ಭಟ್ಕಳ:ಇಲ್ಲಿನ ಕಡವಿನಕಟ್ಟೆಯ ವೆಂಕಟಾಪುರದ ರೈಲ್ವೆ ಸೇತುವೆ ಸಮೀಪ ಬುಧವಾರದಂದು ಬೆಳಿಗ್ಗೆ 9.30ರ ಸುಮಾರಿಗೆ ವೃದ್ಧ ಮಹಿಳೆಯೋರ್ವಳು ರೈಲು ಹಳಿ ದಾಟುತ್ತಿದ್ದ ಸಂಧರ್ಭದಲ್ಲಿ ಎಕ್ಸಪ್ರೇಸ್ ರೈಲೊಂದು ಬಡಿದು ವೃದ್ದ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.
ಮೃತ ವೃದ್ಧ ಮಹಿಳೆ ಜಟ್ಟಮ್ಮ ದುರ್ಗಪ್ಪ ನಾಯ್ಕ(82) ಇಲ್ಲಿನ ಹುರುಳಿಸಾಲಿನ ನಿವಾಸಿ ಎಂದು ತಿಳಿದು ಬಂದಿದೆ. ಜಟ್ಟಮ್ಮ ನಾಯ್ಕ ಬುಧವಾರದಂದು ಕಂಡೆಕೊಡ್ಲಿನ ತನ್ನ ಮೊಮ್ಮಗಳ ಮನೆಗೆ ರೈಲ್ವೆ ಬ್ರೀಜ್ನಿಂದ ಪಕ್ಕದ ರಸ್ತೆಗೆ ದಾಟುತ್ತಿದ್ದ ವೇಳೆ ಮಂಗಳುರಿನಿಂದ ಗೋವಾ ಕಡೆಗೆ ಸಂಚರಿಸುತ್ತಿದ್ದ ದುರಂತ ಎಕ್ಸಪ್ರೆಸ್ಸ ರೈಲು ಬಂದು ಬಡಿದಿದೆ. ಬಡಿತದ ರಭಸಕ್ಕೆ ಜಟ್ಟಮ್ಮ ನಾಯ್ಕ ದೇಹ ರೈಲು ಹಳಿಯಿಂದ 50ಮೀ. ದೂರದಲ್ಲಿ ಛಿದ್ರ ಛಿದ್ರವಾಗಿ ಬಿದ್ದಿದ್ದು, ಗುರುತು ಪತ್ತೆಯಾಗದ ಸ್ಥಿತಿಯಲ್ಲಿತ್ತು. ಇದೇ ವೇಳೆ ರೈಲ್ವೆ ಇಲಾಖೆಯಲ್ಲಿ ಹಳಿ ಕೆಲಸ ಮಾಡುವವರು ಮಹಿಳೆ ಮೃತ ಪಟ್ಟಿರುವ ಬಗ್ಗೆ ಮಾಹಿತಿ ತಿಳಿಸಿದ್ದಾರೆ. ತಕ್ಷಣಕ್ಕೆ ಸ್ಥಳಿಯರು ಸ್ಥಳಕ್ಕೆ ಬಂದಿದ್ದು ಜಟ್ಟಮ್ಮ ನಾಯ್ಕ ದೇಹದ ಗುರುತು ಪತ್ತೆಯಾಗದೇ ವಿಳಂಬವಾಯಿತು. ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದು ಜಟ್ಟಮ್ಮ ನಾಯ್ಕ ದೇಹವನ್ನು ಸರಕಾರಿ ಆಸ್ಪತ್ರೆ ಕರೆತರಲಾಗಿದ್ದು ಈ ವೇಳೆ ತಾಲೂಕಾಸ್ಪತ್ರೆ ಡ್ಯೂಟಿಯಲ್ಲಿದ್ದ ವೈದ್ಯ ಜನಾರ್ಧನ ಮೋಗೇರ ನಗರ ಠಾಣಾ ವ್ಯಾಪ್ತಿಗೆ ಸಂಬಂಧವಿಲ್ಲವಾಗಿದ್ದು ಇದು ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಬರಲಿದೆ. ಇದರಿಂದ ಮರಣೋತ್ತರ ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದು ಜಟ್ಟಮ್ಮ ನಾಯ್ಕ ಕುಟುಂಬಸ್ಥರು ಹಾಗೂ ವೈದ್ಯರ ನಡುವೆ ಕೆಲ ಕಾಲ ಮಾತಿಕ ಚಕಮಕಿ ಉಂಟಾಯಿತು. ನಂತರ ತಾಲೂಕಾಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಮರಣೋತ್ತರ ಪರೀಕ್ಷೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದರು.
ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಜಟ್ಟಮ್ಮ ನಾಯ್ಕ ಪುತ್ರ ಜಟ್ಟ ದುರ್ಗಪ್ಪ ನಾಯ್ಕ ದೂರು ದಾಖಲಿಸಿದ್ದಾರೆ.