ಕಾರವಾರ: ಬಿಜೆಪಿಯವರು ಗಲಭೆ ಮಾಡದೇ ಯಾವ ಚುನಾವಣೆ ಗೆದ್ದಿದ್ದು ಇದೆ. ಅವರು ಚುನಾವಣೆಗಾಗಿ ಏನು ಬೇಕಾದರೂ ಮಾಡೋದಕ್ಕೆ ರೆಡಿ ಇದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಹೇಳಿದರು. ಅವರು ಸೋಮವಾರ ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಬಿಜೆಪಿಯವರದ್ದು ಮೂರು ಅಜಂಡವಿದೆ. ಸುಳ್ಳು ಹೇಳೋದು, ಗಲಭೆ ಮಾಡೋದು, ದೇವರ ಹೆಸರಲ್ಲಿ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುವುದು. ಅವರೆಲ್ಲಾ ರಾಮನ ನಿಜ ಭಕ್ತರಾಗಿದ್ದರೆ ಹೀಗೆ ಮಾಡುವುದಿಲ್ಲ. ನಾನು ಕೂಡಾ ಶ್ರೀ ರಾಮನ ಭಕ್ತ, ನಾನು ಭಟ್ಕಳದಲ್ಲಿ ರಾಮ ಮಂದಿರ ಕಟ್ಟಿಸಿದ್ದೇನೆ. ಶ್ರೀ ರಾಮ ಸಮಸ್ತ ಹಿಂದುಗಳ ಆರಾಧ್ಯ, ಕೇವಲ ಬಿಜೆಪಿಗೆ ಮಾತ್ರ ಅಲ್ಲ ಎಂದು ಹೇಳಿದರು.
ಇದೀಗ ರಾಮಮಂದಿರ ಉದ್ಘಾಟನೆ ಆಗದೇ ಮಂತ್ರಾಕ್ಷತೆ ಕೊಡುತಿದ್ದಾರೆ. ಪೂಜೆಯೇ ಆಗದೇ ಮಂತ್ರಾಕ್ಷತೆ ಹೇಗೆ ಕೊಡುತ್ತಾರೆ. ಅಕ್ಷತೆ ಕೊಟ್ಟು ಮಂತ್ರಾಕ್ಷತೆ ಕೊಟ್ಟು ಕರೆಯುವುದೇನೋ ಸರಿ, ಮೋದಿ ಪೋಟೋ ಹಾಕಿ ಪ್ರಚಾರ ಮಾಡುವುದು ಏಕೆ. ಅಕ್ಷತೆ ಕೊಡುವಲ್ಲಿ ಮೋದಿ ವಿಚಾರ ಏಕೆ ಹೇಳುತ್ತಾರೆ, ಯಾಕೆ ಮೋದಿ, ಯೋಗಿಯ ಫೋಟೋ ಕಟೌಟ್ ಹಾಕಿದ್ದಾರೆ ಎಂದು ಪ್ರಶ್ನಿಸಿದರು.
ಇದು ಯಾರೋಬ್ಬರ ದುಡ್ಡಲ್ಲ, ಹಣ ನಾವು ಕೂಡ ಕೊಟ್ಟಿದ್ದೇವೆ, ಈ ಎಲ್ಲಾ ನಾಟಕವನ್ನು ಬಿಜೆಪಿಯವರು ಬಂದ್ ಮಾಡುವುದು ಒಳ್ಳೆಯದು. ಬಿಜೆಪಿಯವರದ್ದು ಬೋಗಸ್ ಭಕ್ತಿ. ನಿಜವಾದ ಭಕ್ತರು ಗಲಾಟೆ ಮಾಡುವುದಿಲ್ಲ. ರಾಜ್ಯದಲ್ಲಿ ನಾವು ಕೂಡ ಪೊಲೀಸ್ ಬಂದೋಬಸ್ತ್ ಮಾಡಿದ್ದೇವೆ ಎಂದು ಸಚಿವ ಮಂಕಾಳು ವೈದ್ಯ ಹೇಳಿದರು.