ಕಾರವಾರ: ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬAದಿಸಿದAತೆ, ಜಿಲ್ಲೆಯಲ್ಲಿ ಏಪ್ರಿಲ್ 12 ರಿಂದ ನಾಮಪತ್ರಗಳ ಸಲ್ಲಿಕೆ ಆರಂಭಗೊಳ್ಳಲಿದ್ದು, ಈ ಕುರಿತಂತೆ ಎಲ್ಲಾ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಬೆಳಗ್ಗೆ 10 ಗಂಟೆಗೆ ನಾಮಪತ್ರ ಸಲ್ಲಿಕೆಗೆ ಅಧಿಸೂಚನೆ ಹೊರಡಿಸಲಿದ್ದು ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರಗಳನ್ನು ಸ್ವೀಕರಿಸಲಾಗುವುದು. ಈಗಾಗಲೇ 4 ರಾಜಕೀಯ ಪಕ್ಷಗಳು ಮತ್ತು 15 ಪಕ್ಷೇತರರು ನಾಮಪತ್ರಗಳನ್ನು ಪಡೆದಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆಯಲ್ಲಿ ಅಭ್ಯರ್ಥಿಯೊಂದಿಗೆ ಗರಿಷ್ಠ 4 ಮಂದಿಗೆ ಮಾತ್ರ ಚುನಾವಣಾಧಿಕಾರಿಗಳ ಕೊಠಡಿಗೆ ಪ್ರವೇಶವಿದ್ದು, ಕಚೇರಿಯ 100 ಮೀ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ ಎಂದರು.
ನಾಮಪತ್ರಗಳ ಸಲ್ಲಿಕೆಗೆ ಏಪ್ರಿಲ್ 19 ಕೊನೆಯ ದಿನವಾಗಿದ್ದು, 20 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರಗಳನ್ನು ಹಿಂಪಡೆಯಲು 22 ಕೊನೆಯ ದಿನವಾಗಿದ್ದು,ಮೇ 7 ರಂದು ಮತದಾನ ನಡೆಯಲಿದೆ ಎಂದರು.
ಜಿಲ್ಲೆಯಲ್ಲಿ 85 ವರ್ಷ ಮೇಲ್ಪಟ್ಟ 15,660 ಮಂದಿಯಲ್ಲಿ 2,977 ಮತ್ತು 24,090 ವಿಕಲಚೇತನರಲ್ಲಿ 1,978 ಮಂದಿ ಮನೆಯಿಂದ ಮತದಾನ ಮಾಡಲು ಒಪ್ಪಿಗೆ ತಿಳಿಸಿದ್ದಾರೆ. 18 ರಿಂದ 19 ವಯೋಮಾನದ 41,494 ಮಂದಿ ಯುವ ಮತದಾರರು ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ ಎಂದರು.
ಜಿಲ್ಲೆಯಲ್ಲಿ ಚುನಾವಣಾ ಅಕ್ರಮಗಳನ್ನು ತಡೆಯಲು 25 ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದ್ದು, ಇದುವರೆಗೆ ರೂ.2,10,04,027 ಮೊತ್ತದ 95,449 ಲೀ ಮದ್ಯ, ರೂ.68,500 ಮೊತ್ತದ ಮಾದಕ ವಸ್ತುಗಳು, ರೂ.35,49,000 ಮೌಲ್ಯದ ಉಚಿತ ಉಡುಗೊರೆಗಳು, ರೂ.31,31,200 ರೂ ನಗದು ವಶಪಡಿಸಿಕೊಂಡಿದ್ದು, ವಶಪಡಿಕೊಂಡಿರುವ ವಸ್ತುಗಳು ಮತ್ತು ನಗದಿನ ಒಟ್ಟು ಮೌಲ್ಯ ರೂ.2,55,23,227 ಆಗಿದ್ದು, ಅಬಕಾರಿ ಇಲಾಖೆವತಿಯಿಂದ 437 ಮತ್ತು ಪೊಲೀಸ್ ಇಲಾಖೆವತಿಯಿಂದ 43 ಎಫ್.ಐ.ಆರ್. ಗಳನ್ನು ದಾಖಲಿಸಲಾಗಿದೆ ಎಂದರು.
ಲೋಕಸಭಾ ವ್ಯಾಪ್ತಿಯಲ್ಲಿ ಪ್ರಸ್ತುತ 16,38,540 ಮತದಾರರಿದ್ದು, ಏಪ್ರಿಲ್ 19 ರಂದು ಅಂತಿಮ ಮತದಾರರ ಸಂಖ್ಯೆ ಲಭ್ಯವಾಗಲಿದೆ. ಮನೆಯಿಂದಲೇ ಮತದಾನ ಮಾಡಲು ಒಪ್ಪಿಗೆ ನೀಡಿರುವವರು ಮತದಾನದ ದಿನದಂದು ಮತಗಟ್ಟೆಗೆ ತೆರಳಿ ಮತ ಚಲಾಯಿಸಲು ಅವಕಾಶವಿರುವುದಿಲ್ಲ.
ಮತಗಟ್ಟೆಯಲ್ಲಿ ಹಿರಿಯ ನಾಗರೀಕರು, ವಿಕಲಚೇತನರು ಮತ್ತು ಗರ್ಭಿಣಿಯರಿಗೆ ಮತ ಚಲಾಯಿಸಲು ಆದ್ಯತೆಯಲ್ಲಿ ಅವಕಾಶ ನೀಡಲಾಗುವುದು ಎಂದರು.
ಜಿಲ್ಲೆಗೆ ಈಗಾಗಲೇ ಚುನಾವಣೆಯ ಸಾಮಾನ್ಯ ವೀಕ್ಷರನ್ನಾಗಿ ರಾಜೀವ್ ರತನ್, ವೆಚ್ಚ ವೀಕ್ಷಕರನ್ನಾಗಿ ಪ್ರಶಾಂತ್ ಸಿಂಗ್ ಹಾಗೂ ಪೊಲೀಸ್ ವೀಕ್ಷಕರನ್ನಾಗಿ ಭನ್ವರ್ ಲಾಲ್ ಮೀನಾ ಅವರನ್ನು ನೇಮಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಪಾರದರ್ಶಕ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಸಲ್ಲಿಸುವ ವಿವಿಧ ಮನವಿಗಳ ಕುರಿತಂತೆ ಪರಿಶೀಲಿಸಿ , ತಕ್ಷಣವೇ ಅಗತ್ಯ ಅನುಮತಿಗಳನ್ನು ನೀಡಲಾಗುತ್ತಿದೆ. ಮತದಾರರ ಉಚಿತ ಸಹಾಯವಾಣಿ 1950 ಗೆ ಸಲ್ಲಿಕೆಯಾಗಿರುವ 323 ದೂರುಗಳು ಹಾಗೂ ಸಿ ವಿಜಿಲ್ ನಲ್ಲಿ ಸಲ್ಲಿಕೆಯಾಗಿರುವ 227 ದೂರುಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಲಾಗಿದೆ. ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ಸಿಬ್ಬಂದಿಗಳಿಗೆ ಏಪ್ರಿಲ್ 16 ರಂದು ಮೊದಲ ಹಂತದ ತರಬೇತಿ ಆಯೋಜಿಸಲಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್ ಉಪಸ್ಥಿತರಿದ್ದರು.