಸಂಸತ್ತಿನ ಉಭಯ ಸದನಗಳಲ್ಲಿ ಸಭಾತ್ಯಾಗ ಮಾಡಿದರು ಮತ್ತು ಕ್ಷಮೆಯನ್ನು ಕೋರುವಂತೆ ಸಭಾಪತಿಗಳು ಸೂಚಿಸಿದ ಬಳಿಕ ರಾಜ್ಯಸಭೆಯಲ್ಲಿ ದಿನದ ಕಲಾಪಗಳನ್ನು ಬಹಿಷ್ಕರಿಸಿದರು.
ಸಭಾತ್ಯಾಗದ ಬಳಿಕ ಸಂಸತ್ ಸಂಕೀರ್ಣದಲ್ಲಿಯ ಮಹಾತ್ಮಾ ಗಾಂಧಿ ಪುತ್ಥಳಿಯೆದುರು ಸರಕಾರ ಮತ್ತು ಅದರ ಸರ್ವಾಧಿಕಾರಿ ಧೋರಣೆಯ ವಿರುದ್ಧ ಘೋಷಣೆಗಳನ್ನು ಕೂಗುತ್ತ ಪ್ರತಿಭಟನೆ ನಡೆಸಿದ ಪ್ರತಿಪಕ್ಷ ಸಂಸದರು, ಈ ವಿಷಯದಲ್ಲಿ ಧ್ವನಿಯೆತ್ತುವುದನ್ನು ತಾವು ಮುಂದುವರಿಸುತ್ತೇವೆ ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ರಾಜ್ಯಸಭೆಯ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾದ ಎಂಟು ಪ್ರತಿಪಕ್ಷ ನಾಯಕರು ಅಮಾನತನ್ನು ಹಿಂದೆಗೆದುಕೊಳ್ಳುವಂತೆ ಆಗ್ರಹಿಸಿದರು.
ಸದನದ ಸೂಕ್ತ ಕಾರ್ಯನಿರ್ವಹಣೆ ಮತ್ತು ತಮ್ಮ ದುರ್ವತ್ರನೆಗಾಗಿ ಅವರಿಂದ ಕ್ಷಮಾಯಾಚನೆ ಹೊರತು ಅದು ಸಾಧ್ಯವಾಗದಿರಬಹುದು ಎಂದು ನಾಯ್ಡು ಪ್ರತಿಪಕ್ಷ ನಾಯಕರಿಗೆ ತಿಳಿಸಿ ದ್ದಾಗಿ ಬಲ್ಲ ಮೂಲಗಳು ತಿಳಿಸಿದವು.
'ಯಾವುದಕ್ಕೆ ಕ್ಷಮೆ? ಸಂಸತ್ತಿನಲ್ಲಿ ಜನತೆಯ ವಿಷಯಗಳನ್ನು ಎತ್ತಿದ್ದಕ್ಕಾಗಿ ಯೇ? ಎಂದಿಗೂ ಸಾಧ್ಯವಿಲ್ಲ 'ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟ್ನಲ್ಲಿ ಘೋಷಿಸಿದ್ದಾರೆ.
ಅಮಾನತನ್ನು ಹಿಂದೆಗೆದು ಕೊಳ್ಳ ಬೇಕೆಂಬ ತಮ್ಮ ಬೇಡಿಕೆ ಈಡೇರದ ಹಿನ್ನೆಲೆ ಯಲ್ಲಿ ಪ್ರತಿಭಟನೆಯಾಗಿ ರಾಜ್ಯಸಭೆಯ ದಿನದ ಕಲಾಪಗಳನ್ನು ಬಹಿಷ್ಕರಿಸಲು ಪ್ರತಿಪಕ್ಷ ಸದಸ್ಯರು ನಿರ್ಧರಿಸಿದರು.
ಆದಾಗ್ಯೂ ಲೋಕಸಭೆಯಲ್ಲಿ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷವು ಚರ್ಚೆ ಗಳಲ್ಲಿ ಭಾಗವಹಿಸಲು ನಿರ್ಧರಿಸಿತು.
ಚಳಿಗಾಲದ ಅಧಿವೇಶನದ ಅವಧಿಗೆ ಅಮಾನತುಗೊಂಡಿರುವ 12 ಸಂಸದರಲ್ಲಿ ಕಾಂಗ್ರೆಸ್ನ ಆರು,ಟಿಎಂಸಿ ಮತ್ತು ಶಿವಸೇನೆಯ ತಲಾ ಇಬ್ಬರು ಹಾಗೂ ಸಿಪಿಎಂ ಮತ್ತು ಸಿಪಿಐನ ತಲಾ ಓರ್ವರು ಸೇರಿದ್ದಾರೆ.
ಲೋಕಸಭೆಯಲ್ಲಿ ಟಿಎಂಸಿ ಸದಸ್ಯರು ಪ್ರತಿಭಟನೆ ಅಥವಾ ಸಭಾತ್ಯಾಗದಲ್ಲಿ ಭಾಗಿಯಾಗಿರಲಿಲ್ಲ. ರಾಜ್ಯಸಭೆಯಲ್ಲಿ ಪಕ್ಷದ ಸದಸ್ಯರು ಇತರ ಪ್ರತಿಪಕ್ಷ ಸದಸ್ಯರ ಸಭಾತ್ಯಾಗದ ಸ್ವಲ್ಪ ಹೊತ್ತಿನ ಬಳಿಕ ತಾವೂ ಸದನದಿಂದ ನಿರ್ಗಮಿಸಿದರು.
ಪ್ರತಿಪಕ್ಷ ಸದಸ್ಯರನ್ನಲ್ಲ,ಹಿಂದಿನ ಮಳೆಗಾಲದ ಅಧಿವೇಶನದಲ್ಲಿ ಕೆಲವು ಚರ್ಚೆಗಳಿಗೆ ತಡೆಯನ್ನೊಡ್ಡಿದ್ದ ಆಡಳಿತ ಪಕ್ಷದ 80 ಸಂಸದರನ್ನು ಅಮಾನತುಗೊಳಿಸಬೇಕು ಎಂದು ಟಿಎಂಸಿ ನಾಯಕ ಡೆರೆಕ್ ಒ'ಬ್ರಿಯಾನ್ ಹೇಳಿದರು.