ಮಕ್ಕಳಿಗೆ ಮೊಟ್ಟೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ; 10 ಸಾವಿರ ಅತಿಥಿ ಶಿಕಕರ ನೇಮಕ; ಮಧು ಬಂಗಾರಪ್ಪ
ಮಂಡ್ಯ: ಶಿಕ್ಷಕರ ಕೊರತೆ ನೀಗಿಸಲು ಹೆಚ್ಚುವರಿಯಾಗಿ 10 ಸಾವಿರ
ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ನಗರದ ಹೊಸಹಳ್ಳಿಯ ಸರಕಾರಿ ಪ್ರೌಢಶಾಲೆಯಲ್ಲಿ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿನ 1ರಿಂದ 10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಪೂರಕ ಪೋಷಣ ಪೌಷ್ಟಿಕ ಆಹಾರ(ಮೊಟ್ಟೆ, ಚಿಕ್ಕಿ, ಬಾಳೆಹಣ್ಣು ವಿತರಣೆಯ ರಾಜ್ಯಮಟ್ಟದ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ಈಗಾಗಲೇ 30 ಸಾವಿರ ಅತಿಥಿ ಶಿಕ್ಷಕರನ್ನು ಪಡೆಯಲಾಗಿದೆ. ಶಾಲೆಗಳಲ್ಲಿ ಶಿಕ್ಷಕರ ಕೊರತೆ ಉಂಟಾಗಬಾರದು ಎಂದು ಇನ್ನೂ 10 ಸಾವಿರ ಅತಿಥಿ ಶಿಕ್ಷಕರನ್ನು ಪಡೆಯಲು ಮುಖ್ಯಮಂತ್ರಿ ತಿಳಿಸಿದ್ದಾರೆ. ವರ್ಗಾವಣೆ ಕೋರಿದ್ದ 90 ಸಾವಿರ ಶಿಕ್ಷಕರ ಪೈಕಿ 31 ಸಾವಿರ ಶಿಕ್ಷಕರನ್ನು ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಗ್ಯಾರಂಟಿ ಯೋಜನೆಗಳು ಸೇರಿದಂತೆ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಹೊರಡಿಸಿದ್ದ ಅಂಶಗಳನ್ನು ಸರಕಾರ ಅನುಷ್ಠಾನಗೊಳಿಸುವ ಮೂಲಕ ನುಡಿದಂತೆ ನಡೆಯುತ್ತಿದೆ. ಎಲ್ಲ ಮಕ್ಕಳಿಗೂ ಮೊಟ್ಟೆ ವಿತರಿಸುವ ಪ್ರಸ್ತಾವ ಪ್ರಣಾಳಿಕೆಯಲ್ಲಿ ಇರದಿದ್ದರೂ
ಜಾರಿಗೊಳಿಸಿರುವುದು ಸರಕಾರಕ್ಕೆ ಗೌರವ ತಂದಿದೆ ಎಂದು ಅವರು ನುಡಿದರು.
ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಸರಕಾರ ಆರ್ಥಿಕವಾಗಿ ಹಿಂದುಳಿದ ವರು, ಮಹಿಳೆಯರು ಮತ್ತು ರೈತರಿಗೆ ಪೂರಕ ವಾದ ಯೋಜನೆಗಳನ್ನು ಜಾರಿಗೊಳಿಸು ತಿದೆ. ಗೃಹಲಕ್ಷ್ಮಿ ಯೋಜನೆಗೆ ಆ.30ರಂದು ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಶಾಸಕರಾದ ಪಿ.ರವಿಕುಮಾರ್, ರಮೇಶ್ಬಾಬು ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಮರಿತಿಬ್ಬೇಗೌಡ, ಮಧು ಜಿ.ಮಾದೇಗೌಡ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಆಯುಕ್ತ ಬಿ.ಬಿ.ಕಾವೇರಿ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಕ್ ತನ್ವಿ ಆಸಿಫ್, ಎಸ್ಪಿ ಎನ್.ಯತೀಶ್, ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಸರಕಾರಿ ಶಾಲೆ ದತ್ತು ನೀಡುವ ಪ್ರಸ್ತಾವ ಇಲ್ಲ; ಮಧು ಬಂಗಾರಪ್ಪ ಸ್ವಷ್ಟನೆ:
ಖಾಸಗಿ ಸಹಭಾಗಿತ್ವದಲ್ಲಿ ಸರಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಬಹುದು. ಆದರೆ, ಖಾಸಗಿಯವರಿಗೆ ದತ್ತು ಕೊಡುವ ಯಾವುದೇ ಪ್ರಸ್ತಾವ ಇಲಾಖೆಯ ಮುಂದಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.
ಸರಕಾರಿ ಶಾಲೆಗಳ ಖಾಸಗೀಕರಣ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರಕಾರಿ ಶಾಲೆಗಳನ್ನು ಖಾಸಗೀಕರಣ ಮಾಡುವುದು ಅಥವಾ ಖಾಸಗಿಯವರಿಗೆ ದತ್ತು ನೀಡುವುದು ಅಸಾಧ್ಯ ಎಂದರು.
ಶಿಕ್ಷಕರ ನೇಮಕಾತಿ ವಿಚಾರ ಹೈಕೋರ್ಟ್ನಲ್ಲಿದ್ದು ವರದಿ ಸಲ್ಲಿಸುವಂತೆ ಸೂಚಿಸಿದೆ. ತೀರ್ಪು ಬರುವವರೆಗೂ ನೇಮಕಾತಿ ಪತ್ರ ನೀಡದಂತೆ ಕೋರ್ಟ್ ಸೂಚಿಸಿದ್ದು, ಆ.28ರಂದು ಪ್ರಕರಣ ವಿಚಾರಣೆಗೆ ಬರಲಿದೆ. ತೀರ್ಪು ಬಂದ ನಂತರ ತ್ವರಿತಗತಿಯಲ್ಲಿ 13,500 ಶಿಕ್ಷಕರ ನೇಮಕಾತಿಗೆ ಕ್ರಮವಹಿಸಲಾಗುವುದು ಎಂದು ಅವರು ತಿಳಿಸಿದರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ) ಜಾರಿಯ ಹಿಂದೆ ಹಿಂದಿ ಭಾಷೆ ಹೇರುವ ಉದ್ದೇಶವಿದ್ದು, ಇದರಿಂದ ಕನ್ನಡ ಭಾಷೆಗೂ ಧಕ್ಕೆಯಾಗುತ್ತದೆ. ಹಿಂದಿ ಹೇರಿಕೆಯಿಂದ ಕನ್ನಡ ಭಾಷೆಯನ್ನೇ ಮರೆತುಬಿಡುವ ಸ್ಥಿತಿ ಬರಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.
ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಎನ್ಇಪಿಯನ್ನು ವಿರೋಧಿಸಿದ್ದೆವು, ಪಠ್ಯ ಪರಿಷ್ಕರಣೆ ಮಾಡುವುದಾಗಿ ತಿಳಿಸಿದ್ದೆವು. ಈ ಕಾರಣಕ್ಕಾಗಿ ನಾವಿಂದು ಅಧಿಕಾರದಲ್ಲಿ ಕುಳಿತಿದ್ದೇವೆ. ಮಕ್ಕಳ ಶಿಕ್ಷಣ ರಾಜಕೀಯ ಪಕ್ಷಗಳ ಸಿದ್ಧಾಂತದ ಮೇಲೆ ನಡೆಯಬಾರದು. ನಮ್ಮ ಸರಕಾರ ಶಿಕ್ಷಣದಲ್ಲಿ ಉತ್ತಮ ವಾತಾವರಣ ರೂಪಿಸಲು ಬದ್ಧವಾಗಿದೆ ಎಂದು ಅವರು ತಿಳಿಸಿದರು.
ಪ್ರತೀ ರಾಜ್ಯದಲ್ಲೂ ಕೂಡಾ ತನ್ನದೇ ಸಂಸ್ಕೃತಿ, ಭಾಷೆ, ಶಿಕ್ಷಣ ವ್ಯವಸ್ಥೆ ಇರುತ್ತದೆ. ಕೇಂದ್ರ ಸರಕಾರ ಒಂದು ರಾಜ್ಯದ ಸಂಸ್ಕೃತಿಯನ್ನು ಇನ್ನೊಂದು ರಾಜ್ಯದ ಮೇಲೆ ಹೇರುವ ಕೆಟ್ಟ ಕೆಲಸ ಮಾಡುತ್ತಿದೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದು ಎಲ್ಲ ರಾಜ್ಯಗಳ ಸಂಸ್ಕೃತಿ, ಭಾಷೆ ಹಾಗೂ ಶಿಕ್ಷಣಕ್ಕೆ ಗೌರವ ನೀಡಬೇಕು ಎಂದು ಅವರು ಹೇಳಿದರು.
Karnataka Govt Approves Appointment of 10,000 Guest Teachers