ಮುರುಢೇಶ್ವರ-ಬೆಂಗಳೂರು ”ಪಲ್ಲಕ್ಕಿ’ ಸಾರಿಗೆ ಸ್ಲಿಪರ್ ಬಸ್ ಲೋಕಾರ್ಪಣೆ
ಭಟ್ಕಳ: ಬಿಜೆಪಿ ಸರ್ಕಾರ ಇದ್ದಾಗ ನಾಲ್ಕು ವರ್ಷದಲ್ಲಿ ಒಂದೇ ಒಂದು ಬಸ್ಸು ಬರಲಿಲ್ಲ. ಇದ್ದ ಎಲ್ಲ ಬಸ್ಸುಗಳನ್ನು ಮಾರಿಕೊಂಡಿದ್ದಾರೆ. ಹೀಗಾಗಿ ಜನರಿಗೆ ಓಡಾಡಲು ಬಸ್ಸುಗಳೇ ಇಲ್ಲದ ಹಾಗೆ ಮಾಡಿದ್ದಾರೆ ಎಂದು ಉ.ಕ.ಜಿಲ್ಲಾ ಉಸ್ತುವಾರಿ ಹಾಗೂ ಮೀನುಗಾರಿಕೆ, ಬಂದರು ಜಲಸಾರಿಗೆ ಸಚಿವ ಮಾಂಕಾಳ್ ವೈದ್ಯ ಆರೋಪಿಸಿದ್ದಾರೆ.
ಅವರು ಶನಿವಾರ ಸಂಜೆ ಭಟ್ಕಳದಲ್ಲಿ ಮುರುಢೇಶ್ವರ-ಬೆಂಗಳೂರು ಎರಡು ನೂತನ ನಾನ್ ಎಸಿ ಸ್ಲಿಪರ್ ಪಲ್ಲಕ್ಕಿ ಸಾರಿಗೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಕೇವಲ ಬೆಂಗಳೂರಿಗೆ ಹೋಗುವ ಬಸ್ಸು ಮಾತ್ರವಲ್ಲ ಹಳ್ಳಿ ಹಳ್ಳಿಗೂ ಹೋಗುವ ಬಸ್ಸುಗಳನ್ನು ನಿಲ್ಲಿಸಿದ್ದಾರೆ.ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಬಂದಾಗಿನಿಂದ ಸಾರಿಗೆ ಸಂಸ್ಥೆಗೆ ಶಕ್ತಿ ತುಂಬು ಕೆಲಸ ಮಾಡಿದೆ. ಇಂದಿನಿಂದ ರಾಜ್ಯದಲ್ಲಿ ಹೊಸ ಬಸ್ಸುಗಳು ಸಂಚರಿಸಲಿವೆ. ೫ಸಾವಿರ ಹೊಸ ಬಸ್ಸುಗಳು ರಾಜ್ಯಕ್ಕೆ ಬರಲಿವೆ. ಎಂದ ಅವರು ಹಂತ ಹಂತವಾಗಿ ಬಸ್ಸುಗಳು ಓಡಾಡಲಿದ್ದು ಉತ್ತರಕನ್ನಡ ಜಿಲ್ಲೆಗೆ ಇನ್ನೂ ೫೦ ನೂತನ ಬಸ್ಸುಗಳು ಬರಲಿವೆ ಎಂದರು.
ಕೆ.ಎಸ್.ಆರ್.ಟಿ.ಸಿ ಗೆ ಶಕ್ತಿ ತುಂಬಿದ ಶಕ್ತಿ ಯೋಜನೆ: ರಾಜ್ಯದಲ್ಲಿ ಮಹಿಳೆರಿಗಾಗಿ ಉಚಿತ ಬಸ್ ಪ್ರಯಾಣ ಯೋಜನೆಯೂ ಮಹಿಳೆಯರ ಜೊತೆಗೆ ಕೆ.ಎಸ್.ಆರ್.ಟಿ.ಸಿ ಸಂಸ್ಥೆಗೂ ಶಕ್ತಿ ತುಂಬಿದೆ ಎಂದ ಸಚಿವರು ಪ್ರತಿ ದಿನ ೩೫ಲಕ್ಷ ಆದಾಯ ಬರುತ್ತಿದೆ. ಅದರಲ್ಲಿ ಮಹಿಳೆಯರದ್ದೇ ಜಾಸ್ತಿ. ಸಾರಿಗೆ ಸಂಸ್ಥೆಗೆ ಸರ್ಕಾರ ಹಣ ಕೊಡುತ್ತಿದೆ. ಇದರಿಂದಾಗಿ ಸಾರಿಗೆ ಸಂಸ್ಥೆಗೆ ಶಕ್ತಿ ಬಂದಿದೆ. ವೇತನ ಕೊಡಲು ಆಗದೆ ಸಂಸ್ಥೆ ನಷ್ಟದಲ್ಲಿತ್ತು. ಈಗ ಸಮಯಕ್ಕೆ ಸರಿಯಾಗಿ ಚಾಲಕರಿಗೆ ವೇತನ ನೀಡಲಾಗುತ್ತಿದೆ. ಯಾವುದೇ ರೀತಿಯಲ್ಲಿ ಸಾಮಾನ್ಯ ಜನರಿಗೆ ತೊಂದರೆ ಆಗದ ರೀತಿಯಲ್ಲಿ ಸರ್ಕಾರ ನೋಡಿಕೊಳ್ಳುತ್ತಿದೆ.
ಹಳ್ಳಿಗಳಲ್ಲಿ ಬಸ್ಸ ಇಲ್ಲದ ಕಾರಣ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ. ಬಿಜೆಪಿಯವರು ಮೂಲೆಗೆ ಹಾಕಿದ ಹಳೆಯ ಬಸ್ಸುಗಳನ್ನು ದುರಸ್ತಿಗೊಳಿಸುತ್ತಿದ್ದೇವೆ. ಅದರ ಜೊತೆಗೆ ಹೊಸ ಬಸ್ಸುಗಳೂ ಕೂಡ ತರಿಸುತ್ತಿದ್ದೇವೆ. ಭಟ್ಕಳದಲ್ಲಿ ಹಳ್ಳಿ ಭಾಗಕ್ಕೆ ಪ್ರತಿ ಐದು ನಿಮಿಷಕ್ಕೆ ೨೦ ಬಸ್ಸುಗಳು ಪರಿಸರ ಸ್ನೇಹಿ ಬಸ್ಸುಗಳನ್ನು ಕೊಟ್ಟಿದ್ದೇ. ಆದರೆ ಈಗ ಅವು ಎಲ್ಲಿ ಹೋಗಿದ್ದೇವೆ ಎನ್ನುವುದು ಗೊತ್ತಿಲ್ಲ ಎಂದರು.
ಭಟ್ಕಳ ಘಟಕದಿಂದ ಶನಿವಾರ ಆರಂಭಗೊಂಡಿರುವ ನೂತನ ನಾನ್ ಎಸಿ ಸ್ಲಿಪರ್ ಪಲ್ಲಕ್ಕಿ ಸಾರಿಗೆ ಬಸ್ಸು ಪ್ರತಿ ದಿನ ಸಂಜೆ ೭.೧೫ಕ್ಕೆ ಮುರುಢೇಶ್ವರದಿಂದ ಭಟ್ಕಳ, ಕೊಲ್ಲೂರು, ಶಿವಮೊಗ್ಗ ಮಾರ್ಗವಾಗಿ ಮರುದಿನ ಬೆಳಿಗ್ಗೆ ೬.೦೦ಗಂಟೆಗೆ ಬೆಂಗಳೂರು ತಲುಪಲಿದೆ. ಹಾಗೂ ಬೆಂಗಳೂರಿನಿಂದ ಪ್ರತಿದಿನ ಸಂಜೆ ೭.೧೫ಕ್ಕೆ ನಿರ್ಗಮಿಸಿ ಮುಂಜಾನೆ ೬.೦೦ಗಂಟೆಗೆ ಮುರುಢೇಶ್ವರ ತಲುಪಲಿದೆ.