ಮುಂಬೈ: ಅಸ್ಸಾಮಿನಲ್ಲಿರುವ ಸಚಿವ ಏಕನಾಥ ಶಿಂದೆ ನೇತೃತ್ವದ ಬಂಡಾಯ ಶಾಸಕರ ಬಣಕ್ಕೆ ಶಿವಸೇನೆಯ ಇನ್ನೋರ್ವ ಶಾಸಕ ಸೇರಿದ್ದಾರೆ. ಇದರಿಂದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಗೆ ಮತ್ತೊಂದು ಹಿನ್ನಡೆ ಉಂಟಾಗಿದೆ.
ಬಂಡಾಯ ಶಾಸಕರು ಕೆಲವು ದಿನಗಳಿಂದ ತಂಗಿರುವ ಗುವಾಹಟಿಯ ಐಷಾರಾಮಿ ಹೊಟೇಲ್ಗೆ ಶಾಸಕ ದಿಲೀಪ್ ಲಾಂಡೆ ಪ್ರವೇಶಿಸುತ್ತಿರುವ ವೀಡಿಯೊವನ್ನು ಶಿಂದೆ ಅವರ ಕಾರ್ಯಾಲಯ ಶುಕ್ರವಾರ ಶೇರ್ ಮಾಡಿದೆ. ಮುಂಬೈಯ ಚಾಂದಿವಲಿ ವಿಧಾನ ಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಲಾಂಡೆ ಅವರ ನಡೆಯಿಂದ ಬಂಡಾಯ ಬಣದ ಶಿವಸೇನೆ ಶಾಸಕರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ. ಒಟ್ಟು 55 ಶಿವಸೇನೆಯ ಶಾಸಕರು ಹಾಗೂ 12 ಪಕ್ಷೇತರ ಶಾಸಕರಲ್ಲಿ ತನಗೆ 40 ಶಾಸಕರ ಬೆಂಬಲ ಇದೆ ಎಂದು ಶಿಂದೆ ಪ್ರತಿಪಾದಿಸಿದ್ದಾರೆ.
ತನ್ನ ಬಣ ನಿಜವಾದ ಶಿವಸೇನೆ ಎಂದು ಶಿಂದೆ ಅವರು ಹೇಳಿದ್ದಾರೆ. ಅಲ್ಲದೆ, 37 ಶಾಸಕರು ಸಹಿ ಹಾಕಿರುವ ಪತ್ರವನ್ನು ಅವರು ರಾಜ್ಯ ವಿಧಾನ ಸಭೆಯ ಉಪ ಸ್ಪೀಕರ್ ನರಹರಿ ಝಿಲ್ವಾಲ್ ಹಾಗೂ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರಿಗೆ ರವಾನಿಸಿದ್ದಾರೆ.