ಹೊನ್ನಾವರ : ಮುಂಬರುವ ಜಿಲ್ಲಾ ಮತ್ತು ತಾಲೂಕಾ ಪಂಚಾಯತ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲವು ಖಚಿತವಾಗಿದ್ದು, ಸ್ಥಳೀಯ ಪಕ್ಷದ ನಿಷ್ಠಾವಂತ, ಪ್ರಾಮಾಣಿಕ ಕಾರ್ಯಕರ್ತರನ್ನು ಗುರುತಿಸಿ ಟಿಕೇಟ್ ನೀಡಲಾಗುವುದು ಎಂದು ಮಾಜಿ ಶಾಸಕಿ ಶ ಶಾರದಾ ಶೆಟ್ಟಿ ಇಂಗಿತ ವ್ಯಕ್ತಪಡಿಸಿದರು.
ಅವರು ಸೋಮವಾರ ಹೊನ್ನಾವರ ಬ್ಲಾಕ್ ಮಹಿಳಾ ಕಾಂಗ್ರೆಸ್ ಹಳದೀಪುರದ ರಾಜೇಶ್ವರಿ ಕ್ಯಾಶಿವ್ ಪ್ಯಾಕ್ಟರಿ ಸಭಾಭವನದಲ್ಲಿ ಏರ್ಪಡಿಸಿದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಗ್ರಾಮೀಣ ಭಾಗದ ಪಂಚಾಯತ ವಿಕೇಂದ್ರಿಕರಣ ವ್ಯವಸ್ಥೆಯನ್ನು ಪ್ರಧಾನಿ ದಿ. ರಾಜೀವ ಗಾಂದಿ ಜಾರಿಯಲ್ಲಿ ತಂದರೆ, ರಾಜ್ಯಾಧ್ಯಂತ ಸ್ತ್ರೀ-ಶಕ್ತಿ ಬಲಪಡಿಸುವ ಮೂಲಕ ಎಸ್. ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರಕಾರ ಮಹಿಳೆಯರಿಗೆ ಬಲ ನೀಡಿತು ಎಂದರು.
ಪಂಚಾಯತ ಚುನಾವಣೆಗಳಲ್ಲಿ ಶೇ ೫೦ ಮೀಸಲಾತಿಯನ್ನು ಮಹಿಳೆಯರಿಗೆ ನೀಡುವ ಮೂಲಕ ಸಿದ್ದರಾಮಯ್ಯ ಸರಕಾರ ಕ್ರಾಂತಿಕಾರಿ ನೀರ್ಣಯ ಕೈಗೊಂಡಿತು. ಪಂಚಾಯತ ವ್ಯವಸ್ಥೆ ಬಲಗೊಳ್ಳಲು ಕಾಂಗ್ರೆಸ್ ಪಕ್ಷದ ಮುಂದಾಲೋಚನೆಯೇ ಪ್ರಮುಖವಾಗಿದ್ದು ಮುಂದಿನ ಜಿಲ್ಲಾ ಮತ್ತು ತಾಲೂಕು ಪಂಚಾಯತ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಹೊಡೆಯುವುದರಲ್ಲಿ ಎರಡು ಮಾತಿಲ್ಲಾ ಎಂದರು.
ಹೊನ್ನಾವರ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತಾ ಗಾಂವಕರ, ಕೇಂದ್ರದ ಮೋದಿ ಮತ್ತು ರಾಜ್ಯದ ಬಿ.ಜೆ.ಪಿ. ಸರಕಾರ ಜನರಿಗೆ ಸುಳ್ಳು ಆಶ್ವಾಸನೆ ನೀಡುತ್ತಿದ್ದು, ಬಡವರ ಕಣ್ಣೀರೊರೆಸಲು ವಿಫಲವಾಗಿದೆ ಎಂದರು. ಬರೇ ಬಾಯಿ ಮಾತಿನಲ್ಲಿ ಅಚ್ಛೇ ದಿನ ಆಯೇಗಾ ಎಂದು ಮಂತ್ರ ಪಠಿಸುತ್ತಿದ್ದು, ಮೋದಿ ಸರಕಾರದ ಮಾತಿಗೂ ಕೃತಿಗೂ ಸಂಬಂಧವೇ ಇಲ್ಲಾ ಎಂದು ಹೇಳಿದರು.
ಕೋರೋನಾ ಸಂದರ್ಭದಲ್ಲಿ ಮಹಿಳೆಯರು, ಮಕ್ಕಳು ದಿನ ಕಳೆಯಲು ಪರದಾಡುತ್ತಿದ್ದರೇ ರಾಜ್ಯ ಸರಕಾರ ವೈದ್ಯಕೀಯ ಉಪಕರಣಗಳ ವಿಲೇವಾರಿಯಲ್ಲಿ ವ್ಯಾಪಕ ಭೃಷ್ಠಚಾರದಲ್ಲಿ ತೊಡಗಿತ್ತು ಎಂದು ಆಪಾದಿಸಿದರು.
ರಾಜ್ಯದ ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವೆಯಾಗಿದ್ದ ಶಶಿಕಲಾ ಜೊಲ್ಲೆ ಮಕ್ಕಳ ಮೊಟ್ಟೆ ವಿತರಿಸುವಲ್ಲಿ ವ್ಯಾಪಕ ಭ್ರಷ್ಠಾಚಾರ ಎಸೆಗಿರುವುದು ಕರ್ನಾಟಕದ ಜನರಿಗೆ ನೋವಾಗಿದೆ ಎಂದರು.
ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಬಿ.ಜೆ.ಪಿ. ಸರಕಾರ ಆಡಳಿತದಲ್ಲಿದ್ದೂ, ಕಾಂಗ್ರೆಸ್ ಪಕ್ಷದ ಸಂಘಟನೆಗೆ ಬೆರಳೆಣಿಕೆಯಷ್ಟು ಕಾರ್ಯಕರ್ತರು ಬರುತ್ತಿರಲಿಲ್ಲ. ಆದರೆ ಇಂದು ವಾತಾವರಣ ಬದಲಾಗಿದೆ. ಬಿ.ಜೆ.ಪಿ ಸರಕಾರದ ಜನ ವಿರೋಧಿ ನೀತಿಯಿಂದ ಜನ ಕಂಗಾಲಾಗಿದ್ದಾರೆ. ಇತ್ತೀಚಿಗೆ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಜನ, ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಬರುವುದನ್ನು ನೋಡಿದರೆ ಇನ್ನೂ ಮುಂದಿನ ದಿನದಲ್ಲಿ ದೇಶ, ರಾಜ್ಯ ಮತ್ತು ಪಂಚಾಯತ ಮಟ್ಟದವರೆಗೂ ಕಾಂಗ್ರೆಸ್ ಪಕ್ಷ ಜಯಭೇರಿ ಹೊಡೆಯವುದರಲ್ಲಿ ಸಂಶಯವಿಲ್ಲಾ ಎಂದರು.
ಸಮಾವೇಶದಲ್ಲಿ ಕಳೆದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ವಿಜಯಶಾಲಿ ಆಗಿರುವ ಮಹಿಳಾ ಗ್ರಾಮ ಪಂಚಾಯತ ಸದಸ್ಯರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ಸಮಾವೇಶದಲ್ಲಿ ಸೇರಿದ ಎಲ್ಲಾ ಮಹಿಳೆರಿಗೆ ಅರಿಶಿಣ ಕುಂಕುಮ ವಿತರಿಸಲಾಯಿತು.
ವೇದಿಕೆಯಲ್ಲಿ ಹೊನ್ನಾವರ ತಾಲೂಕಾ ಕಾಂಗ್ರೇಸ್ ಹಿಂದುಳಿದ ವರ್ಗದ ಅಧ್ಯಕ್ಷ ಕೆ.ಎಚ್.ಗೌಡ, ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದ ಅಧ್ಯಕ್ಷ ಜಕ್ರಿಯಾ ಶೇಖ್, ಬ್ಲಾಕ್ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ದಾಮೋದರ ನಾಯ್ಕ, ಇಂದಿರಾ ಪ್ರಿಯದರ್ಶನಿ ಅಧ್ಯಕ್ಷೆ ಸಾಯಿರಾ ಬಾನು ಉಪಸ್ಥಿತಿದ್ದರು. ಹೊನ್ನಾವರ ಬ್ಲಾಕ್ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಪುಷ್ಪಾ ಮಹೇಶ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರಿ ಪರ್ಹಿನ್ ವಂದಿಸಿದ್ದರು.